ರಾಮನಗರ: ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಳೆದ 8 ವರ್ಷಗಳಲ್ಲಿ ಜಿಲ್ಲೆಯಲ್ಲಿ ಇದುವರೆಗೆ 16,071 ಸ್ವ ಸಹಾಯ ಸಂಘಗಳನ್ನು ರಚನೆ ಮಾಡಿದೆ’ ಎಂದು ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಹೇಳಿದರು.
ನಗರದಲ್ಲಿರುವ ರಾಮನಗರದ ಜಿಲ್ಲಾ ಯೋಜನಾ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ನ ಜನೋಪಯೋಗಿ ಕಾರ್ಯಕ್ರಮಗಳ ಸಾಧನಾ ವರದಿ ಬಿಡುಗಡೆ ಹಾಗೂ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಸಂಘಗಳ ಸದಸ್ಯರಿಗೆ ಮರುಪಾವತಿ ಸಮಸ್ಯೆ ಎದುರಾದರೆ, ಅಂತಹವರಿಗೆ ಜೀವಭದ್ರತೆ ಒದಗಿಸುವ ಪ್ರಗತಿ ರಕ್ಷಾ ಕವಚ ಕಾರ್ಯಕ್ರಮ ಜಾರಿಯಲ್ಲಿದೆ. ಪ್ರಸಕ್ತ ವರ್ಷ 826 ಸದಸ್ಯರಿಗೆ ₹1.16 ಕೋಟಿ ಮೊತ್ತದ ವಿಮಾ ಸೌಲಭ್ಯ ಒದಗಿಸಲಾಗಿದೆ’ ಎಂದು ತಿಳಿಸಿದರು.
‘ಪ್ರಸ್ತುತ ವರ್ಷ ನಾವು 130 ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದೇವೆ. ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ₹30 ಲಕ್ಷ ಅನುದಾನದಲ್ಲಿ ಇದುವರೆಗೂ 9 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದರು.
ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್, ಜಿಲ್ಲಾ ಯೋಜನಾ ನಿರ್ದೇಶಕ ಜಯಕರ ಶೆಟ್ಟಿ, ಯೋಜನಾಧಿಕಾರಿಗಳಾದ ನಾಗಭೂಷಣ್ ಪೈ, ಮುರಳೀಧರ್, ಅಶ್ವಿನ್, ಪುಷ್ಪಾ, ನಾಗವೇಣಿ, ರೇಷ್ಮಾ ಹಾಗೂ ಸಂತೋಷ್ ಇದ್ದರು.