ಮೈಸೂರು: ‘ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಾಹಿತಿಗಳನ್ನೇ ಆಯ್ಕೆ ಮಾಡಬೇಕು’ ಎಂದು ಸಾಹಿತಿ ಸಿ.ಪಿ. ಕೃಷ್ಣಕುಮಾರ್ ಒತ್ತಾಯಿಸಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಸಂಜೆ ನಡೆದ ಕನ್ನಡ ಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
‘ಸಾಹಿತ್ಯೇತರ ವ್ಯಕ್ತಿಯನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡಲು ಚಿಂತನೆ ನಡೆಸಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿಕೆ ಹಾಸ್ಯಾಸ್ಪದ ಹಾಗೂ ಮೂರ್ಖತನದ ಪರಮಾವಧಿ’ ಎಂದು ಆಕ್ಷೇಪಿಸಿದರು.
‘ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಸಾಹಿತಿಗಳೇ ಆಯ್ಕೆ ಆಗದಿದ್ದರೆ ಇನ್ಯಾವ ಪುರುಷಾರ್ಥಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿ, ಕೋಟ್ಯಂತರ ರೂಪಾಯಿ ಸರ್ಕಾರದ ಹಣ ಪೋಲು ಮಾಡಬೇಕು’ ಎಂದು ಪ್ರಶ್ನಿಸಿದರು.
ಕನ್ನಡ ಕಾವಲು ಪಡೆ ಅಧ್ಯಕ್ಷ ಮೋಹನ್ ಕುಮಾರ ಗೌಡ ಮಾತನಾಡಿ, ‘ಕನ್ನಡ ಸಾಹಿತ್ಯ ರಕ್ಷಿಸಿ ಪೋಷಿಸಬೇಕಾದ ಪರಿಷತ್ತಿನ ಅಧ್ಯಕ್ಷರೇ ತಲೆಕೆಟ್ಟವರಂತೆ ಮಾತಾಡುತ್ತಿರುವುದು ಅಸಹ್ಯಕರವಾಗಿದೆ’ ಎಂದರು.
ಕುವೆಂಪು ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆ ಅಧ್ಯಕ್ಷ ಎಂ.ಜೆ.ಸುರೇಶ ಗೌಡ, ಮೈಸೂರು ಪತ್ರಿಕಾ ವಿತರಕರ ಸಂಘದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಲೇಖಕ ಎಸ್. ಪ್ರಕಾಶ್ ಬಾಬು ಮೊದಲಾದವರು ಮಾತನಾಡಿ, ಮಹೇಶ್ ಜೋಶಿ ಹೇಳಿಕೆಯನ್ನು ಖಂಡಿಸಿದರು.