<p><strong>ಮಡಿಕೇರಿ:</strong> ಕೊಡಗು ಜಿಲ್ಲೆಗೆ ಮುಂಗಾರಿನ ಆಗಮನವಾದರೆ ಉಳಿದೆಲ್ಲ ಜಿಲ್ಲೆಗಳಲ್ಲೂ ಜನ ಸಂಭ್ರಮಪಡುತ್ತಾರೆ. ಕೊಡಗಿನಲ್ಲೂ ರೈತರು, ಬೆಳೆಗಾರರು ಸಂತಸಪಡುತ್ತಾರೆ. ಆದರೆ, ಇದೇ ಮುಂಗಾರು ಸಂಪರ್ಕ ತಪ್ಪಿ ಹೋಗುವ ಕೆಲವು ಪ್ರದೇಶಗಳ ಜನರಿಗೆ ದುಸ್ವಪ್ನದಂತೆ ಕಾಡುತ್ತದೆ. ಸೇತುವೆಗಳು ಮುಳುಗಡೆಯಾಗಿ, ಕಾಲುಸೇತುವೆ ಕೊಚ್ಚಿಕೊಂಡು ಹೋಗಿ, ಹೊರ ಜಗತ್ತಿನ ಜೊತೆಗೆ ಸಂಪರ್ಕ ಸಿಗದೇ ಹಲವು ವಾರಗಳ ಕಾಲ ಈ ಜನರು ಪಡಿಪಾಟಲು ಅನುಭವಿಸುತ್ತಾರೆ. ಮುಂಗಾರು ಮುಗಿಯುವವರೆಗೂ ಇವರ ಆತಂಕ ದೂರವಾಗುವುದೇ ಇಲ್ಲ.</p>.<p>ಭಾಗಮಂಡಲದಲ್ಲಿ ಮೇಲ್ಸೇತುವೆ ನಿರ್ಮಿಸಿದ್ದರಿಂದ ಸದ್ಯ ಭಾಗಮಂಡಲ ದ್ವೀಪವಾಗುವುದು ಈ ಮಳೆಗಾಲದಲ್ಲಿ ತಪ್ಪಿದೆ. ಇದೇ ಬಗೆಯಲ್ಲಿ ಉಳಿದ ಕಡೆಯೂ ಎತ್ತರದ ಸೇತುವೆ ನಿರ್ಮಿಸುವ ಅನಿವಾರ್ಯತೆ ಇದೆ. ಆದರೆ, ಯಾವುದೇ ಸರ್ಕಾರ ಬಂದರೂ, ಯಾವುದೇ ಪಕ್ಷದ ಜನಪ್ರತಿನಿಧಿಗಳು ಆಯ್ಕೆಯಾದರೂ ನಮ್ಮ ಸಂಕಷ್ಟ ಕೇಳುವವರೇ ಇಲ್ಲ ಎಂದು ಅಲ್ಲಿನ ಜನರು ಅಳಲು ತೋಡಿಕೊಳ್ಳುತ್ತಾರೆ.</p>.<p>ಕಾವೇರಿ ನದಿ ಪ್ರವಾಹ ಹೆಚ್ಚುತ್ತಿದ್ದಂತೆ ನಾಪೋಕ್ಲು ಸಮೀಪದ ಚೆರಿಯಪರಂಬುವಿನ ನಿವಾಸಿಗಳು ತಮ್ಮ ವಾಸ ಸ್ಥಳವನ್ನು ತೊರೆಯುತ್ತಾರೆ. ಕಂದಾಯ ಇಲಾಖೆಯು ನದಿ ತಟದ ನಿವಾಸಿಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡುತ್ತದೆ. ಚೆರಿಯಪರಂಬು ಅಕ್ಷರಶಃ ಜಲರಾಶಿಯ ನಡುವೆ ಸಿಲುಕುತ್ತದೆ.</p>.<p>ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸ್ಥಳಕ್ಕೆ ಭೇಟಿ ನೀಡಿದ್ದು ರಸ್ತೆಯನ್ನು ಚೆರಿಯಪರಂಬು ಸಂಪರ್ಕ ರಸ್ತೆಯನ್ನು ಎತ್ತರಿಸುವ ಭರವಸೆ ನೀಡಿದ್ದಾರೆ. ಹೊದ್ದೂರು ಗ್ರಾಮದ ಬೊಳಿಭಾಣೆ ಎಂಬಲ್ಲಿ ಕಾವೇರಿ ನದಿ ನೀರು ರಸ್ತೆಯನ್ನು ಆವರಿಸುತ್ತದೆ. ಮೂರ್ನಾಡು-ನಾಪೋಕ್ಲು ನಡುವಿನ ರಸ್ತೆ ಸಂಪರ್ಕವೂ ಬಂದ್ ಆಗುತ್ತದೆ.</p>.<p>ಮಳೆಗಾಲದಲ್ಲಿ ದೋಣಿ ಮೂಲಕ ಸಂಚಾರ: ಎಮ್ಮೆಮಾಡು ಗ್ರಾಮ ಪಂಚಾಯಿತಿ ಹಾಗೂ ಬೇಂಗೂರು ಗ್ರಾಮ ಪಂಚಾಯಿತಿ ನಡುವೆ ದೋಣಿಕಡು ಎಂಬಲ್ಲಿ ಕಾವೇರಿ ಮಳೆಗಾಲದಲ್ಲಿ ಉಕ್ಕಿ ಹರಿಯುವುದರಿಂದ ಇಲ್ಲೂ ಸಂಪರ್ಕ ಕಡಿತವಾಗುತ್ತದೆ. ಬೇಂಗೂರು ಹಾಗೂ ಪಡಿಯಾಣಿ ಗ್ರಾಮಗಳ ಮಂದಿ ಸಂಪರ್ಕಕ್ಕಾಗಿ ದೋಣಿಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಇಲ್ಲಿ ಸೇತುವೆ ನಿರ್ಮಾಣಕ್ಕಾಗಿ ಗ್ರಾಮಸ್ಥರಿಂದ ಹಲವು ವರ್ಷಗಳ ಬೇಡಿಕೆ ಇದ್ದರೂ ಸೇತುವೆ ನಿರ್ಮಾಣವಾಗಿಲ್ಲ. ಬೇಸಿಗೆ ಕಾಲದಲ್ಲಿ ನೀರಿನ ಹರಿವು ಕಡಿಮೆ ಇದ್ದಾಗ ಕಾವೇರಿ ಹೊಳೆಯನ್ನು ದಾಟಿ ಜನರು ಸಂಪರ್ಕ ಸಾಧಿಸುತ್ತಾರೆ. ಮಳೆಗಾಲದಲ್ಲಿ ಕಾವೇರಿ ಹೊಳೆಯಲ್ಲಿ ಹೆಚ್ಚಿನ ನೀರು ಹರಿಯುವುದರಿಂದ ಎರಡು ಗ್ರಾಮಗಳ ನಡುವೆ ಸಂಪರ್ಕ ಸಾಧಿಸಲು ದೋಣಿಯನ್ನು ಅವಲಂಬಿಸಬೇಕಾಗುತ್ತದೆ. ವೃದ್ಧರು, ಮಹಿಳೆಯರು, ಶಾಲಾ ಮಕ್ಕಳು ಕಾಲೇಜು ವಿದ್ಯಾರ್ಥಿಗಳು ಸಂಪರ್ಕಕ್ಕಾಗಿ ದೋಣಿ ಬಳಸುವ ಪರಿಸ್ಥಿತಿ ಇನ್ನೂ ಅಂತ್ಯ ಕಂಡಿಲ್ಲ.</p>.<p>ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದಿಂದ ಕಿರಗಂದೂರಿಗೆ ತೆರಳುವ ಮಾರ್ಗದ ನಂದಿಮೊಟ್ಟೆಯಲ್ಲಿ ಮಾದಾಪುರ ಹೊಳೆ ಭಾರಿ ಮಳೆಯ ವೇಳೆ ರಸ್ತೆಯ ಮೇಲೆ ಹರಿಯುತ್ತದೆ. ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಟ್ಲು ಹೊಳೆ ಸಹ ರಸ್ತೆಯ ಮೇಲೆ ನೀರು ಹರಿಯುತ್ತದೆ. ಇವುಗಳೊಂದಿಗೆ ಹಲವು ಕಿರು ಸೇತುವೆಗಳು ಜಲಾವೃತವಾಗುವುದರಿಂದ ಗ್ರಾಮಗಳು ಸಂಚಾರವನ್ನು ಕಡಿತಗೊಳಿಸಿಕೊಳ್ಳುತ್ತದೆ.</p>.<p>ಹೊಸ ಸೇತುವೆ ನಿರ್ಮಾಣವಾದರೂ ತಪ್ಪದ ಸಂಕಷ್ಟ: ಮಳೆಗಾಲದಲ್ಲಿ ಮುಳುಗುತ್ತಿದ್ದ ದಕ್ಷಿಣ ಕೊಡಗಿನ ರಸ್ತೆ ಮತ್ತು ಸೇತುವೆಗಳನ್ನು ಎತ್ತರಿಸಿ ಜನತೆಯ ಸುಗಮ ಸಂಚಾರಕ್ಕೆ ಅನುಲಕೂಲ ಮಾಡಿಕೊಟ್ಟಿದ್ದರೂ, ಕೆಲವು ಸೇತುವೆಗಳು ಈಗಲೂ ಮುಳುಗುತ್ತವೆ. ಶ್ರೀಮಂಗಲ ನಾಲ್ಕೇರಿ ನಡುವೆ ಸಂಪರ್ಕ ಕಲ್ಪಿಸುವ ಲಕ್ಷ್ಮಣತೀರ್ಥ ನದಿ ಸೇತುವೆ ಸಣ್ಣ ಮಳೆ ಬಂದರೂ ನೀರಿನಲ್ಲಿ ಮುಳುಗುತ್ತಿತ್ತು. 5 ವರ್ಷಗಳ ಹಿಂದೆ ಇಲ್ಲಿ ಸೇತುವೆ ಮಟ್ಟ ಎತ್ತರಿಸಿ ನೂತನವಾಗಿ ನಿರ್ಮಿಸಲಾಗಿತ್ತು. ಆದರೆ, ಈ ಬಾರಿ ಈ ಸೇತುವೆಯೂ ನೀರಿನಲ್ಲಿ 2 ದಿನಗಳ ಕಾಲ ಮುಳುಗಿ ಸಂಪರ್ಕ ಕಡಿತಗೊಂಡಿತ್ತು.</p>.<p>ಹರಿಹರ ಬಲ್ಯಮಂಡೂರು ನಡುವೆ ಲಕ್ಷ್ಮಣತೀರ್ಥ ನದಿ ಪ್ರವಾಹಕ್ಕೆ ಮುಳುಗುತ್ತಿದ್ದ ಸೇತುವೆ ಎತ್ತರವನ್ನು ಹೆಚ್ಚಿಸಿ ನೂತನವಾಗಿ ಕಳೆದ ವರ್ಷ ನಿರ್ಮಿಸಲಾಗಿತ್ತು. ಈ ಸೇತುವೆ ಕೂಡ ಈ ಬಾರಿ ನೀರಿನಲ್ಲಿ ಮುಳುಗಿತ್ತು.</p>.<p>ಕುಂದ ಬಳಿಯ ಬಸವನಗರದ ಬುಡಕಟ್ಟು ಜನರಿಗೆ ಪುನರ್ ವಸತಿ ಒದಗಿಸಿರುವ ಜಾಗದಲ್ಲಿ ಹರಿಯುತ್ತಿರುವ ತೋಡಿಗೆ 8 ವರ್ಷಗಳ ಹಿಂದೆ ಐಟಿಡಿಪಿ ಇಲಾಖೆಯ ಅನುದಾನದಲ್ಲಿ ನಿರ್ಮಿಸಿರುವ ಮುಳುಗು ಸೇತುವೆಯ ಮೇಲೂ ಭಾರಿ ಮಳೆ ಬಂದರೆ 5 ಅಡಿಯಷ್ಟು ನೀರು ಹರಿಯುತ್ತದೆ. ವಿದ್ಯಾರ್ಥಿ ಮತ್ತು ಕಾರ್ಮಿಕರು ಹಗ್ಗ ಹಿಡಿದುಕೊಂಡು ಮರದ ಮೇಲೆ ನಡೆಯಬೇಕಾದ ಪರಿಸ್ಥಿತಿ ಇದೆ.</p>.<p>ನಿಟ್ಟೂರು ಬಳಿಯ ತಟ್ಟೆಕೆರೆ ಮತ್ತು ಚಿಣ್ಣರ ಹಾಡಿಯ ಜನತೆಯೂ ಕೂಡ ತಮ್ಮ ಮನೆಗಳಿಂದ ಹೊರ ಬರಬೇಕಾದರೆ ನೆದಗರಹೊಳೆ ಅರಣ್ಯದಂಚಿನಲ್ಲಿರುವ ಕೊಲ್ಲಿ ದಾಟಬೇಕು. ಮಳೆ ಹೆಚ್ಚಾದರೆ ಕೊಲ್ಲಿ ದಾಟಲು ಹಾಕಿಕೊಂಡಿರುವ ಮರದ ಸೇತುವೆಗಳು ಕೊಚ್ಚಿ ಹೋದ ಸಂದರ್ಭ ಬಹಳಷ್ಟಿದೆ. ಕಳೆದ ವರ್ಷ ಬಿದ್ದ ಸಾಧಾರಣೆ ಮಳೆಗೆ ಚಿಣ್ಣರ ಹಾಡಿಯ ಕೊಲ್ಲಿ ಸೇತುವೆ ಕೊಚ್ಚಿ ಹೋಗಿತ್ತು. ಜನರ ಓಡಾಟಕ್ಕೆ ಇಲ್ಲಿ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿತ್ತು. ಈ ಬಾರಿ ಈ ಸೇತುವೆಯೂ ಕುಸಿದು ಮತ್ತೆ ಸಮಸ್ಯೆ ಉಂಟುಮಾಡಿದೆ.</p>.<p>ದುಬಾರೆ ಸಂಪರ್ಕ ಕಡಿತ, ಗಿರಿಜನರ ಪರದಾಟ: ಪ್ರತಿ ವರ್ಷ ಮಳೆಗಾಲದಲ್ಲಿ ಮೈದುಂಬಿ ಹರಿಯುವ ಕಾವೇರಿ ನದಿಯಿಂದ ದುಬಾರೆ ಸಂಪರ್ಕ ಕಡಿತಗೊಳ್ಳುತ್ತಿದ್ದು, ದುಬಾರೆ ಅರಣ್ಯ ಪ್ರದೇಶದಲ್ಲಿ ವಾಸಿಸುವ ಹತ್ತಾರು ಕುಟುಂಬಗಳು ಪರದಾಡುವಂತಹ ಪರಿಸ್ಥಿತಿ ಉಂಟಾಗುತ್ತಿದೆ.</p>.<p>ಮಳೆಗಾಲದಲ್ಲಿ ತುಂಬಿ ಹರಿಯುವ ಕಾವೇರಿ ನದಿಯಲ್ಲಿ ದೋಣಿ ಸಂಚಾರ ತುಂಬ ಅಪಾಯಕಾರಿ. ಈ ಭಾಗದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆ ಇದುವರೆಗೂ ಈಡೇರಿಲ್ಲ.</p>.<p>ದುಬಾರೆಯಲ್ಲಿರುವ ಸುಮಾರು 40 ರಿಂದ 50 ಗಿರಿಜನ ಕುಟುಂಬಗಳಿಗೆ ಮಳೆಗಾಲದಲ್ಲಿ ಜೀವನ ನಿರ್ವಹಣೆ ನರಕಯಾತನೆಯಾಗಿದೆ. ಈ ಕುಟುಂಬಗಳು ಜೀವನೋಪಾಯಕ್ಕಾಗಿ ನಂಜರಾಯಪಟ್ಟಣ, ರಂಗಸಮುದ್ರ, ಹೊಸಪಟ್ಟಣ ಗ್ರಾಮಗಳನ್ನು ಅವಲಂಬಿಸಿದ್ದಾರೆ.</p>.<p>ಗಿರಿಜನರು ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಕೂಲಿ ಕೆಲಸಕ್ಕಾಗಿ ಆಸ್ಪತ್ರೆ, ಆಹಾರ, ಸಾಮಾಗ್ರಿ, ಖರೀದಿಗೆ ಹಾಗೂ ಶಿಕ್ಷಣಕ್ಕೆ ಅವರು ನಂಜರಾಯಪಟ್ಟಣ ಬರಬೇಕಾಗಿದೆ. ಗಿರಿಜನರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಯಾಂತ್ರೀಕೃತ ದೋಣಿಗಳ ಮೂಲಕವೇ ಸಂಚಾರ ಮಾಡಬೇಕಾದ ಅನಿರ್ವಾಯತೆ ಇದೆ. ಆದರೆ ತುಂಬಿದ ಕಾವೇರಿ ನದಿಯನ್ನು ದೋಣಿಗಳ ಮೂಲಕ ದಾಟುವುದು ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ತೂಗು ಸೇತುವೆ ನಿರ್ಮಾಣ ಮಾಡಿದರೆ ಪ್ರವಾಸಿಗರಿಗೆ ಮಾತ್ರವಲ್ಲದೆ ದುಬಾರೆ ಗಿರಿಜನರಿಗೂ ಅನುಕೂಲವಾಗುತ್ತದೆ.</p>.<p>ಹಾರಂಗಿ ಜಲಾಶಯದಿಂದ ಹೆಚ್ಚಿನ ನೀರನ್ನು ನದಿಗೆ ಹರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಕೆಳಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಬಂದ್ ಆಗಿದೆ. ಇದರಿಂದ ಅಕ್ಕಪಕ್ಕದ ಗ್ರಾಮಗಳಾದ ಯಡವನಾಡು, ಹುದುಗೂರು, ಅತ್ತೂರು, ದೊಡ್ಡಸೂರು, ಹಾರಂಗಿ ಭಾಗಕ್ಕೆ ಸಂಪರ್ಕ ಕಡಿತಗೊಂಡಿದೆ. ಈ ಗ್ರಾಮಗಳ ಜನರು ಹತ್ತಾರೂ ಕಿಲೋಮೀಟರ್ ದೂರ ಕ್ರಮಿಸಿ ಕೂಡಿಗೆ ಮಾರ್ಗವಾಗಿ ತಮ್ಮ ಗ್ರಾಮಗಳಿಗೆ ತೆರಳಬೇಕಾಗಿದೆ. ಕೂಡ್ಲೂರು ಕೈಗಾರಿಕಾ ಬಡಾವಣೆಗೆ ಹೋಗುವ ಕಾರ್ಮಿಕರಿಗೆ ಹಾಗೂ ರೈತರು ಸೇರಿದಂತೆ ಕೂಲಿ ಕಾರ್ಮಿಕರಿಗೆ ತೊಂದರೆ ಉಂಟಾಗುತ್ತಿದೆ.</p>.<p>ಕಣಿವೆ ರಾಮಲಿಂಗೇಶ್ವರ ದೇವಾಲಯ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯಲ್ಲೂ ಹೆಚ್ಚಿನ ಮಳೆಯಾದಾಗ ನೀರು ಹರಿಯುತ್ತದೆ. ಇದರಿಂದ ಪಿರಿಯಾಪಟ್ಟಣ ತಾಲ್ಲೂಕಿನ ಕೆಲವು ಗ್ರಾಮಗಳ ಜನರಿಗೆ ತೊಂದರೆಯಾಗುತ್ತಿದೆ.</p>.<p>ಇದೇ ರೀತಿ ಇನ್ನೂ ಹೆಚ್ಚಿನ ಉದಾಹರಣೆಗಳು ಜಿಲ್ಲೆಯಲ್ಲಿವೆ. ಸರ್ಕಾರ ಇವುಗಳನ್ನು ಆದ್ಯತೆಯಾಗಿ ಪರಿಗಣಿಸಿ ಎತ್ತರದ ಸೇತುವೆಗಳನ್ನು ನಿರ್ಮಿಸಿ, ಮಳೆಗಾಲವನ್ನು ಸಂಭ್ರಮದಿಂದ ಕಳೆಯುವಂತಹ ವಾತಾವರಣವನ್ನು ಈ ಭಾಗದ ಜನರಿಗೆ ನಿರ್ಮಿಸಿಕೊಡಬೇಕಿದೆ.</p>.<p><em><strong>ಮಾಹಿತಿ: ಸಿ.ಎಸ್.ಸುರೇಶ್, ಡಿ.ಪಿ.ಲೋಕೇಶ್, ಜೆ.ಸೋಮಣ್ಣ, ರಘು ಹೆಬ್ಬಾಲೆ</strong></em></p>.<h2>ಪ್ರತಿಕ್ರಿಯೆಗಳು </h2>.<p>ಎತ್ತರದ ಸೇತುವೆ ನಿರ್ಮಿಸಿ ಗ್ರಾಮೀಣ ಭಾಗಗಳಲ್ಲಿ ಬಹಳ ಹಿಂದೆ ಮಾಡಿರುವ ಕಿರುಸೇತುವೆಗಳನ್ನು ಇಂದಿಗೂ ಹಾಗೇ ಉಳಿಸಿಕೊಂಡು ಬಳಸಲಾಗುತ್ತಿದೆ. ಅವುಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ನಾಲ್ಕಾರು ಅಡಿಗಳಷ್ಟು ಎತ್ತರಕ್ಕೆ ನೂತನ ಸೇತುವೆ ನಿರ್ಮಿಸಿದಲ್ಲಿ ಮಳೆಗಾಲದಲ್ಲಿ ಸ್ಥಳೀಯರು ಪರದಾಡುವುದನ್ನು ತಪ್ಪಿಸಬಹುದು </p><p><em><strong>–ಲಿಂಗೇರಿ ರಾಜೇಶ್ ಯಡವಾರೆ ಗ್ರಾಮ </strong></em></p> <p>ಮಾಹಿತಿ ಫಲಕ ಅಳವಡಿಸಿ ಪ್ರವಾಸೋದ್ಯಮ ಜಿಲ್ಲೆಯಲ್ಲಿ ಸಾಕಷ್ಟು ಬೆಳವಣಿಗೆ ಕಾಣುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಹೋಮ್ ಸ್ಟೇ ರೆಸಾರ್ಟ್ಗಳು ಬಂದು ಹೊರ ಜಿಲ್ಲೆ ಮತ್ತು ರಾಜ್ಯದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಭಾರಿ ಮಳೆಯ ಸಂದರ್ಭ ಹೊಳೆಗಳು ತುಂಬಿ ಸೇತುವೆಯ ಮೇಲೆ ಹರಿಯುವುದು ರಾತ್ರಿಯಲ್ಲಿ ಕಾಣುವುದಿಲ್ಲ. ಪ್ರವಾಸಿಗರು ವೇಗವಾಗಿ ಈ ರಸ್ತೆಯಲ್ಲಿ ಸಂಚರಿಸಿದರೆ ಅಪಾಯ ಎದುರಾಗಲಿದೆ. ಅಲ್ಲದೆ ರಸ್ತೆಯ ಎರಡು ಬದಿಯಲ್ಲೂ ಮಾಹಿತಿ ಫಲಕಗಳನ್ನು ಅಳವಡಿಸಬೇಕಿದೆ. </p><p><em><strong>–ಪಿ. ಮಧು ವಾಹನ ಚಾಲಕರು. </strong></em></p> <p>ದುಬಾರೆಯಲ್ಲಿ ತೂಗುಸೇತುವೆ ನಿರ್ಮಿಸಿ ದುಬಾರೆಗೆ ತೆರಳಲು ಮಳೆಗಾಲದಲ್ಲಿ ಮೈದುಂಬಿ ಹರಿಯುವ ಕಾವೇರಿ ನದಿಯಲ್ಲಿ ದೋಣಿ ಸಂಚಾರ ತುಂಬ ಅಪಾಯಕಾರಿ. ಗಿರಿಜನರ ಹಿತದೃಷ್ಟಿಯಿಂದ ಹಾಗೂ ಪ್ರವಾಸಿಗರ ಸುರಕ್ಷತೆಗೆ ತೂಗುಸೇತುವೆ ನಿರ್ಮಾಣ ಅಗತ್ಯವಾಗಿದೆ. ಸರ್ಕಾರ ಈ ಕುರಿತು ಕೂಡಲೇ ಗಮನ ಹರಿಸಬೇಕು. </p><p><em><strong>–ಆರ್.ಕೆ.ಚಂದ್ರು ಗಿರಿಜನ ಮುಖಂಡ ರಂಗಸಮುದ್ರ. </strong></em></p> <p>ಇದುವರೆಗೂ ಬೇಡಿಕೆ ಈಡೇರಿಲ್ಲ ಹಾರಂಗಿ ಜಲಾಶಯ ತುಂಬಿದ ಸಂದರ್ಭದಲ್ಲಿ ಒಮ್ಮೆಲೆ ಹೆಚ್ಚಿನ ನೀರನ್ನು ನದಿಗೆ ಹರಿಬಿಡಲಾಗುತ್ತದೆ. ಈ ವೇಳೆಯಲ್ಲಿ ಕೆಳಗಿನ ಸೇತುವೆ ಮುಳುಗಡೆಯಾಗಿ ಅಕ್ಕಪಕ್ಕದ ಗ್ರಾಮಗಳಿಗೆ ಸಂಪರ್ಕ ಕಡಿತಗೊಳ್ಳುತ್ತದೆ. ಆದ್ದರಿಂದ ಕೆಳಗಿನ ಸೇತುವೆ ಎತ್ತರವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಅಥವಾ ಈ ಭಾಗದ ಹೊಸ ಸೇತುವೆ ನಿರ್ಮಾಣ ಮಾಡಬೇಕು ಎಂದು ನೀರಾವರಿ ಇಲಾಖೆಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಈ ಭಾಗದ ಜನರ ಬೇಡಿಕೆ ಈಡೇರಿಲ್ಲ. </p><p><em><strong>–ಭಾಸ್ಕರ್ ನಾಯಕ ಅಧ್ಯಕ್ಷ ಕೂಡುಮಂಗಳೂರು ಗ್ರಾಮ ಪಂಚಾಯತಿ </strong></em></p> <p>ಹಾರಂಗಿ ಮಳೆಗಾಲದಲ್ಲಿ ದುಬಾರೆ ಜನರಿಗೆ ಸಂಕಷ್ಟ ಪ್ರತಿ ವರ್ಷ ಮಳೆಗಾಲದಲ್ಲಿ ಕಾವೇರಿ ನದಿ ಉಕ್ಕಿ ಹರಿಯುವುದರಿಂದ ದುಬಾರೆ ಸಂಪರ್ಕ ಕಡಿತಗೊಳ್ಳುತ್ತದೆ. ಇದರಿಂದ ದುಬಾರೆ ಸಾಕಾನೆ ಶಿಬಿರದ ಅರಣ್ಯ ಪ್ರದೇಶದಲ್ಲಿ ವಾಸಿಸುವ ಗಿರಿಜನ ಕುಟುಂಬಗಳಿಗೆ ತುಂಬ ತೊಂದರೆ ಉಂಟಾಗುತ್ತದೆ. ಆದ್ದರಿಂದ ಈ ಭಾಗದಲ್ಲಿ ತೂಗುಸೇತುವೆ ಅಗತ್ಯವಾಗಿದೆ. </p><p><em><strong>–ಸಿ.ಎಲ್.ವಿಶ್ವ ಅಧ್ಯಕ್ಷ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಕೊಡಗು ಜಿಲ್ಲೆಗೆ ಮುಂಗಾರಿನ ಆಗಮನವಾದರೆ ಉಳಿದೆಲ್ಲ ಜಿಲ್ಲೆಗಳಲ್ಲೂ ಜನ ಸಂಭ್ರಮಪಡುತ್ತಾರೆ. ಕೊಡಗಿನಲ್ಲೂ ರೈತರು, ಬೆಳೆಗಾರರು ಸಂತಸಪಡುತ್ತಾರೆ. ಆದರೆ, ಇದೇ ಮುಂಗಾರು ಸಂಪರ್ಕ ತಪ್ಪಿ ಹೋಗುವ ಕೆಲವು ಪ್ರದೇಶಗಳ ಜನರಿಗೆ ದುಸ್ವಪ್ನದಂತೆ ಕಾಡುತ್ತದೆ. ಸೇತುವೆಗಳು ಮುಳುಗಡೆಯಾಗಿ, ಕಾಲುಸೇತುವೆ ಕೊಚ್ಚಿಕೊಂಡು ಹೋಗಿ, ಹೊರ ಜಗತ್ತಿನ ಜೊತೆಗೆ ಸಂಪರ್ಕ ಸಿಗದೇ ಹಲವು ವಾರಗಳ ಕಾಲ ಈ ಜನರು ಪಡಿಪಾಟಲು ಅನುಭವಿಸುತ್ತಾರೆ. ಮುಂಗಾರು ಮುಗಿಯುವವರೆಗೂ ಇವರ ಆತಂಕ ದೂರವಾಗುವುದೇ ಇಲ್ಲ.</p>.<p>ಭಾಗಮಂಡಲದಲ್ಲಿ ಮೇಲ್ಸೇತುವೆ ನಿರ್ಮಿಸಿದ್ದರಿಂದ ಸದ್ಯ ಭಾಗಮಂಡಲ ದ್ವೀಪವಾಗುವುದು ಈ ಮಳೆಗಾಲದಲ್ಲಿ ತಪ್ಪಿದೆ. ಇದೇ ಬಗೆಯಲ್ಲಿ ಉಳಿದ ಕಡೆಯೂ ಎತ್ತರದ ಸೇತುವೆ ನಿರ್ಮಿಸುವ ಅನಿವಾರ್ಯತೆ ಇದೆ. ಆದರೆ, ಯಾವುದೇ ಸರ್ಕಾರ ಬಂದರೂ, ಯಾವುದೇ ಪಕ್ಷದ ಜನಪ್ರತಿನಿಧಿಗಳು ಆಯ್ಕೆಯಾದರೂ ನಮ್ಮ ಸಂಕಷ್ಟ ಕೇಳುವವರೇ ಇಲ್ಲ ಎಂದು ಅಲ್ಲಿನ ಜನರು ಅಳಲು ತೋಡಿಕೊಳ್ಳುತ್ತಾರೆ.</p>.<p>ಕಾವೇರಿ ನದಿ ಪ್ರವಾಹ ಹೆಚ್ಚುತ್ತಿದ್ದಂತೆ ನಾಪೋಕ್ಲು ಸಮೀಪದ ಚೆರಿಯಪರಂಬುವಿನ ನಿವಾಸಿಗಳು ತಮ್ಮ ವಾಸ ಸ್ಥಳವನ್ನು ತೊರೆಯುತ್ತಾರೆ. ಕಂದಾಯ ಇಲಾಖೆಯು ನದಿ ತಟದ ನಿವಾಸಿಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡುತ್ತದೆ. ಚೆರಿಯಪರಂಬು ಅಕ್ಷರಶಃ ಜಲರಾಶಿಯ ನಡುವೆ ಸಿಲುಕುತ್ತದೆ.</p>.<p>ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸ್ಥಳಕ್ಕೆ ಭೇಟಿ ನೀಡಿದ್ದು ರಸ್ತೆಯನ್ನು ಚೆರಿಯಪರಂಬು ಸಂಪರ್ಕ ರಸ್ತೆಯನ್ನು ಎತ್ತರಿಸುವ ಭರವಸೆ ನೀಡಿದ್ದಾರೆ. ಹೊದ್ದೂರು ಗ್ರಾಮದ ಬೊಳಿಭಾಣೆ ಎಂಬಲ್ಲಿ ಕಾವೇರಿ ನದಿ ನೀರು ರಸ್ತೆಯನ್ನು ಆವರಿಸುತ್ತದೆ. ಮೂರ್ನಾಡು-ನಾಪೋಕ್ಲು ನಡುವಿನ ರಸ್ತೆ ಸಂಪರ್ಕವೂ ಬಂದ್ ಆಗುತ್ತದೆ.</p>.<p>ಮಳೆಗಾಲದಲ್ಲಿ ದೋಣಿ ಮೂಲಕ ಸಂಚಾರ: ಎಮ್ಮೆಮಾಡು ಗ್ರಾಮ ಪಂಚಾಯಿತಿ ಹಾಗೂ ಬೇಂಗೂರು ಗ್ರಾಮ ಪಂಚಾಯಿತಿ ನಡುವೆ ದೋಣಿಕಡು ಎಂಬಲ್ಲಿ ಕಾವೇರಿ ಮಳೆಗಾಲದಲ್ಲಿ ಉಕ್ಕಿ ಹರಿಯುವುದರಿಂದ ಇಲ್ಲೂ ಸಂಪರ್ಕ ಕಡಿತವಾಗುತ್ತದೆ. ಬೇಂಗೂರು ಹಾಗೂ ಪಡಿಯಾಣಿ ಗ್ರಾಮಗಳ ಮಂದಿ ಸಂಪರ್ಕಕ್ಕಾಗಿ ದೋಣಿಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಇಲ್ಲಿ ಸೇತುವೆ ನಿರ್ಮಾಣಕ್ಕಾಗಿ ಗ್ರಾಮಸ್ಥರಿಂದ ಹಲವು ವರ್ಷಗಳ ಬೇಡಿಕೆ ಇದ್ದರೂ ಸೇತುವೆ ನಿರ್ಮಾಣವಾಗಿಲ್ಲ. ಬೇಸಿಗೆ ಕಾಲದಲ್ಲಿ ನೀರಿನ ಹರಿವು ಕಡಿಮೆ ಇದ್ದಾಗ ಕಾವೇರಿ ಹೊಳೆಯನ್ನು ದಾಟಿ ಜನರು ಸಂಪರ್ಕ ಸಾಧಿಸುತ್ತಾರೆ. ಮಳೆಗಾಲದಲ್ಲಿ ಕಾವೇರಿ ಹೊಳೆಯಲ್ಲಿ ಹೆಚ್ಚಿನ ನೀರು ಹರಿಯುವುದರಿಂದ ಎರಡು ಗ್ರಾಮಗಳ ನಡುವೆ ಸಂಪರ್ಕ ಸಾಧಿಸಲು ದೋಣಿಯನ್ನು ಅವಲಂಬಿಸಬೇಕಾಗುತ್ತದೆ. ವೃದ್ಧರು, ಮಹಿಳೆಯರು, ಶಾಲಾ ಮಕ್ಕಳು ಕಾಲೇಜು ವಿದ್ಯಾರ್ಥಿಗಳು ಸಂಪರ್ಕಕ್ಕಾಗಿ ದೋಣಿ ಬಳಸುವ ಪರಿಸ್ಥಿತಿ ಇನ್ನೂ ಅಂತ್ಯ ಕಂಡಿಲ್ಲ.</p>.<p>ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದಿಂದ ಕಿರಗಂದೂರಿಗೆ ತೆರಳುವ ಮಾರ್ಗದ ನಂದಿಮೊಟ್ಟೆಯಲ್ಲಿ ಮಾದಾಪುರ ಹೊಳೆ ಭಾರಿ ಮಳೆಯ ವೇಳೆ ರಸ್ತೆಯ ಮೇಲೆ ಹರಿಯುತ್ತದೆ. ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಟ್ಲು ಹೊಳೆ ಸಹ ರಸ್ತೆಯ ಮೇಲೆ ನೀರು ಹರಿಯುತ್ತದೆ. ಇವುಗಳೊಂದಿಗೆ ಹಲವು ಕಿರು ಸೇತುವೆಗಳು ಜಲಾವೃತವಾಗುವುದರಿಂದ ಗ್ರಾಮಗಳು ಸಂಚಾರವನ್ನು ಕಡಿತಗೊಳಿಸಿಕೊಳ್ಳುತ್ತದೆ.</p>.<p>ಹೊಸ ಸೇತುವೆ ನಿರ್ಮಾಣವಾದರೂ ತಪ್ಪದ ಸಂಕಷ್ಟ: ಮಳೆಗಾಲದಲ್ಲಿ ಮುಳುಗುತ್ತಿದ್ದ ದಕ್ಷಿಣ ಕೊಡಗಿನ ರಸ್ತೆ ಮತ್ತು ಸೇತುವೆಗಳನ್ನು ಎತ್ತರಿಸಿ ಜನತೆಯ ಸುಗಮ ಸಂಚಾರಕ್ಕೆ ಅನುಲಕೂಲ ಮಾಡಿಕೊಟ್ಟಿದ್ದರೂ, ಕೆಲವು ಸೇತುವೆಗಳು ಈಗಲೂ ಮುಳುಗುತ್ತವೆ. ಶ್ರೀಮಂಗಲ ನಾಲ್ಕೇರಿ ನಡುವೆ ಸಂಪರ್ಕ ಕಲ್ಪಿಸುವ ಲಕ್ಷ್ಮಣತೀರ್ಥ ನದಿ ಸೇತುವೆ ಸಣ್ಣ ಮಳೆ ಬಂದರೂ ನೀರಿನಲ್ಲಿ ಮುಳುಗುತ್ತಿತ್ತು. 5 ವರ್ಷಗಳ ಹಿಂದೆ ಇಲ್ಲಿ ಸೇತುವೆ ಮಟ್ಟ ಎತ್ತರಿಸಿ ನೂತನವಾಗಿ ನಿರ್ಮಿಸಲಾಗಿತ್ತು. ಆದರೆ, ಈ ಬಾರಿ ಈ ಸೇತುವೆಯೂ ನೀರಿನಲ್ಲಿ 2 ದಿನಗಳ ಕಾಲ ಮುಳುಗಿ ಸಂಪರ್ಕ ಕಡಿತಗೊಂಡಿತ್ತು.</p>.<p>ಹರಿಹರ ಬಲ್ಯಮಂಡೂರು ನಡುವೆ ಲಕ್ಷ್ಮಣತೀರ್ಥ ನದಿ ಪ್ರವಾಹಕ್ಕೆ ಮುಳುಗುತ್ತಿದ್ದ ಸೇತುವೆ ಎತ್ತರವನ್ನು ಹೆಚ್ಚಿಸಿ ನೂತನವಾಗಿ ಕಳೆದ ವರ್ಷ ನಿರ್ಮಿಸಲಾಗಿತ್ತು. ಈ ಸೇತುವೆ ಕೂಡ ಈ ಬಾರಿ ನೀರಿನಲ್ಲಿ ಮುಳುಗಿತ್ತು.</p>.<p>ಕುಂದ ಬಳಿಯ ಬಸವನಗರದ ಬುಡಕಟ್ಟು ಜನರಿಗೆ ಪುನರ್ ವಸತಿ ಒದಗಿಸಿರುವ ಜಾಗದಲ್ಲಿ ಹರಿಯುತ್ತಿರುವ ತೋಡಿಗೆ 8 ವರ್ಷಗಳ ಹಿಂದೆ ಐಟಿಡಿಪಿ ಇಲಾಖೆಯ ಅನುದಾನದಲ್ಲಿ ನಿರ್ಮಿಸಿರುವ ಮುಳುಗು ಸೇತುವೆಯ ಮೇಲೂ ಭಾರಿ ಮಳೆ ಬಂದರೆ 5 ಅಡಿಯಷ್ಟು ನೀರು ಹರಿಯುತ್ತದೆ. ವಿದ್ಯಾರ್ಥಿ ಮತ್ತು ಕಾರ್ಮಿಕರು ಹಗ್ಗ ಹಿಡಿದುಕೊಂಡು ಮರದ ಮೇಲೆ ನಡೆಯಬೇಕಾದ ಪರಿಸ್ಥಿತಿ ಇದೆ.</p>.<p>ನಿಟ್ಟೂರು ಬಳಿಯ ತಟ್ಟೆಕೆರೆ ಮತ್ತು ಚಿಣ್ಣರ ಹಾಡಿಯ ಜನತೆಯೂ ಕೂಡ ತಮ್ಮ ಮನೆಗಳಿಂದ ಹೊರ ಬರಬೇಕಾದರೆ ನೆದಗರಹೊಳೆ ಅರಣ್ಯದಂಚಿನಲ್ಲಿರುವ ಕೊಲ್ಲಿ ದಾಟಬೇಕು. ಮಳೆ ಹೆಚ್ಚಾದರೆ ಕೊಲ್ಲಿ ದಾಟಲು ಹಾಕಿಕೊಂಡಿರುವ ಮರದ ಸೇತುವೆಗಳು ಕೊಚ್ಚಿ ಹೋದ ಸಂದರ್ಭ ಬಹಳಷ್ಟಿದೆ. ಕಳೆದ ವರ್ಷ ಬಿದ್ದ ಸಾಧಾರಣೆ ಮಳೆಗೆ ಚಿಣ್ಣರ ಹಾಡಿಯ ಕೊಲ್ಲಿ ಸೇತುವೆ ಕೊಚ್ಚಿ ಹೋಗಿತ್ತು. ಜನರ ಓಡಾಟಕ್ಕೆ ಇಲ್ಲಿ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿತ್ತು. ಈ ಬಾರಿ ಈ ಸೇತುವೆಯೂ ಕುಸಿದು ಮತ್ತೆ ಸಮಸ್ಯೆ ಉಂಟುಮಾಡಿದೆ.</p>.<p>ದುಬಾರೆ ಸಂಪರ್ಕ ಕಡಿತ, ಗಿರಿಜನರ ಪರದಾಟ: ಪ್ರತಿ ವರ್ಷ ಮಳೆಗಾಲದಲ್ಲಿ ಮೈದುಂಬಿ ಹರಿಯುವ ಕಾವೇರಿ ನದಿಯಿಂದ ದುಬಾರೆ ಸಂಪರ್ಕ ಕಡಿತಗೊಳ್ಳುತ್ತಿದ್ದು, ದುಬಾರೆ ಅರಣ್ಯ ಪ್ರದೇಶದಲ್ಲಿ ವಾಸಿಸುವ ಹತ್ತಾರು ಕುಟುಂಬಗಳು ಪರದಾಡುವಂತಹ ಪರಿಸ್ಥಿತಿ ಉಂಟಾಗುತ್ತಿದೆ.</p>.<p>ಮಳೆಗಾಲದಲ್ಲಿ ತುಂಬಿ ಹರಿಯುವ ಕಾವೇರಿ ನದಿಯಲ್ಲಿ ದೋಣಿ ಸಂಚಾರ ತುಂಬ ಅಪಾಯಕಾರಿ. ಈ ಭಾಗದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆ ಇದುವರೆಗೂ ಈಡೇರಿಲ್ಲ.</p>.<p>ದುಬಾರೆಯಲ್ಲಿರುವ ಸುಮಾರು 40 ರಿಂದ 50 ಗಿರಿಜನ ಕುಟುಂಬಗಳಿಗೆ ಮಳೆಗಾಲದಲ್ಲಿ ಜೀವನ ನಿರ್ವಹಣೆ ನರಕಯಾತನೆಯಾಗಿದೆ. ಈ ಕುಟುಂಬಗಳು ಜೀವನೋಪಾಯಕ್ಕಾಗಿ ನಂಜರಾಯಪಟ್ಟಣ, ರಂಗಸಮುದ್ರ, ಹೊಸಪಟ್ಟಣ ಗ್ರಾಮಗಳನ್ನು ಅವಲಂಬಿಸಿದ್ದಾರೆ.</p>.<p>ಗಿರಿಜನರು ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಕೂಲಿ ಕೆಲಸಕ್ಕಾಗಿ ಆಸ್ಪತ್ರೆ, ಆಹಾರ, ಸಾಮಾಗ್ರಿ, ಖರೀದಿಗೆ ಹಾಗೂ ಶಿಕ್ಷಣಕ್ಕೆ ಅವರು ನಂಜರಾಯಪಟ್ಟಣ ಬರಬೇಕಾಗಿದೆ. ಗಿರಿಜನರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಯಾಂತ್ರೀಕೃತ ದೋಣಿಗಳ ಮೂಲಕವೇ ಸಂಚಾರ ಮಾಡಬೇಕಾದ ಅನಿರ್ವಾಯತೆ ಇದೆ. ಆದರೆ ತುಂಬಿದ ಕಾವೇರಿ ನದಿಯನ್ನು ದೋಣಿಗಳ ಮೂಲಕ ದಾಟುವುದು ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ತೂಗು ಸೇತುವೆ ನಿರ್ಮಾಣ ಮಾಡಿದರೆ ಪ್ರವಾಸಿಗರಿಗೆ ಮಾತ್ರವಲ್ಲದೆ ದುಬಾರೆ ಗಿರಿಜನರಿಗೂ ಅನುಕೂಲವಾಗುತ್ತದೆ.</p>.<p>ಹಾರಂಗಿ ಜಲಾಶಯದಿಂದ ಹೆಚ್ಚಿನ ನೀರನ್ನು ನದಿಗೆ ಹರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಕೆಳಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಬಂದ್ ಆಗಿದೆ. ಇದರಿಂದ ಅಕ್ಕಪಕ್ಕದ ಗ್ರಾಮಗಳಾದ ಯಡವನಾಡು, ಹುದುಗೂರು, ಅತ್ತೂರು, ದೊಡ್ಡಸೂರು, ಹಾರಂಗಿ ಭಾಗಕ್ಕೆ ಸಂಪರ್ಕ ಕಡಿತಗೊಂಡಿದೆ. ಈ ಗ್ರಾಮಗಳ ಜನರು ಹತ್ತಾರೂ ಕಿಲೋಮೀಟರ್ ದೂರ ಕ್ರಮಿಸಿ ಕೂಡಿಗೆ ಮಾರ್ಗವಾಗಿ ತಮ್ಮ ಗ್ರಾಮಗಳಿಗೆ ತೆರಳಬೇಕಾಗಿದೆ. ಕೂಡ್ಲೂರು ಕೈಗಾರಿಕಾ ಬಡಾವಣೆಗೆ ಹೋಗುವ ಕಾರ್ಮಿಕರಿಗೆ ಹಾಗೂ ರೈತರು ಸೇರಿದಂತೆ ಕೂಲಿ ಕಾರ್ಮಿಕರಿಗೆ ತೊಂದರೆ ಉಂಟಾಗುತ್ತಿದೆ.</p>.<p>ಕಣಿವೆ ರಾಮಲಿಂಗೇಶ್ವರ ದೇವಾಲಯ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯಲ್ಲೂ ಹೆಚ್ಚಿನ ಮಳೆಯಾದಾಗ ನೀರು ಹರಿಯುತ್ತದೆ. ಇದರಿಂದ ಪಿರಿಯಾಪಟ್ಟಣ ತಾಲ್ಲೂಕಿನ ಕೆಲವು ಗ್ರಾಮಗಳ ಜನರಿಗೆ ತೊಂದರೆಯಾಗುತ್ತಿದೆ.</p>.<p>ಇದೇ ರೀತಿ ಇನ್ನೂ ಹೆಚ್ಚಿನ ಉದಾಹರಣೆಗಳು ಜಿಲ್ಲೆಯಲ್ಲಿವೆ. ಸರ್ಕಾರ ಇವುಗಳನ್ನು ಆದ್ಯತೆಯಾಗಿ ಪರಿಗಣಿಸಿ ಎತ್ತರದ ಸೇತುವೆಗಳನ್ನು ನಿರ್ಮಿಸಿ, ಮಳೆಗಾಲವನ್ನು ಸಂಭ್ರಮದಿಂದ ಕಳೆಯುವಂತಹ ವಾತಾವರಣವನ್ನು ಈ ಭಾಗದ ಜನರಿಗೆ ನಿರ್ಮಿಸಿಕೊಡಬೇಕಿದೆ.</p>.<p><em><strong>ಮಾಹಿತಿ: ಸಿ.ಎಸ್.ಸುರೇಶ್, ಡಿ.ಪಿ.ಲೋಕೇಶ್, ಜೆ.ಸೋಮಣ್ಣ, ರಘು ಹೆಬ್ಬಾಲೆ</strong></em></p>.<h2>ಪ್ರತಿಕ್ರಿಯೆಗಳು </h2>.<p>ಎತ್ತರದ ಸೇತುವೆ ನಿರ್ಮಿಸಿ ಗ್ರಾಮೀಣ ಭಾಗಗಳಲ್ಲಿ ಬಹಳ ಹಿಂದೆ ಮಾಡಿರುವ ಕಿರುಸೇತುವೆಗಳನ್ನು ಇಂದಿಗೂ ಹಾಗೇ ಉಳಿಸಿಕೊಂಡು ಬಳಸಲಾಗುತ್ತಿದೆ. ಅವುಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ನಾಲ್ಕಾರು ಅಡಿಗಳಷ್ಟು ಎತ್ತರಕ್ಕೆ ನೂತನ ಸೇತುವೆ ನಿರ್ಮಿಸಿದಲ್ಲಿ ಮಳೆಗಾಲದಲ್ಲಿ ಸ್ಥಳೀಯರು ಪರದಾಡುವುದನ್ನು ತಪ್ಪಿಸಬಹುದು </p><p><em><strong>–ಲಿಂಗೇರಿ ರಾಜೇಶ್ ಯಡವಾರೆ ಗ್ರಾಮ </strong></em></p> <p>ಮಾಹಿತಿ ಫಲಕ ಅಳವಡಿಸಿ ಪ್ರವಾಸೋದ್ಯಮ ಜಿಲ್ಲೆಯಲ್ಲಿ ಸಾಕಷ್ಟು ಬೆಳವಣಿಗೆ ಕಾಣುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಹೋಮ್ ಸ್ಟೇ ರೆಸಾರ್ಟ್ಗಳು ಬಂದು ಹೊರ ಜಿಲ್ಲೆ ಮತ್ತು ರಾಜ್ಯದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಭಾರಿ ಮಳೆಯ ಸಂದರ್ಭ ಹೊಳೆಗಳು ತುಂಬಿ ಸೇತುವೆಯ ಮೇಲೆ ಹರಿಯುವುದು ರಾತ್ರಿಯಲ್ಲಿ ಕಾಣುವುದಿಲ್ಲ. ಪ್ರವಾಸಿಗರು ವೇಗವಾಗಿ ಈ ರಸ್ತೆಯಲ್ಲಿ ಸಂಚರಿಸಿದರೆ ಅಪಾಯ ಎದುರಾಗಲಿದೆ. ಅಲ್ಲದೆ ರಸ್ತೆಯ ಎರಡು ಬದಿಯಲ್ಲೂ ಮಾಹಿತಿ ಫಲಕಗಳನ್ನು ಅಳವಡಿಸಬೇಕಿದೆ. </p><p><em><strong>–ಪಿ. ಮಧು ವಾಹನ ಚಾಲಕರು. </strong></em></p> <p>ದುಬಾರೆಯಲ್ಲಿ ತೂಗುಸೇತುವೆ ನಿರ್ಮಿಸಿ ದುಬಾರೆಗೆ ತೆರಳಲು ಮಳೆಗಾಲದಲ್ಲಿ ಮೈದುಂಬಿ ಹರಿಯುವ ಕಾವೇರಿ ನದಿಯಲ್ಲಿ ದೋಣಿ ಸಂಚಾರ ತುಂಬ ಅಪಾಯಕಾರಿ. ಗಿರಿಜನರ ಹಿತದೃಷ್ಟಿಯಿಂದ ಹಾಗೂ ಪ್ರವಾಸಿಗರ ಸುರಕ್ಷತೆಗೆ ತೂಗುಸೇತುವೆ ನಿರ್ಮಾಣ ಅಗತ್ಯವಾಗಿದೆ. ಸರ್ಕಾರ ಈ ಕುರಿತು ಕೂಡಲೇ ಗಮನ ಹರಿಸಬೇಕು. </p><p><em><strong>–ಆರ್.ಕೆ.ಚಂದ್ರು ಗಿರಿಜನ ಮುಖಂಡ ರಂಗಸಮುದ್ರ. </strong></em></p> <p>ಇದುವರೆಗೂ ಬೇಡಿಕೆ ಈಡೇರಿಲ್ಲ ಹಾರಂಗಿ ಜಲಾಶಯ ತುಂಬಿದ ಸಂದರ್ಭದಲ್ಲಿ ಒಮ್ಮೆಲೆ ಹೆಚ್ಚಿನ ನೀರನ್ನು ನದಿಗೆ ಹರಿಬಿಡಲಾಗುತ್ತದೆ. ಈ ವೇಳೆಯಲ್ಲಿ ಕೆಳಗಿನ ಸೇತುವೆ ಮುಳುಗಡೆಯಾಗಿ ಅಕ್ಕಪಕ್ಕದ ಗ್ರಾಮಗಳಿಗೆ ಸಂಪರ್ಕ ಕಡಿತಗೊಳ್ಳುತ್ತದೆ. ಆದ್ದರಿಂದ ಕೆಳಗಿನ ಸೇತುವೆ ಎತ್ತರವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಅಥವಾ ಈ ಭಾಗದ ಹೊಸ ಸೇತುವೆ ನಿರ್ಮಾಣ ಮಾಡಬೇಕು ಎಂದು ನೀರಾವರಿ ಇಲಾಖೆಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಈ ಭಾಗದ ಜನರ ಬೇಡಿಕೆ ಈಡೇರಿಲ್ಲ. </p><p><em><strong>–ಭಾಸ್ಕರ್ ನಾಯಕ ಅಧ್ಯಕ್ಷ ಕೂಡುಮಂಗಳೂರು ಗ್ರಾಮ ಪಂಚಾಯತಿ </strong></em></p> <p>ಹಾರಂಗಿ ಮಳೆಗಾಲದಲ್ಲಿ ದುಬಾರೆ ಜನರಿಗೆ ಸಂಕಷ್ಟ ಪ್ರತಿ ವರ್ಷ ಮಳೆಗಾಲದಲ್ಲಿ ಕಾವೇರಿ ನದಿ ಉಕ್ಕಿ ಹರಿಯುವುದರಿಂದ ದುಬಾರೆ ಸಂಪರ್ಕ ಕಡಿತಗೊಳ್ಳುತ್ತದೆ. ಇದರಿಂದ ದುಬಾರೆ ಸಾಕಾನೆ ಶಿಬಿರದ ಅರಣ್ಯ ಪ್ರದೇಶದಲ್ಲಿ ವಾಸಿಸುವ ಗಿರಿಜನ ಕುಟುಂಬಗಳಿಗೆ ತುಂಬ ತೊಂದರೆ ಉಂಟಾಗುತ್ತದೆ. ಆದ್ದರಿಂದ ಈ ಭಾಗದಲ್ಲಿ ತೂಗುಸೇತುವೆ ಅಗತ್ಯವಾಗಿದೆ. </p><p><em><strong>–ಸಿ.ಎಲ್.ವಿಶ್ವ ಅಧ್ಯಕ್ಷ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>