ವಿರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯ ರಾಜ ಕಾಲುವೆಯ ನೀರಿನ ಹೊಡೆತಕ್ಕೆ ಸಮೀಪದ ಮನೆಯ ತಡೆಗೋಡೆಯು ಕುಸಿದ ಸ್ಥಳಕ್ಕೆ ಪುರಸಭೆ ಸದಸ್ಯೆ ಫಸಿಯಾ ತಬಸುಮ್ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು
ಮಳೆ ಪ್ರಮಾಣ ಇಳಿಕೆಯಾಗಿರುವುದರಿಂದ ಭಾಗಮಂಡಲದಲ್ಲಿ ಪ್ರವಾಹದ ನೀರು ಕಡಿಮೆಯಾಗಿ ಗುರುವಾರ ಉದ್ಯಾನ ಗೋಚರಿಸಿತು
ತೆರೆದಿರುವ ಕಾಳಜಿ ಕೇಂದ್ರಗಳು 10 ಬಿದ್ದಿರುವ ವಿದ್ಯುತ್ ಕಂಬಗಳು 37 ಭೂಕುಸಿತ ಉಂಟಾದ ಸ್ಥಳಗಳು 02
ಸಿದ್ದಾಪುರದಲ್ಲಿ ತಗ್ಗದ ಪ್ರವಾಹ ಭೀತಿ
ಸಿದ್ದಾಪುರ: ಕಾವೇರಿ ನದಿ ತೀರದಲ್ಲಿ ಎದುರಾಗಿರುವ ಪ್ರವಾಹ ಭೀತಿ ಇನ್ನೂ ಕಡಿಮೆಯಾಗಿಲ್ಲ. ನದಿ ಪಾತ್ರದ 24 ಕುಟುಂಬಗಳ ಒಟ್ಟು 76 ಮಂದಿಯನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಕರಡಿಗೋಡು ಗ್ರಾಮದಲ್ಲಿ 16 ಮನೆಗಳು ಜಲಾವೃತಗೊಂಡಿವೆ. ಚಿಕ್ಕನಹಳ್ಳಿ ಕರಡಿಗೋಡು ಗ್ರಾಮದ ನದಿ ದಡದ ಅಪಾಯದಂಚಿನಲ್ಲಿ ಇರುವವರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕರಡಿಗೋಡು ಚಿಕ್ಕನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಜಲಾವೃತಗೊಂಡಿದೆ. ಗುಹ್ಯ ಗ್ರಾಮದಲ್ಲೂ ಪ್ರವಾಹ ಭೀತಿ ಎದುರಾಗಿದ್ದು ಗುಹ್ಯ ಗ್ರಾಮದ ಕಕ್ಕಟ್ಟುಕಾಡುವಿಗೆ ತೆರಳುವ ರಸ್ತೆ ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ. ಕೂಡುಗದ್ದೆ ಭಾಗದಲ್ಲೂ ನದಿ ದಡದ ನಿವಾಸಿಗಳ ಮನೆಗಳ ಸಮೀಪದಲ್ಲೇ ನದಿ ತುಂಬಿ ಹರಿಯುತ್ತಿದೆ. ಹಚ್ಚಿನಾಡು ವ್ಯಾಪ್ತಿಯಲ್ಲಿ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು ಹಚ್ಚಿನಾಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ನದಿ ದಡದ 10 ಕುಟುಂಬಗಳ 44 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ವಿರಾಜಪೇಟೆ ತಹಶೀಲ್ದಾರ್ ರಾಮಚಂದ್ರ ಅಮ್ಮತ್ತಿ ಕಂದಾಯ ಪರಿವೀಕ್ಷಕ ಅನಿಲ್ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ. ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು ಬರಡಿ ಹಾಗೂ ಕುಂಬಾರಗುಂಡಿ ವ್ಯಾಪ್ತಿಯಲ್ಲೂ ಪ್ರವಾಹದ ಭೀತಿ ಎದುರಾಗಿದ್ದು ಸ್ಥಳಕ್ಕೆ ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ ಕಂದಾಯ ಪರಿವೀಕ್ಷಕ ಸಂತೋಷ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆ ಇಳಿಕೆಯಾದರೂ ಮುಂದುವರೆದ ಹಾನಿ
ವಿರಾಜಪೇಟೆ: ಕಳೆದ 3 ದಿನಗಳಿಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಆರ್ಭಟ ಗುರುವಾರ ಇಳಿಮುಖಗೊಂಡಿತು. ಆದರೂ ಸಮೀಪದ ಭೇತ್ರಿಯಲ್ಲಿ ಕಾವೇರಿ ಹೊಳೆ ಹಾಗೂ ಕದನೂರು ಹೊಳೆ ಉಕ್ಕಿ ಹರಿಯುತ್ತಿವೆ. ಕೆಲವೆಡೆ ಗದ್ದೆಗಳು ಗುರುವಾರವೂ ಜಲಾವೃತಗೊಂಡ ಸ್ಥಿತಿಯಲ್ಲಿಯೇ ಇವೆ. ಪಟ್ಟಣದ ಅಪ್ಪಯ್ಯಸ್ವಾಮಿ ರಸ್ತೆಯ ರಾಜ ಕಾಲುವೆಯ ನೀರಿನ ಹೊಡೆತಕ್ಕೆ ಸಮೀಪದ ಮನೆಯ ತಡೆಗೋಡೆಯು ಕುಸಿದಿದೆ. ಸ್ಥಳಕ್ಕೆ ಪುರಸಭೆಯ ಸ್ಥಳೀಯ ಸದಸ್ಯೆ ಫಸಿಯಾ ತಬಸುಮ್ ಪುರಸಭೆಯ ಆರೋಗ್ಯ ಅಧಿಕಾರಿ ರಫಿಕ್ ಹಾಗೂ ಇತರರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಪ್ರವಾಹದಿಂದ ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಕಸ ತುಂಬಿದ್ದ ಕಾಲುವೆಯನ್ನು ಕಾರ್ಮಿಕರ ಮೂಲಕ ಸ್ವಚ್ಛಗೊಳಿಸಿದರು. ಇದರಿಂದ ಮಳೆ ನೀರು ಕಾಲುವೆಯಲ್ಲಿ ಸರಾಗವಾಗಿ ಹರಿಯುವಂತಾಯಿತು. ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟೋಳಿಯ ನಿವಾಸಿ ಎಂ.ಯು.ನಬೀಸಾ ಎಂಬುವವರ ಮನೆಯು ಕುಸಿದು ಬಿದ್ದಿದೆ. ಮೊದಲು ಮನೆಯು ಭಾಗಶಃ ಕುಸಿದ್ದರಿಂದ ಎಚ್ಚೆತ್ತುಕೊಂಡ ನಬೀಸ ಅವರು ಸಂಬಂಧಿಕರ ಮನೆಗೆ ಹೋಗಿದ್ದರು. ಇದರಿಂದ ಮನೆ ಕುಸಿದ ಸಂದರ್ಭ ಯಾರೂ ಮನೆಯಲ್ಲಿ ಇಲ್ಲದ್ದರಿಂದ ಅಪಾಯವಾಗಲಿಲ್ಲ. ಸ್ಥಳಕ್ಕೆ ಕೆದಮುಳ್ಳೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಜೆಫ್ರಿ ಉತ್ತಪ್ಪ ಅಭಿವೃದ್ಧಿ ಅಧಿಕಾರಿ ಬಿ. ಮಣಿ ಸದಸ್ಯರಾದ ಎಂ.ಎಂ.ಇಸ್ಮಾಯಿಲ್ ಮತ್ತು ಗ್ರಾಮ ಲೆಕ್ಕಿಗರಾದ ಅನುಷಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.