ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂಐಟಿ ಪದವಿ ಕಾಲೇಜಿನಲ್ಲಿ ಶುಕ್ರವಾರ ಮತ ಯಾಚಿಸಿದರು
ಬೆಂಬಲ ಕೋರಿದ ಯದುವೀರ್
ಎಂಐಟಿ ಪದವಿ ಕಾಲೇಜಿನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಯದುವೀರ್ ‘ನಾನು ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಈ ಚುನಾವಣೆಯಲ್ಲಿ ಕಣಕ್ಕಿಳಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ ಬಂದಿದ್ದೇನೆ. ಸಮಾಜಸೇವೆಯ ಮೂಲಕ ನಿಮಗೆ ನೆರವಾಗಬೇಕು ಎಂದು ಬಯಸಿದ್ದೇನೆ. ಮೈಸೂರು ಅರಸರು ಹಾಗೂ ನಿಮಗಿರುವ ಭಾವನಾತ್ಮಕ ಸಂಬಂಧವನ್ನು ಮುಂದಿಟ್ಟುಕೊಂಡು ಬೆಂಬಲ ಕೇಳುತ್ತಿಲ್ಲ. ನೀವು ತೋರಿದ ಪ್ರೀತಿಯ ಋಣ ತೀರಿಸಲು ನಾನು ಅವಕಾಶ ಕೇಳುತ್ತಿದ್ದೇನೆ’ ಎಂದರು. ‘ಮೈಸೂರು ಮಹಾರಾಜರು ಜನರ ಜೀವನಮಟ್ಟ ಸುಧಾರಿಸಲು ಶ್ರಮಿಸಿದ್ದರು. ಅದೇ ರೀತಿ ಈಗಿನ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಸ್ವಾವಲಂಬಿಯಾಗಿಸಲು ಕೆಲಸ ಮಾಡುತ್ತಿದ್ದಾರೆ. ವಿಕಸಿತ ಭಾರತಕ್ಕಾಗಿ ನಮಗೆ ಶಕ್ತಿ ತುಂಬಬೇಕು. ಶ್ರೇಷ್ಠ ಭಾರತ ನಿರ್ಮಾಣಕ್ಕಾಗಿ ಕೈಜೋಡಿಸಬೇಕು’ ಎಂದು ಕೋರಿದರು. ನಂತರ ಅವರು ಬಾಬು ಜಗಜೀವನ್ರಾಂ ಜಯಂತಿ ಅಂಗವಾಗಿ ಮುಖಂಡರೊಂದಿಗೆ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ವಿವಿಧ ಕಾಲೇಜುಗಳು ಹಾಗೂ ಉದ್ದಿಮೆಗಳಿಗೆ ತೆರಳಿ ಅಲ್ಲಿನವರಿಂದ ಮತ ಯಾಚಿಸಿದರು. ಕುರಿಮಂಡಿ ಗಣೇಶ ನಗರ ಮತ್ತು ವೀರನಗೆರೆಯಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ನಡೆಸಿದರು.