ಮೈಸೂರು: ‘ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ 50 ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಕಲೆ, ವಾಸ್ತುಶಿಲ್ಪ, ಪ್ರವಾಸೋದ್ಯಮ, ಜಾನಪದ, ಸಮಾನತೆ, ಭ್ರಾತೃತ್ವ ಹಾಗೂ ಸಂವಿಧಾನದ ಮಹತ್ವ ಮೊದಲಾದ ವಿಷಯಗಳಿಗೆ ಆದ್ಯತೆ ನೀಡಲಾಗಿದೆ’ ಎಂದು ದಸರಾ ಸ್ತಬ್ಧಚಿತ್ರ ಉಪ ಸಮಿತಿ ಅಧ್ಯಕ್ಷ ಪ್ರಶಾಂತ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಬಂಡೀಪಾಳ್ಯದ ಎಪಿಎಂಸಿ ಯಾರ್ಡ್ನಲ್ಲಿ ಸ್ತಬ್ಧಚಿತ್ರ ನಿರ್ಮಾಣ ಭರದಿಂದ ಸಾಗಿದ್ದು, ಶೇ 80ರಷ್ಟು ಮುಗಿದಿದೆ. ಅ.11ರ ರಾತ್ರಿ ಅರಮನೆ ಆವರಣ ಪ್ರವೇಶಿಸಲಿವೆ. ಪ್ರದರ್ಶನದಲ್ಲಿ ಒಂದು ಸ್ತಬ್ಧಚಿತ್ರದ ಹಿಂದೆ ಒಂದು ಕಲಾತಂಡ ಇರಲಿದೆ’ ಎಂದು ಮಾಹಿತಿ ನೀಡಿದರು.
‘31 ಜಿಲ್ಲೆ ಮಾತ್ರವಲ್ಲದೇ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ. ಮೈಸೂರು ಜಿಲ್ಲೆಯಿಂದ ‘ಮಾನವಕುಲದ ಸಮಾನತೆ, ಧಾರ್ಮಿಕ ಬೆಳಕಿನಿಂದ ಸಾಂವಿಧಾನಿಕ ನ್ಯಾಯದವರೆಗೂ’ ವಿಷಯ ಕುರಿತ ಸ್ತಬ್ಧಚಿತ್ರ ಇರಲಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಈಶ್ವರ ಚಕ್ಕಡಿ, ಪರಮೇಶ್ ನಾಯಕ್, ಲಿಖಿತಾ, ಮಂಜುನಾಥ್ ಇದ್ದರು.