ಮೈಸೂರು: ಇಲ್ಲಿನ ಲೋಕಾಯುಕ್ತ ಪೊಲೀಸರು ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದು, ದಸರಾ ಹಬ್ಬದ ಬಳಿಕ ವಿಚಾರಣೆಗೆ ಬರುವಂತೆ ಆರೋಪಿಗಳಿಗೆ ಸಮನ್ಸ್ ನೀಡುವ ಸಾಧ್ಯತೆ ಇದೆ.
ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಆರೋಪಿಯಾಗಿದ್ದು, ಅವರ ಪತ್ನಿ ಬಿ.ಎಂ. ಪಾರ್ವತಿ ಎರಡನೇ ಆರೋಪಿ, ಭಾವಮೈದುನ ಮಲ್ಲಿಕಾರ್ಜುನಸ್ವಾಮಿ ಮೂರನೇ ಹಾಗೂ ಜಮೀನಿನ ಮಾಲೀಕ ದೇವರಾಜು ನಾಲ್ಕನೇ ಆರೋಪಿಯಾಗಿದ್ದಾರೆ.
ಪ್ರಕರಣದ ತನಿಖೆಗೆಂದು ಲೋಕಾಯುಕ್ತ ಎಸ್.ಪಿ. ಟಿ.ಜೆ. ಉದೇಶ್ ನಾಲ್ಕು ತಂಡಗಳನ್ನು ರಚಿಸಿದ್ದು, ಕೆಸರೆ ಗ್ರಾಮದ ವಿವಾದಿತ ಜಮೀನು ಹಾಗೂ ವಿಜಯನಗರದಲ್ಲಿ ಮುಡಾ ನೀಡಿದ್ದ 14 ಬದಲಿ ನಿವೇಶನಗಳ ಸ್ಥಳ ಮಹಜರು ಮುಗಿದಿದೆ.
ಕೆಲವು ದಿನಗಳಿಂದ ತನಿಖಾಧಿಕಾರಿಗಳ ತಂಡವು ಮುಡಾದಲ್ಲಿ ದಾಖಲೆಗಳ ಪರಿಶೀಲನೆ ಹಾಗೂ ದೃಢೀಕೃತ ಪ್ರತಿಗಳನ್ನು ಪಡೆದುಕೊಳ್ಳುವ ಕೆಲಸದಲ್ಲಿ ತೊಡಗಿದೆ. ಸೋಮವಾರವೂ ಮುಡಾ ಕಚೇರಿಯಲ್ಲಿ ಪರಿಶೀಲನೆ ಮುಂದುವರಿದಿತ್ತು. ಮುಡಾದಲ್ಲಿ ಪಡೆದ ಭೂದಾಖಲೆಗಳನ್ನು ತಹಶೀಲ್ದಾರ್ ಕಚೇರಿಯಲ್ಲಿ ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.