ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಬೆಟ್ಟ ಗುಡ್ಡಗಳಿಗೆ ಹಸಿರು ಹೊದಿಕೆ

ಹತ್ತಿ, ತೊಗರಿ ಬೆಳೆಯಲ್ಲಿ ಜೀವ ಕಳೆ– ಬಹುತೇಕ ಕೆರೆಗಳು ಭರ್ತಿ
Published : 9 ಸೆಪ್ಟೆಂಬರ್ 2024, 4:32 IST
Last Updated : 9 ಸೆಪ್ಟೆಂಬರ್ 2024, 4:32 IST
ಫಾಲೋ ಮಾಡಿ
Comments

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ 15 ದಿನಗಳಿಂದ ಆಗಾಗ ಮಳೆ ಸುರಿಯುತ್ತಿದ್ದು, ಬೆಟ್ಟ, ಗುಡ್ಡ ಸೇರಿದಂತೆ ಎಲ್ಲೆಡೆ ಹಸಿರು ಹೊದಿಕೆ ಆವರಿಸಿದೆ.

ಜಿಲ್ಲೆಯಲ್ಲಿ 2024ರ ಜನವರಿ 1 ರಿಂದ ಸೆಪ್ಟೆಂಬರ್ 6ರವರೆಗೆ ವಾಡಿಕೆ ಮಳೆ 450 ಮಿಲಿ ಮೀಟರ್‌ (ಎಂಎಂ) ಇದ್ದು, 555 ಎಂಎಂ ಮಳೆ ಸುರಿದಿದೆ. ಜೂನ್ ಒಂದರಿಂದ ಸೆಪ್ಟೆಂಬರ್ 6ರವರೆಗೆ 383 ಎಂಎಂ ವಾಡಿಕೆ ಮಳೆ ಇದ್ದು, 467 ಎಂಎಂ ಮಳೆಯಾಗಿದೆ. ಸೆಪ್ಟೆಂಬರ್ ತಿಂಗಳ 1ರಿಂದ 6ನೇ ತಾರೀಖಿನವರೆಗೆ 26 ಎಂಎಂ ಮಳೆಯಾಗಬೇಕಾಗಿತ್ತು. 67 ಎಂಎಂ ಮಳೆ ಸುರಿದಿದೆ.

ಕಳೆದ ಒಂದು ವಾರದಲ್ಲಿ ಸುರಿದ ಉತ್ತಮ ಮಳೆಯಿಂದ ರಸ್ತೆಯ ಇಕ್ಕೆಲಗಳಲ್ಲಿ ಇರುವ ಮರಗಳು ಸಮೃದ್ಧವಾಗಿ ಹಸಿರಿನಿಂದ ನಳನಳಿಸುತ್ತಿವೆ. ಬೆಟ್ಟ ಗುಡ್ಡಗಳಲ್ಲಿ ಇರುವ ಗಿಡಗಳು ಮಳೆಯಿಂದ ಪುಟಿದೆದ್ದಿದ್ದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಇದರಿಂದ ಬೆಟ್ಟ ಗುಡ್ಡಗಳು ಹಸಿರು ಹೊದಿಕೆ ಹೊದ್ದುಕೊಂಡಂತೆ ಭಾಸವಾಗುತ್ತಿದೆ.

ಆಗಸ್ಟ್‌ ಕೊನೆಯ ವಾರ ಹಾಗೂ ಸೆ‍ಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಸುರಿದ ಮಳೆಯಿಂದಾಗಿ ಹತ್ತಿ ಹಾಗೂ ತೊಗರಿ ಬೆಳೆಯಲ್ಲಿ ಜೀವ ಕಳೆ ಬಂದಿದೆ.

ಜೂನ್ ತಿಂಗಳಲ್ಲಿ ಬಂದ ಅಲ್ಪ ಸ್ವಲ್ಪ ಮಳೆಯಿಂದಾಗಿ ಜಮೀನಿನಲ್ಲಿ ಇದ್ದ ಹತ್ತಿ ಬೆಳೆ ಒಣಗುವ ಹಂತ ತಲುಪಿದ್ದವು. ಸಾಲ ಸೋಲ ಮಾಡಿ ದುಬಾರಿ ಬೆಲೆಯ ಹತ್ತಿ ಬೀಜಗಳನ್ನು ತಂದು ಜಮೀನಲ್ಲಿ ಬಿತ್ತನೆಯನ್ನು ಮಾಡಿದ್ದರು. ಇದರ ಜತೆಗೆ ರಾಸಾಯನಿಕ‌ ಗೊಬ್ಬರವನ್ನೂ ಹಾಕಿದ್ದರು. ಆದರೆ, ಸಕಾಲದಲ್ಲಿ ಮಳೆ ಬಾರದೆ ಇರುವುದರಿಂದ ರೈತರ ಮುಖದಲ್ಲಿ ಕರಾಳಛಾಯೆ ಆವರಿಸಿತ್ತು.

ಆದರೆ, ಕಳೆದ ಒಂದು ವಾರದಿಂದ ಧರೆಗೆ ಇಳಿದ ವರುಣನಿಂದಾಗಿ ಹತ್ತಿ ಬೆಳೆಯಲ್ಲಿ ಚೇತರಿಕೆ ಕಂಡು ಬರುವುದರ ಜತೆಗೆ ಬೆಳೆಯಲ್ಲಿ ಹೂವು ಹಾಗೂ ಕಾಯಿಗಳು ಬಿಡಲು ಆರಂಭಿಸಿವೆ. ಇದರಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಸತತವಾಗಿ ಬಂದ ಮಳೆಯಿಂದಾಗಿ ಬರಡು ಜಮೀನು ಈಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಹತ್ತಿ ಬೆಳೆಯ ಬೆಳೆಗಳನ್ನು ನೋಡಿದಾಗ ಭೂಮಾತೆಯು ಹಸಿರು ಸೀರೆಯನ್ನು ಉಟ್ಟು ಸಂಭ್ರಮಿಸುತಿದ್ದಾಳೆ ಎಂಬ ಭಾವನೆ ಮೂಡುತ್ತಿದೆ.

ಉತ್ತಮ ಮಳೆಯಿಂದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಬಾಡಿ ಹೋಗುತ್ತಿದ್ದ ಹತ್ತಿ, ತೊಗರಿ, ಸೂರ್ಯಕಾಂತಿ ಬೆಳೆಗಳಿಗೆ ಜೀವಕಳೆ ಬಂದಿದೆ.

ರೈತ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಬೆಳೆಗಳ ಮಧ್ಯೆ ಬೆಳೆದಿರುವ ಕಳೆ ತೆಗೆಯುತ್ತಿದ್ದಾನೆ. ಹೆಸರು ಬೆಳೆ ರಾಶಿಯಾಗಿದ್ದು ಅಷ್ಟೇನು ಉತ್ತಮ ಫಸಲು ಬಂದಿಲ್ಲ.

ಹಸಿರು, ಕೆಂಪು, ಬಿಳಿ ಬಣ್ಣ ಸೇರಿದಂತೆ ವಿವಿಧ ಬಣ್ಣಗಳಿಂದ ಗಿಡ ಮರಗಳು, ಸಸಿಗಳು ಕಂಗೊಳಿಸುತ್ತಿವೆ.

ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ, ನಾಮದೇವ ವಾಟ್ಕರ್‌

ಯಾದಗಿರಿ ನಗರ ಹೊರವಲಯದ ವರ್ಕನಳ್ಳಿ ರಸ್ತೆಯ ಸಮೀಪದ ಬೆಟ್ಟ ಗುಡ್ಡ ಹಸಿರು ಆವರಿಸಿರುವುದು
ಯಾದಗಿರಿ ನಗರ ಹೊರವಲಯದ ವರ್ಕನಳ್ಳಿ ರಸ್ತೆಯ ಸಮೀಪದ ಬೆಟ್ಟ ಗುಡ್ಡ ಹಸಿರು ಆವರಿಸಿರುವುದು
ಮಳೆ ಅಭಾವದಿಂದ ಬರ ಆವರಿಸಿ ಪ್ರಕೃತಿ ಬೋಳಾಗಿತ್ತು. ಉತ್ತಮ ವರ್ಷಧಾರೆಯಿಂದ ನಿಸರ್ಗ ಮೈದುಂಬಿಕೊಂಡಿದ್ದು ಕಣ್ಣಿಗೆ ಹಬ್ಬ ಉಂಟು ಮಾಡುತ್ತಿದೆ
ಕನಕಪ್ಪ ವಾಗಣಗೇರಿ ಪರಿಸರ ಪ್ರೇಮಿ
ಮಳೆ ಅಭಾವದಿಂದ 10 ಎಕರೆಯಲ್ಲಿ ಬೆಳೆದ ಹತ್ತಿ ಬೆಳೆ ಸಂಪೂರ್ಣ ನಾಶವಾಗುತ್ತದೆ ಎಂಬ ಆತಂಕ ಕಾಡುತ್ತಿತ್ತು. ವರುಣ ನಮ್ಮ ಕೈಹಿಡಿದಿದ್ದು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದೇನೆ
ವಿಶ್ವರಾಜ ಒಂಟೂರ ರೈತ ಚಂದಲಾಪುರ
ಕಳೆದ ಒಂದು ವಾರದಿಂದ ಬರುತ್ತಿರುವ ಮಳೆಯಿಂದಾಗಿ ಹತ್ತಿ ಬೆಳೆಯಲ್ಲಿ ಚೆನ್ನಾಗಿ ಇಳುವರಿ ಬರುವ ನಿರೀಕ್ಷೆ ಇದೆ
ಯಂಕಣ್ಣ ಬಸಂತಪುರ ಪ್ರಗತಿಪರ ರೈತ ವಡಗೇರಾ
ಅತಿಯಾದ ಮಳೆಯಿಂದಾಗಿ ಹತ್ತಿ ಬೆಳೆಗೆ ಕೆಲವೊಂದು ರೋಗಗಳು ಬರುವ ಸಂಭವ ಉಂಟು. ರೋಗಗಳನ್ನು ಹೇಗೆ ತಡೆಗಟ್ಟಬೇಕು ಎಂಬ ಮಾಹಿತಿಯನ್ನು ರೈತರಿಗೆ ನೀಡಲಾಗಿದೆ
ಗಣಪತಿ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ವಡಗೇರಾ
ಕಳೆದ ವರ್ಷ ಬರ ಎದುರಿಸಿ ನಿಟ್ಟುಸಿರು ಬಿಟ್ಟ ರೈತರಿಗೆ ಪ್ರಸಕ್ತ ಬಾರಿ ಉತ್ತಮ ಮಳೆಯಾಗಿದೆ. ಕಾಲುವೆ ನೀರು ಸಾಕಷ್ಟು ಹರಿದು ಬರುತ್ತಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಉದ್ಭವಿಸಿಲ್ಲ. ನಮಗೆ ಮುಂದೆ ಉತ್ತಮ ಬೆಲೆ ಸಿಗಬೇಕು ಅಷ್ಟೆ
ಮಾನಪ್ಪ ಮುಡಬೂಳ ರೈತ
ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ ಮಳೆ
ಶಹಾಪುರ: ಕಳೆದ ವರ್ಷ ಬರವನ್ನು ಎದುರಿಸಿ ಹೈರಾಣಗೊಂಡಿದ್ದ ರೈತರಿಗೆ ಪ್ರಸಕ್ತ ವರ್ಷ ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ಜೂನ್ ಹಾಗೂ ಜುಲೈ ತಿಂಗಳಲ್ಲಿ ನಿರೀಕ್ಷೆ ಮಾಡಿದಷ್ಟು ಮಳೆ ಬಾರದೆ ಇರುವಾಗ ರೈತರು ಆತಂಕಗೊಂಡಿದ್ದರು. ಆದರೆ ಆಗಸ್ಟ್ ತಿಂಗಳಲ್ಲಿ ತುಸು ಹೆಚ್ಚು ಎನ್ನುವಂತೆ ಮಳೆಯಾಗಿದ್ದರಿಂದ ರೈತರಲ್ಲಿ ಸಮಾಧಾನ ಮೂಡಿಸಿದೆ. ಅದರಲ್ಲಿ ನೆರೆ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಸುರಿದ ಪರಿಣಾಮ ಕೃಷ್ಣಾ ನದಿ ಪಾತ್ರದಲ್ಲಿ ಸುಮಾರು 12 ದಿನ ಪ್ರವಾಹದ ಭೀತಿ ಎದುರಿಸಿದರು. ಆದರೆ ರೈತರ ಜೀವನಾಡಿಯಾಗಿರುವ ನಾರಾಯಣಪುರ ಹಾಗೂ ಆಲಮಟ್ಟಿಯಲ್ಲಿ ಸದ್ಯಕ್ಕೆ ಸಾಕಷ್ಟು ನೀರಿನ ಸಂಗ್ರಹ ಇರುವುದು ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಅಲ್ಲದೆ ಕಾಲುವೆಗೆ ನಿರಂತರವಾಗಿ ನೀರು ಹರಿಯುತ್ತಲಿದೆ. ಈಗಾಗಲೇ ನಿಷೇಧಿತ ಬೆಳೆ ಭತ್ತ ನಾಟಿ ಮಾಡಿದ್ದಾರೆ. ಸದ್ಯಕ್ಕೆ ಬೆಳೆ ಸಮೃದ್ಧಿಯಾಗಿ ಬೆಳೆಯುತ್ತಲಿದೆ ಎನ್ನುತ್ತಾರೆ ರೈತ ನಿಂಗಪ್ಪ. ಆದರೆ ತುಸು ಸಮಸ್ಯೆಯಾಗಿರುವುದು ಹತ್ತಿ ಹಾಗೂ ತೊಗರಿ ಬೆಳೆಗೆ. ಮಳೆ ಇಷ್ಟಕ್ಕೆ ನಿಂತರೆ ಸಾಕಪ್ಪ ಎನ್ನುತ್ತಿದ್ದಾರೆ ರೈತರು. ಕೆಲಪ್ರದೇಶ ಹೊರತುಪಡಿಸಿ ಉಳಿದೆಡೆ ಹತ್ತಿ ಬೆಳೆ ಚೆನ್ನಾಗಿದೆ. ಮುಂದೆ ಇಳುವರಿ ಹಾಗೂ ಬೆಲೆ ಮೇಲೆ ನಮ್ಮ ಜೀವನ ಅವಲಂಬಿತವಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ಹತ್ತಿ ಹಾಗೂ ತೊಗರಿ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎನುತ್ತಾರೆ ಹತ್ತಿ ಬೆಳೆದ ರೈತರು.
ಮಳೆಯಿಂದ ಬೆಳೆಗೆ ಹೆಚ್ಚಿದ ಕಳೆ
ಹುಣಸಗಿ: ತಾಲ್ಲೂಕಿನ ಕಳೆದೊಂದು ವಾರದಿಂದ ಮಳೆಯ ಪ್ರಮಾಣ ಅಧಿಕವಾಗಿದ್ದು ಭತ್ತಕ್ಕೆ ಭಾರಿ ಅನುಕೂಲವಾಗಿದೆ. ತೊಗರಿ ಮತ್ತು ಹತ್ತಿಗೆ ಅಧಿಕ ಮಳೆಯಿಂದಾಗಿ ತಗ್ಗು ಪ್ರದೇಶದ ಜಮೀನಿನ ಬೆಳೆಗಳು ತೇವಾಂಶ ಹೆಚ್ಚಳದಿಂದ ಹಾನಿಯಾಗುವ ಭೀತಿ ಎದುರಾಗಿದೆ ಎಂದು ರೈತರು ಹೇಳಿದರು. ‘ಕಳೆದ ವಾರ ಸುರಿದ ಮಳೆಗೆ ಭತ್ತವಕ್ಕೆ ಒಂದು ಬಾರಿ ಗೊಬ್ಬರ ನೀಡಿದಂತಾಗಿದ್ದು ಕಳೆದ ವರ್ಷಕ್ಕಿಂತ ಈ ಬಾರಿ ಬೆಳೆ ಹುಲುಸಾಗಿ ಬೆಳೆದ್ದು ಭತ್ತವು ಕೂಡಾ ಹಸಿರು ಬಣ್ಣಕ್ಕೆ ತಿರುಗಿದೆ’ ಎಂದು ರೈತ ನಿಂಗನಗೌಡ ಬಸನಗೌಡ್ರ ಹೇಳಿದರು. ‘ತಳಭಾಗದಲ್ಲಿ ಬೇರುಗಳು ಗಟ್ಟಿಯಾಗಿದ್ದು ಕೀಟಭಾದೆಯೂ ಅಷ್ಟಾಗಿ ಇಲ್ಲ. ಇನ್ನು ಒಣ ಬೇಸಾಯದ ಮಳೆಯಾಶ್ರಿತ ಜಮೀನುಗಳಲ್ಲಿ ಈ ಮಳೆ ಇಲ್ಲಿಗೆ ನಿಂತರೆ ಮಾತ್ರ ಏನಾದರೂ ಫಸಲು ಕೈಗೆ ಬರಲು ಸಾಧ್ಯ’ ಎಂದು ಮಂಜಲಾಪುರ ಹಳ್ಳಿ ಗ್ರಾಮದ ರೈತ ಪರಮಣ್ಣ ನೀಲಗಲ್ಲ ನುಡಿದರು. ‘ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿಗೆ ಮಳೆಯಾಗಿದ್ದು ಮಳೆ ನಿಂತಲ್ಲಿ ಹತ್ತಿಗೆ ಅನುಕೂಲವಾಗಲಿದೆ. ಇಲ್ಲದಿದ್ದಲ್ಲಿ ಬೆಳೆಗೆ ಹಾನಿಯಾಗಲಿದೆ’ ಎಂದು ಹುಣಸಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಿದ್ದಾರ್ಥ ಪಾಟೀಲ ತಿಳಿಸಿದರು. 
ಮೈದುಂಬಿದ ಕೆರೆ-ಜಲಪಾತಗಳು ಹಸಿರುಡುಗೆಯುಟ್ಟ ಬೆಟ್ಟಗಳು
ಗುರುಮಠಕಲ್‌: ಸತತ ವರ್ಷಧಾರೆಗೆ ತಾಲ್ಲೂಕಿನ ಧಬ್‌ದಬಿ ಬಂಡಲೋಗು ಮತ್ತು ಗವಿಸಿದ್ದಲಿಂಗೇಶ್ವರ ಜಲಪಾತಗಳು ಮೈದುಂಬಿದ್ದು ಸುತ್ತಲಿನ ಗುಡ್ಡಗಳು ಹಸಿರಿನಿಂದ ಕಂಗೊಳಿಸುತ್ತಿವೆ. ತಾಲ್ಲೂಕಿನ ಚಂಡ್ರಿಕಿ ಕೇಶ್ವಾರ ಕಾಕಲವಾರ ಗಾಜರಕೋಟ ಸೇರಿದಂತೆ ಬಹುತೇಕ ಕೆರೆಗಳಲ್ಲಿ ನೀರಿನ ಮಟ್ಟ ದ್ವಿಗುಣಗೊಂಡಿದ್ದು ಸಣ್ಣ ಕೆರೆಗಳು ತುಂಬಿವೆ ಮತ್ತು ದೊಡ್ಡ ಕೆರೆಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ‘ಮಳೆಯ ಅಭಾವದಿಂದ ಕೆರೆಗಳು ಇನ್ನೇನು ಸಂಪೂರ್ಣ ಖಾಲಿಯಾಗುತ್ತವೆ ಎಂದೆಣಿಸಿದ್ದೆವು. ಆದರೆ ಸತತ ಮಳೆಗೆ ಕೆರೆಗಳಿಗೆ ಜೀವ ತುಂಬಿದೆ’ ಎಂದು ಗ್ರಾಮಸ್ಥರು ತಿಳಿಸಿದರು. ತಾಲ್ಲೂಕಿನ ಧಬ್‌ದಬಿ ಮತ್ತು ಗವಿಸಿದ್ದಲಿಂಗೇಶ್ವರ ಜಲಪಾತಗಳಿಗೆ ವಾರದಿಂದ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ನೀರಿನ ಹರಿವಿಲ್ಲದೆ ಸೊರಗಿದ್ದ ಜಲಪಾತಗಳು ಮೈದುಂಬಿ ಹರಿಯುತ್ತಿರುವುದರಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ತಾಲ್ಲೂಕು ವ್ಯಾಪ್ತಿಯ ಮಲ್ಲಾ ಚಿಂತನಹಳ್ಳಿ ಮಿನಾಸಪುರ ಚಿನ್ನಾಕಾರ ವ್ಯಾಪ್ತಿಯ ಕಾಡುಗಳು ಮತ್ತು ತಾಲ್ಲೂಕಿನ ಗುಡ್ಡಗಾಡುಗಳಲ್ಲಿನ ಪರಿಸರ ಕಳೆ ಹೆಚ್ಚಿದ್ದು ಹಸಿರುಮಯವಾಗಿದೆ. ಹಸಿರುಡಿಗೆಯಿಂದ ಕಂಗೊಳಿಸುತ್ತಿರುವ ಗವಿ ಸಿದ್ದಲಿಂಗೇಶ್ವರ ಮತ್ತು ಬಂಡಲೋಗು ಜಲಪಾತದ ಪರಿಸರವು ಮಲೆನಾಡಿನಂತೆ ಭಾಸವಾಗುತ್ತಿದೆ ಎನ್ನತ್ತಾರೆ ಪ್ರವಾಸಿಗರಾದ ಬಶೀರ ಇಮ್ರಾನ್‌ ನವೀನ ಮತ್ತು ವೆಂಕಟೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT