ಬಿಸಿಲು ತೀವ್ರವಾಗುತ್ತಿದ್ದಂತೆ ದೂಳು ಮತ್ತು ಮಾಲಿನ್ಯದಿಂದಾಗಿ ಕಣ್ಣುಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು.
ಈ ಬೇಸಿಗೆಯಲ್ಲಿ ಕಣ್ಣಿನ ತಪಾಸಣೆ ನಿಯಮಿತ ವಾಗಿರಬೇಕು. ಶುಷ್ಕತೆ, ಕಂಜಕ್ಟಿವಿಟೀಸ್ ಮತ್ತು ಯುವಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಬೇಸಿಗೆಯ ಈ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುವುದು ಅನಿವಾರ್ಯ ಎನ್ನುತ್ತಾರೆ ಅಗರ್ವಾಲ್ ಐ ಆಸ್ಪತ್ರೆಯ ಪ್ರಾದೇಶಿಕ ಮುಖ್ಯಸ್ಥ ಡಾ. ಡಿ.ಕೆ.ಶ್ರೀಪತಿ.
ಬಿರು ಬೇಸಿಗೆಗೆ ಕಣ್ಣಲ್ಲಿ ನೀರಿನ ಉತ್ಪಾದನೆ ಕಡಿಮೆಯಾಗುವುದರಿಂದ ಕಿರಿಕಿರಿ ಉಂಟಾಗುವುದಲ್ಲದೇ ಬ್ಯಾಕ್ಟೀರಿಯಾ ಸೋಂಕು ಹೆಚ್ಚಳವಾಗುತ್ತದೆ. ಇದರಿಂದ ಕ್ಯಾರ್ಯಾಕ್ಟ್ ಮತ್ತು ಮ್ಯಾಕ್ಯುಲರ್ ಡಿಜನರೇಶನ್ನಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಸಕಾಲದಲ್ಲಿ ಕಣ್ಣಿನ ಆರೈಕೆ ಮಾಡಿಕೊಳ್ಳುವುದು ಮುಖ್ಯ ಎನ್ನುತ್ತಾರೆ ಅವರು.
ಕಣ್ಣುಗಳಲ್ಲಿ ಶುಷ್ಕತೆ ಉಂಟಾದರೆ ವೈದ್ಯರ ಶಿಫಾರಸ್ಸಿನ ಮೇರೆಗೆ ಲ್ಯೂಬ್ರಿಕೆಂಟ್ ಐ ಡ್ರಾಪ್ಗಳನ್ನು ಬಳಸಬಹುದು. ಮೊದಲಿಗೆ ಶುಚಿತ್ವ ಕಾಪಾಡಿಕೊಳ್ಳಬೇಕು. ಆಗಾಗ್ಗೆ ಕೈ ತೊಳೆದುಕೊಳ್ಳಬೇಕು. ವಿನಾಕಾರಣ ಕಣ್ಣನ್ನು ಉಜ್ಜಿಕೊಳ್ಳುವುದು ಕೂಡ ಸೋಂಕಿಗೆ ಕಾರಣವಾಗಬಹುದು. ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಧರಿಸುವ ವ್ಯಕ್ತಿಗಳು, ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಕಣ್ಣಿನ ದೃಷ್ಟಿಗೆ ತೊಂದರೆಯಾಗದಂತೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಹೇಳಿದ್ದಾರೆ.
ಯುವಿ ಶೀಲ್ಡ್ ಇರುವ ಕನ್ನಡಕಗಳನ್ನು ಧರಿಸಬೇಕು. ನಿರ್ಜಲೀಕರಣವನ್ನು ತಡೆಯಲು ಸಾಕಷ್ಟು ದ್ರವಾಹಾರವನ್ನು ಸೇವಿಸಬೇಕು. ಕ್ಲೋರಿನೇಟೆಡ್ ನೀರು ಬಳಸುವಾಗ ಕಡ್ಡಾಯವಾಗಿ ಸ್ವಿಮ್ಮಿಂಗ್ ಕನ್ನಡಕಗಳನ್ನು ಧರಿಸಬೇಕು. ಸ್ಕ್ರೀನಿಂಗ್ ಸಮಯವನ್ನು ಕಡಿಮೆ ಮಾಡಿ. ಪ್ರತಿ 20 ನಿಮಿಷಗಳಿಗೊಮ್ಮೆ ವಿರಾಮ ತೆಗೆದುಕೊಳ್ಳಿ. ಎ ವಿಟಮಿನ್ ಇರುವ ಹಣ್ಣು, ತರಕಾರಿಗಳ ಸೇವನೆ ಹೆಚ್ಚಿರಲಿ. ಬೇಸಿಗೆ ಇರಲಿ, ಮಳೆಗಾಲವಿರಲಿ ಕಣ್ಣಿನ ರೋಗಗಳನ್ನು ಸಕಾಲದಲ್ಲಿ ಪತ್ತೆ ಮಾಡಿ, ಚಿಕಿತ್ಸೆ ಪಡೆಯುವುದು ಮುಖ್ಯ ಎನ್ನುತ್ತಾರೆ ಅವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.