ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಮರ್ಜೆನ್ಸಿಗೆ ಸಿಗದ ಪ್ರಮಾಣಪತ್ರ; ನನ್ನ ಚಿತ್ರದ ಮೇಲೂ ತುರ್ತು ಪರಿಸ್ಥಿತಿ: ಕಂಗನಾ

Published : 2 ಸೆಪ್ಟೆಂಬರ್ 2024, 9:25 IST
Last Updated : 2 ಸೆಪ್ಟೆಂಬರ್ 2024, 9:25 IST
ಫಾಲೋ ಮಾಡಿ
Comments

ನವದೆಹಲಿ: ‌ನಮ್ಮ ‘ಎಮರ್ಜೆನ್ಸಿ’ ಚಿತ್ರಕ್ಕೆ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ಪ್ರಮಾಣಪತ್ರವನ್ನು ನೀಡದೆ ಮೀನಾಮೇಷ ಎಣಿಸುತ್ತಿದೆ. ಈ ಮೂಲಕ ನಮ್ಮ ಚಿತ್ರದ ಮೇಲೆ ತುರ್ತು ಪರಿಸ್ಥಿತಿ ಹೇರಲಾಗಿದೆ ಎಂದು ಬಾಲಿವುಡ್ ನಟಿ, ಲೋಕಸಭಾ ಸದಸ್ಯೆ ಕಂಗನಾ ರನೌತ್‌ ಆರೋಪಿಸಿದ್ದಾರೆ.

ಸೆ.6ರಂದು ‘ಎಮರ್ಜೆನ್ಸಿ’ ಚಿತ್ರ ದೇಶದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ, ಇದೀಗ ಚಿತ್ರಕ್ಕೆ ಸಿಬಿಎಫ್‌ಸಿ ಪ್ರಮಾಣಪತ್ರವನ್ನು ನೀಡಿಲ್ಲ ಎಂದು ವರದಿಯಾಗಿದೆ.

ಕಂಗನಾ ರನೌತ್‌ ನಿರ್ದೇಶಿಸಿ, ನಟಿಸಿರುವ 'ಎಮರ್ಜೆನ್ಸಿ' ಚಿತ್ರಕ್ಕೆ ಸೆನ್ಸಾರ್‌ ಪ್ರಮಾಣಪತ್ರ ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮಧ್ಯಪ್ರದೇಶ ಹೈಕೋರ್ಟ್ ತಿಳಿಸಿದೆ.

‘ಸಿನಿಮಾದಲ್ಲಿ ಸಿಖ್‌ ಸಮುದಾಯವನ್ನು ‘ಭಯೋತ್ಪಾದಕರು’, ‘ದೇಶ ವಿರೋಧಿಗಳು’ ಎಂದು ಬಿಂಬಿಸಲಾಗಿದ್ದು, ಸಮುದಾಯದ ಘನತೆಗೆ ಹಾನಿ ಉಂಟುಮಾಡಲಿದೆ’ ಎಂದು ಆರೋಪಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ಹೈಕೋರ್ಟ್‌ ನ್ಯಾಯಮೂರ್ತಿ ಸಚ್‌ದೇವ ನೇತೃತ್ವದ ಪೀಠ ಚಿತ್ರತಂಡಕ್ಕೆ ನೋಟಿಸ್ ಜಾರಿಗೊಳಿಸಿದೆ.

‘ಕೆಲವೊಮ್ಮೆ ಚಿತ್ರದ ಟ್ರೇಲರ್‌ನಲ್ಲಿ ವಾಸ್ತವವನ್ನು ಬಿಂಬಿಸುವುದಿಲ್ಲ. ಆದರೆ, ರಾಷ್ಟ್ರರಾಜಧಾನಿ ದೆಹಲಿ ಸೇರಿದಂತೆ ಪ್ರಪಂಚದಾದ್ಯಂತ ಕೋವಿಡ್‌ ಲಾಕ್‌ಡೌನ್ ಸಮಯದಲ್ಲಿ ಸಿಖ್ ಸಮುದಾಯವು ಜನರಿಗೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿತ್ತು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಎಮರ್ಜೆನ್ಸಿ’ ಸಿನಿಮಾ ಪ್ರದರ್ಶನಕ್ಕೆ ರಾಜ್ಯದಲ್ಲಿ ನಿಷೇಧ ಹೇರುವ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ ಅವರು ಸಿಖ್‌ ಸಮುದಾಯಕ್ಕೆ ಭರವಸೆ ನೀಡಿದ್ದಾರೆ’ ಎಂದು ಸರ್ಕಾರದ ಸಲಹೆಗಾರ ಮೊಹಮ್ಮದ್‌ ಅಲಿ ಶಬ್ಬೀರ್‌ ಈಚೆಗೆ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT