ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದ ಯಡದಂಟೆ ಉಪಗ್ರಾಮಕ್ಕೆ ಹೋಗುವ ಜಿಲ್ಲಾ ಪಂಚಾಯತ್ ಮುಖ್ಯ ರಸ್ತೆಯ ಪಕ್ಕ 10 ಅಡಿ ಆಳಕ್ಕೆ ಗುಂಡಿಯಾಗಿರುವುದು.
ಸೋಮವಾರಪೇಟೆ ತಾಲ್ಲೂಕಿನ ಹಂಚಿನಳ್ಳಿ ಗ್ರಾಮದಲ್ಲಿ ಕೊಲ್ಲಿಯ ನೀರು ರಸ್ತೆಯನ್ನಾಕ್ರಮಿಸಿ ಹರಿಯುತ್ತಿದೆ.
ಸೋಮವಾರಪೇಟೆ: ಜನ ಜಾನುವಾರು ತತ್ತರ
ಸೋಮವಾರಪೇಟೆ: ತಾಲ್ಲೂಕಿನಾದ್ಯಂತ ಮುಂಗಾರು ಮಳೆಗೆ ಜನ ಜಾನುವಾರುಗಳು ತತ್ತರಿಸಿ ಹೋಗಿದ್ದಾರೆ. ಶಾಂತಳ್ಳಿ ಹೋಬಳಿ ಪುಷ್ಟಗಿರಿ ಬೀದಳ್ಳಿ ಕುಮಾರಳ್ಳಿ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯೆಲ್ಲೆಡೆ ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು ಭಾರಿ ಗಾಳಿಯೊಂದಿಗೆ ಸುರಿಯುತ್ತಿರುವ ಮಳೆಗೆ ಜಾನುವಾರುಗಳು ಶೀತದಿಂದ ಸಾಯುತ್ತಿವೆ. ನದಿ ತೊರೆಗಳು ತುಂಬಿ ಹರಿಯುತ್ತಿದ್ದು ಭತ್ತದ ಗದ್ದೆಗಳಲ್ಲಿ ನೀರು ನಿಲ್ಲುತ್ತಿದೆ. ಪುಷ್ಪಗಿರಿ ಮತ್ತು ಮಲ್ಲಳ್ಳಿ ಜಲಪಾತಕ್ಕೆ ತೆರಳುವ ಮಾರ್ಗದ ಹಂಚಿನಳ್ಳಿ ಗ್ರಾಮದ ತೋಡೊಂದು ಭಾರಿ ಮಳೆಯಿಂದ ತುಂಬಿ ಹರಿಯುತ್ತಿದ್ದು ರಸ್ತೆಯನ್ನು ಅಕ್ರಮಿಸಿಕೊಂಡಿದೆ. ಪಟ್ಟಣದಿಂದ ಸಕಲೇಶಪುರಕ್ಕೆ ತೆರಳು ಮಾರ್ಗದ ಬಾರಿ ಮಳೆಗೆ ಮಾಗೇರಿ-ಬಾಣಗೇರಿ ಸೇತುವೆ ಮುಳುಗಿದ್ದು. ಗ್ರಾಮ ಸಂಚರಕ್ಕೆ ತೊಡಕ್ಕಾಗಿದ್ದು ಅ ಮಾರ್ಗದ ವಾಹನ ಸಂಚಾರ ಸ್ಥಗಿತಗೊಂಡಿದೆ. ಸೋಮವಾರಪೇಟೆಯಿಂದ ಸಕಲೇಶಪುರಕ್ಕೆ ಅಥವಾ ಸುಬ್ರಮಣ್ಯಕ್ಕೆ ತೆರಳುವ ವಾಹನ ಸವಾರರು ಮತ್ತೊಂದು ಮಾರ್ಗವಾದ ತೋಳೂರುಶೆಟ್ಟಳ್ಳಿ ಕೂತಿ ಒಣಗೂರು ಕೂಡುರಸ್ತೆ ಮಾರ್ಗವಾಗಿ ತೆರಳುತ್ತಿದ್ದಾರೆ. ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗುಂದ ಗ್ರಾಮದ ನಾಗು ಅವರ ವಾಸದ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಹಾನಿಯಾಗಿದ್ದು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದರು. ನೇಗಳ್ಳೆ-ಕರ್ಕಳ್ಳಿ ಗ್ರಾಮದ ಹೊನ್ನೀರಪ್ಪ ಅವರ ವಾಸದ ಮನೆಯ ಕಾಂಪೌಂಡ್ ಕುಸಿದು ಹಾನಿಯಾಗಿದೆ. ಮುನಿಯಮ್ಮ ಎಂಬುವವರ ವಾಸದ ಮನೆಗೆ ಹಾನಿಯಾಗಿದೆ. ಚೌಡ್ಲು ಪಾರ್ವತಿ ರವರ ಮನೆ ಮಳೆಯಿಂದ ಭಾಗಶಃ ಹಾನಿಯಾಗಿದೆ. ತಾಲ್ಲೂಕು ಮಾಲಂಬಿ ಗ್ರಾಮದ ಯಮುನಾ ರವರ ವಾಸದ ಮನೆಯ ಮೇಲೆ ಭಾರಿ ಮಳೆ ಗಾಳಿಗೆ ಮರ ಬಿದ್ದು ಹಾನಿಯಾಗಿದೆ. ಕೊಡ್ಲಿಪೇಟೆಯ ಮೈಮುನ ಎಂಬುವವರ ವಾಸದ ಮನೆಗೆ ಹಾನಿಯಾಗಿದೆ. ಕೂತಿ ಗ್ರಾಮದ ಯಡದಂಟೆ ಉಪಗ್ರಾಮಕ್ಕೆ ಹೋಗುವ ಜಿಲ್ಲಾ ಪಂಚಾಯತ್ ಮುಖ್ಯ ರಸ್ತೆಯ ಪಕ್ಕ 10 ಅಡಿ ಆಳಕ್ಕೆ ಗುಂಡಿಯಾಗಿದ್ದು ರಸ್ತೆಯು ಕುಸಿಯುವ ಹಂತದಲ್ಲಿರುತ್ತದೆ
ಕುಶಾಲನಗರ: ಮನೆ ಖಾಲಿ ಮಾಡುತ್ತಿರುವ ನಿವಾಸಿಗಳು!
ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಪುಷ್ಯ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಶುಕ್ರವಾರ ಜೀವನದಿ ಕಾವೇರಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ಉಲ್ಭಣಿಸಿದೆ. ನದಿ ಆಸುಪಾಸಿನಲ್ಲಿರುವ ಗ್ರಾಮಗಳಲ್ಲಿನ ರೈತರ ಜಮೀನಿಗೆ ನದಿ ನೀರು ಅಪಾರ ಪ್ರಮಾಣದಲ್ಲಿ ನುಗ್ಗಿದ್ದರಿಂದ ಕೃಷಿಗೆ ಹಾನಿ ಉಂಟಾಗಿದೆ. ಕಾವೇರಿ ನದಿ ದಂಡೆಯಲ್ಲಿರುವ ಕುಶಾಲನಗರ ಪಟ್ಟಣದ ಸಾಯಿ ಬಡಾವಣೆ ಕುವೆಂಪು ಬಡಾವಣೆ ಇಂದಿರಾ ಬಡಾವಣೆ ಬಸಪ್ಪ ಬಡಾವಣೆ ರಸಲ್ ಲೇಔಟ್ ಸೀಗಾರಮ್ಮ ಬಡಾವಣೆ ಯೋಗಾ ನಂದ ಬಡಾವಣೆಗಳಿಗೆ ನೀರು ನುಗ್ಗಿ ರಸ್ತೆ ಮನೆಗಳು ಜಲಾವೃತಗೊಂಡಿವೆ. ನೀರಿನಲ್ಲಿ ಆವೃತಗೊಂಡಿರುವ ಮನೆಗಳ ಜನರು ತಮ್ಮ ಸಂಬಂಧಿಕರ ಮನೆಗಳಿಗೆ ಸ್ನೇಹಿತರ ಮನೆಗಳಿಗೆ ತೆರಳುತ್ತಿದ್ದಾರೆ. ಕೆಲವರು ತಮ್ಮ ಮನೆ ಸರಕು ಸಾಮಾಗ್ರಿಗಳನ್ನು ಮಿನಿ ಲಾರಿಗಳಲ್ಲಿ ಬೇರೆಡೆಗೆ ಸ್ಥಳಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಹುತೇಕ ಕುಟುಂಬಗಳು ಮನೆ ಖಾಲಿ ಮಾಡಿ ಸುರಕ್ಷಿತ ಪ್ರದೇಶಕ್ಕೆ ತೆರಳುತ್ತಿದ್ದಾರೆ. ಇದೇ ರೀತಿ ಮಳೆ ಮುಂದುಮರೆದರೆ ಕುಶಾಲನಗರದ ಬಹುತೇಕ ಬಡಾವಣೆಗಳು ಜಲಾವೃತಗೊಳುವ ಸಾಧ್ಯತೆ ಇದೆ. ತಹಶೀಲ್ದಾರ್ ಕಿರಣ್ ಗೌರಯ್ಯ ಪುರಸಭೆ ಅಧಿಕಾರಿ ಕೃಷ್ಣಪ್ರಸಾದ್ ಪ್ರಸಾದ್ ಹಾಗೂ ಟಾಸ್ಕ್ ಪೋರ್ಸ್ ತಂಡ ಕಾರ್ಯಪ್ರವೃತವಾಗಿದೆ. ಪುರಸಭೆ ವತಿಯಿಂದ ಪಟ್ಟಣದ ಎಲ್ಲಾ ಚರಂಡಿ ತೊಡುಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಅಧಿಕ ಮಳೆಯಿಂದಾಗಿ ಇಲ್ಲಿನ ಕೋಣಮಾರಮ್ಮ ದೇವಸ್ಥಾನ ಹಾಗೂ ಕೈಗಾರಿಕಾ ಬಡಾವಣೆಯಲ್ಲಿ ಎರಡು ಮನೆಗಳು ಭಾಗಶಃ ಹಾನಿಯಾಗಿದ್ದು ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಸಿಇಒ ಕೃಷ್ಣಪ್ರಸಾದ್ ತಿಳಿಸಿದ್ದಾರೆ. ರೊಂಡೆಕೆರೆ ಏರಿ ಒಡೆದು ಹಾನಿ ತಾಲ್ಲೂಕಿನ ಗೊಂದಿಬಸವನಹಳ್ಳಿ ಗ್ರಾಮದ ರೊಂಡೆಕೆರೆಯ ಏರಿ ಒಡೆದು ಜಮೀನುಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಶುಂಠಿ ಜೋಳ ಹಾಗೂ ನಾಟಿ ಮಾಡಲು ಸಿದ್ಧಪಡಿಸಿದ್ದ ಭತ್ತದ ಸಸಿಮಡಿಗಳು ಕೊಚ್ಚಿ ಹೋಗಿವೆ. ಜಮೀನಿನಲ್ಲಿ ಮಣ್ಣು ಕಲ್ಲು ಮರಳು ತುಂಬಿ ಕೊಂಡಿದ್ದು ಮುಂದಿನ ಬೇಸಾಯ ಕಾರ್ಯಗಳನ್ನು ನಡೆಸಲೂ ಸಹ ಸಾಧ್ಯವಿಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ಕೆರೆಯ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದ ಪರಿಣಾಮ ಕಾರು ಮಾಲೀಕರು ಮತ್ತು ಚಾಲಕರ ಬಡಾವಣೆ ಸಂಪೂರ್ಣ ಜಲಾವೃತ್ತಗೊಂಡಿದ್ದು ವಾಸದ ಮನೆಗಳಿಗೆ ಜಲ ದಿಗ್ಭಂದನ ಉಂಟಾಗಿದ್ದು ನಿವಾಸಿಗಳಿಗೆ ತೀವ್ರ ಆತಂಕ ಎದುರಾಗಿದೆ. ರೊಂಡೆಕೆರೆ ನೀರು ತಾವರೆಕೆರೆ ಕಡೆಗೆ ಹರಿದು ಬಂದ ಹಿನ್ನೆಲೆಯಲ್ಲಿ ತಾವರೆಕೆರೆ ಬಹುತೇಕ ಭರ್ತಿಯಾಗಿದ್ದು ಇದೇ ರೀತಿ ಮಳೆ ಮುಂದುವರೆದರೆ ಕುಶಾಲನಗರ ಮಡಿಕೇರಿ ರಸ್ತೆ ಮೇಲೆ ನೀರು ಹರಿದು ಬಂದ್ ಆಗುವ ಸಾಧ್ಯತೆ ಇದೆ.
ಸಿದ್ದಾಪುರ: 18 ಮಂದಿ ಕಾಳಜಿ ಕೇಂದ್ರಕ್ಕೆ
ಸಿದ್ದಾಪುರ: ಕರಡಿಗೋಡು ಗ್ರಾಮದ ನದಿ ದಡದ ಮನೆಗಳು ಜಲಾವೃತವಾಗಿದ್ದು 6 ಕುಟುಂಬಸ್ಥರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಶುಕ್ರವಾರವೂ ಸಿದ್ದಾಪುರ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ಪರಿಹಾರ ಕೇಂದ್ರವನ್ನು ಆರಂಭಿಸಲಾಗಿದ್ದು 6 ಕುಟುಂಬಗಳ 18 ಮಂದಿಯನ್ನು ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಗುಹ್ಯ ಕರಡಿಗೋಡು ಕೊಂಡಂಗೇರಿ ಭಾಗಕ್ಕೆ ತಹಶೀಲ್ದಾರ್ ರಾಮಚಂದ್ರ ಭೇಟಿ ನೀಡಿದರು. ಕರಡಿಗೋಡುವಿನ ಹೊಸಗದ್ದೆಗೆ ತೆರಳುವ ಸೇತುವೆ ಮುಳುಗಡೆಯಾಗಿದೆ. ಗುಹ್ಯ ಗ್ರಾಮದ ಕೂಡುಗದ್ದೆ ಕಕ್ಕಟ್ಟುಕಾಡು ರಸ್ತೆ ಜಲಾವೃತಗೊಂಡಿದೆ. ಕರಡಿಗೋಡುವಿಗೆ ತೆರಳುವ ರಸ್ತೆ ಜಲಾವೃತಗೊಂಡಿದೆ.ಬೆಟ್ಟದಕಾಡುವಿಗೆ ತೆರಳುವ ರಸ್ತೆಯು ಜಲಾವೃತಗೊಂಡಿದ್ದು ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ಚೆನ್ನಯ್ಯನಕೋಟೆ ಗ್ರಾಮದಲ್ಲಿ ಮಳೆಯಿಂದಾಗಿ ಬೇಬಿ ಹಾಗೂ ಇಮ್ತಿಯಾಜ್ ಎಂಬವರ ಮನೆಗೆ ಹಾನಿಯಾಗಿದೆ. ನೆಲ್ಯಹುದಿಕೇರಿ ಗ್ರಾಮದ ಬರಡಿ ಗ್ರಾಮದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು 3 ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತ ಕುಟುಂಬಗಳಿಗೆ ಕಂದಾಯ ಇಲಾಖೆ ವತಿಯಿಂದ ಆಹಾರ ಕಿಟ್ ಒದಗಿಸಲಾಗಿದೆ. ನದಿ ದಡದಲ್ಲಿರುವವರು ಕಾಳಜಿ ಕೇಂದ್ರಕ್ಕೆ ಬರಬೇಕೆಂದು ಇಲಾಖೆ ಮನವಿ ಮಾಡಲಾಗಿದೆ. ಸ್ಥಳಕ್ಕೆ ತಹಶೀಲ್ದಾರರಾದ ಕಿರಣ್ ಗೌರಯ್ಯ ಗ್ರಾಮ ಆಡಳಿತ ಅಧಿಕಾರಿ ಸಚಿನ್ ಪಿ.ಡಿ.ಓ ನಂಜುಂಡಸ್ವಾಮಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಭೇಟಿ ನೀಡಿ ಪರಿಶೀಲನೆ ನಡೆಸಿದರು.