ವಿಜಯಪುರ: ಜಿಲ್ಲೆಯ ಕೊಲ್ಹಾರ ಸಮೀಪ ಬಳೂತಿಯಲ್ಲಿ ಜುಲೈ 2ರಂದು ಸಂಜೆ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ತಪ್ಪಿಸಿಕೊಳ್ಳಲು ಯತ್ನಿಸಿ ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ, ಸಾವಿಗೀಡಾಗಿದ್ದ ಐವರ ಪೈಕಿ ಗುರುವಾರ ಬೆಳಿಗ್ಗೆ ಇಬ್ಬರ ಶವ ಪತ್ತೆಯಾಗಿದೆ.
ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸ್ಥಳೀಯ ಮೀನುಗಾರರ ನೆರವಿನೊಂದಿಗೆ ಗುರುವಾರ ಬೆಳಿಗ್ಗೆ ಕೃಷ್ಣಾ ನದಿಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ
ರಫೀಕ್ ಬಾಂಬೆ ಹಾಗೂ ಮೆಹಬೂಬ್ ವಾಲಿಕಾರ ಅವರ ಶವಗಳು ಪತ್ತೆಯಾಗಿವೆ.
ಜುಲೈ 2ರಂದು ಸಂಜೆ 4.30 ರ ಸುಮಾರಿಗೆ ಈ ದುರಂತ ಸಂಭವಿಸಿತ್ತು.
ಘಟನೆಯಲ್ಲಿ ಸಾವಿಗೀಡಾಗಿದ್ದ
ಪುಂಡಲಿಕ ಯಂಕಂಚಿ, ತಯ್ಯಬ್ ಚೌಧರಿ, ದಶರಥ ಗೌಡರ ಅವರ ಶವಗಳು ಬುಧವಾರವೇ ಪತ್ತೆಯಾಗಿದ್ದವು, ಇನ್ನುಳಿದ ಇಬ್ಬರ ಶವ ಪತ್ತೆಯಾಗಿರಲಿಲ್ಲ.
ಘಟನೆಯಲ್ಲಿ ಒಟ್ಟು ಐವರು ಸಾವಿಗೀಡಾಗಿದ್ದು, ಮೂವರು ಬದುಕುಳಿದ್ದಿದ್ದಾರೆ.