ಮಂಗಳವಾರ, 2 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗೀತ ನಿರ್ದೇಶಕ ಹಂಸಲೇಖಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ಪ್ರದಾನ

Published 30 ಜೂನ್ 2024, 14:30 IST
Last Updated 30 ಜೂನ್ 2024, 14:30 IST
ಅಕ್ಷರ ಗಾತ್ರ

ಮಂಡ್ಯ: ‘ಯಾವುದೇ ಭೇದಭಾವವಿಲ್ಲದೇ ಎಲ್ಲ ಮಕ್ಕಳಿಗೆ ಐದು ಸಂಗೀತ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಗಂಗೂಬಾಯಿ ಹಾನಗಲ್‌ ಸಂಗೀತ ವಿಶ್ವವಿದ್ಯಾನಿಲಯದ ಮೂಲಕ ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಜುಲೈ 15ರಿಂದ ಆರಂಭಿಸುತ್ತಿದ್ದೇನೆ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದರು.

ನಗರದ ರೈತ ಸಭಾಂಗಣದಲ್ಲಿ ಕರ್ನಾಟಕ ಸಂಘ, ಎಂ.ಎಲ್‌.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ದೇಸಿ ಸಂಗೀತ ಶಾಲೆಯನ್ನು ಸ್ಥಾಪನೆ ಮಾಡುವ ಮೂಲಕ ಸಂಗೀತಾಸಕ್ತರಿಗೆ ತರಬೇತಿ ನೀಡುತ್ತಿದ್ದೇವೆ. ಕರ್ನಾಟಕ ಸಂಗೀತ ಸರ್ಟಿಫಿಕೇಟ್‌ ಕೋರ್ಸ್‌, ಹಿಂದೂಸ್ತಾನಿ ಸಂಗೀತ ಸರ್ಟಿಫಿಕೇಟ್‌ ಕೋರ್ಸ್‌, ಐದನೇ ಸಂಗೀತ ಶಾಸ್ತ್ರ ಸರ್ಟಿಫಿಕೇಟ್‌ ಕೋರ್ಸ್‌, ಸುಗಮ ಸಂಗೀತ ಸರ್ಟಿಫಿಕೇಟ್‌ ಕೋರ್ಸ್‌ ಹಾಗೂ ಮುಖ್ಯವಾಗಿ ಸಿನಿಮಾ ಸಂಗೀತದ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಜು.15ರಿಂದ ಆರಂಭಿಸಲಾಗುತ್ತಿದೆ ಎಂದು ಹೇಳಿದರು. 

ಕರ್ನಾಟಕ ಸಂಘದ ಕಚೇರಿಯಲ್ಲಿ ಶಿಸ್ತು ಇದೆ. ಒಂದು ಸಭಾಭವನವನ್ನು ನಿರ್ಮಾಣ ಮಾಡುತ್ತಿರುವುದರಿಂದ ನಾನು ಒಂದು ಸಂಗೀತ ಕಾರ್ಯಕ್ರಮವನ್ನು ನನ್ನ ಖರ್ಚಿನಲ್ಲಿಯೇ ಮಾಡಿಕೊಡುತ್ತೇನೆ. ಅದರಿಂದ ಬರುವ ಹಣವನ್ನು ಭವನ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು ಎಂದು ಭರವಸೆ ನೀಡಿದರು.

ನನಗೆ ಗೌರವಯುತವಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ನೀಡಿ ಋಣಭಾರ ಹೆಚ್ಚು ಮಾಡಿದ್ದೀರಾ. ಬುದ್ಧ, ಬಸವ, ಅಂಬೇಡ್ಕರ್‌ ಅವರು ನನ್ನ ಮನಸಿನಲ್ಲಿ ಸದಾ ಹರಿಯುತ್ತಿರುತ್ತಾರೆ. ಕೆ.ವಿ.ಶಂಕರಗೌಡ ಅವರ ಪರಮ ಅಭಿಮಾನಿಯಾಗಿರುವೆ. ಈ ಹಿಂದೆ ಅವರ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸಿದ್ದೆ. ಇಂದು ಈ ಪ್ರಶಸ್ತಿ ನೀಡಲು ಆಯ್ಕೆ ಮಾಡಿದವರಿಗೆಲ್ಲ ಹೃದಯಸ್ಪರ್ಶಿ ಕೃತಜ್ಞತೆ ತಿಳಿಸುವೆ ಎಂದರು.

ಲತಾ ಹಂಸಲೇಖ, ಐಪಿಎಸ್‌ ಅಧಿಕಾರಿ ಬಿ.ಆರ್‌.ರವಿಕಾಂತೇಗೌಡ, ಪುರುಷೋತ್ತಮಾನಂದನಾಥ ಸ್ವಾಮೀಜಿ, ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು, ಶಾಸಕ ಪಿ.ರವಿಕುಮಾರ್‌, ಸಚಿವ ಎನ್‌.ಚಲುವರಾಯಸ್ವಾಮಿ, ಪ್ರೊ.ಜಯಪ್ರಕಾಶಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮುಂತಾದವರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT