ಯಾದಗಿರಿ: ರಾಯಚೂರು ಲೋಕಸಭೆ ಚುನಾವಣೆ, ಸುರಪುರ ಉಪಚುನಾವಣೆ ದಿನದಿನಕ್ಕೆ ರಂಗೇರುತ್ತಿದ್ದು, ಚುನಾವಣೆಯದ್ದೆ ಚರ್ಚೆ ನಡೆಯುತ್ತಿದೆ.
ಜಿಲ್ಲೆಯಲ್ಲಿ ನಾಲ್ಕು ಮತಕ್ಷೇತ್ರಗಳಿದ್ದು, ಯಾದಗಿರಿ, ಶಹಾಪುರ, ಸುರಪುರ ರಾಯಚೂರು ಲೋಕಸಭಾ ಕ್ಷೇತ್ರ, ಗುರುಮಠಕಲ್ ಕಲಬುರಗಿ ಮತಕ್ಷೇತ್ರಕ್ಕೆ ಒಳಪಟ್ಟಿದೆ.
ಲೋಕಸಭೆ ಚುನಾವಣೆಗಿಂತ ಸುರಪುರ ಉಪಚುನಾವಣಾ ಕಣ ರಂಗೇರಿದೆ. ಒಂದು ವರ್ಷದೊಳಗೆ ಚುನಾವಣೆ ಎದುರಾಗಿದ್ದರಿಂದ ಜನ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಮುಖಂಡರು, ನಾಯಕರು ಸಣ್ಣಪುಟ್ಟ ದೇವಸ್ಥಾನ, ಕಲ್ಯಾಣ ಮಂಟಪಗಳಲ್ಲಿ ಸಭೆ ಸೇರಿ ಪ್ರಚಾರ ಮಾಡುತ್ತಿದ್ದಾರೆ. ಮತದಾರರ ಜತೆಗೆ ನಿರಂತರ ಸಂಪರ್ಕ, ಹಳ್ಳಿಗಳಿಗೆ ಭೇಟಿ, ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಮತದಾರರಿಗೆ ಹಲವಾರು ಭರವಸೆಗಳನ್ನು ನೀಡುತ್ತಿದ್ದಾರೆ.
ಮೇ 7ರಂದು ಚುನಾವಣಾ ನಿಗದಿಯಾಗಿದ್ದು, ಬಹಿರಂಗ ಪ್ರಚಾರಕ್ಕೆ 5 ದಿನ ಉಳಿದಿದೆ. ಹೀಗಾಗಿ ಮನೆ ಮನೆಗೆ ಪ್ರಚಾರಕ್ಕೆ ತೆರಳುವ ರಾಜಕೀಯ ನಾಯಕರು ಮತದಾರರನ್ನು ತಲುಪುತ್ತಿದ್ದಾರೆ. ಬಹಿರಂಗ ಪ್ರಚಾರ, ರೋಡ್ ಶೋ ಮೂಲಕ ಕ್ಷೇತ್ರದಲ್ಲಿ ಅಖಾಡದಲ್ಲಿ ತೊಡಗಿಸಿಕೊಂಡಿದ್ದಾರೆ.