ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏತಕ್ಕಾಗಿ ಚಂದ್ರಬಾಬು ನಾಯ್ಡು ಬಂಧನ? ಆಂಧ್ರ ಮಾಜಿ ಸಿಎಂಗೆ ಸಂಕಷ್ಟ

ಭ್ರಷ್ಟಾಚಾರ ಪ್ರಕರಣದಲ್ಲಿ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರಪ್ರದೇಶದ ಸಿಐಡಿ ಶನಿವಾರ ಬಂಧಿಸಿದೆ.
Published : 9 ಸೆಪ್ಟೆಂಬರ್ 2023, 7:35 IST
Last Updated : 9 ಸೆಪ್ಟೆಂಬರ್ 2023, 7:35 IST
ಫಾಲೋ ಮಾಡಿ
Comments

ಅಮರಾವತಿ: ಭ್ರಷ್ಟಾಚಾರ ಪ್ರಕರಣದಲ್ಲಿ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರಪ್ರದೇಶದ ಸಿಐಡಿ ಶನಿವಾರ ಬಂಧಿಸಿದೆ.

ಅವರ ಬಂಧನವಾದ ಮರು ಘಳಿಗೆಯಲ್ಲೇ ಅಮರಾವತಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಸಿಐಡಿ ಎಡಿಜಿಪಿ ಎನ್. ಸಂಜಯ್ ಅವರು, ’ಆಂಧ್ರಪ್ರದೇಶ ಕೌಶಲಾಭಿವೃದ್ಧಿ ನಿಗಮದಲ್ಲಿ ನಡೆದಿರುವ ₹ 550 ಕೋಟಿ ಅವ್ಯವಹಾರ ಪ್ರಕರಣದ ಎ1 ಆರೋಪಿ ಚಂದ್ರಬಾಬು ನಾಯ್ಡು ಅವರೇ ಆಗಿದ್ದಾರೆ’ ಎಂದು ತಿಳಿಸಿದ್ದಾರೆ.

‘ನಾಯ್ಡು ಸಿಎಂ ಆಗಿದ್ದಾಗ ಆಂಧ್ರಪ್ರದೇಶಾದ್ಯಂತ ಕೌಶಲ ಕೇಂದ್ರಗಳನ್ನು ತೆರೆಯುವಲ್ಲಿ ನಿಗಮಕ್ಕೆ ಬಿಡುಗಡೆಯಾಗಿದ್ದ ಸುಮಾರು ₹3,300 ಕೋಟಿ ಹಣದಲ್ಲಿ ಅವರಿಂದ ಸರ್ಕಾರಕ್ಕೆ ₹370ಕೋಟಿ ವಂಚನೆ ಆಗಿದೆ’ ಎಂದು ತಿಳಿಸಿದ್ದಾರೆ.

‘ಈ ಬೃಹತ್ ಹಣಕಾಸಿನ ಅವ್ಯವಹಾರಕ್ಕೆ ನಾಯ್ಡು ಅವರಿಗೆ ಕನಿಷ್ಠ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಎನ್ ಸಂಜಯ್ ಉತ್ತರಿಸಿದ್ದಾರೆ.

ಕೇಂದ್ರಗಳನ್ನು ತೆರೆಯುವಲ್ಲಿ ಹಾಗೂ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಕಲಿ ಕಂಪನಿಗಳ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ವಂಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಹೀಗಾಗಿ ನಾವು ಟಿಡಿಪಿ ನಾಯಕರಾದ ನಾಯ್ಡು ಅವರನ್ನು ಬಂಧಿಸಿ ವಿಚಾರಣೆ ನಡೆಸುವುದು ತೀರಾ ಅವಶ್ಯವಾಗಿದೆ.  ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ಅನ್ವಯ ನಾಯ್ಡು ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಡಿಜಿಪಿ ಹೇಳಿದ್ದಾರೆ.

ಇಂದು ಬೆಳಿಗ್ಗೆ 6 ಗಂಟೆಗೆ ನಂದ್ಯಾಲದಲ್ಲಿ ಆಂಧ್ರಪ್ರದೇಶದ ಸಿಐಡಿ ಪೊಲೀಸರು  ನಾಯ್ಡು ಅವರನ್ನು ಬಂಧಿಸಿ ವಿಜಯವಾಡಕ್ಕೆ ಕರೆದೊಯ್ದಿದ್ದಾರೆ.

ಈ ಪ್ರಕರಣ ಇದೀಗ ವೈಎಸ್‌ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ನಡುವೆ ರಾಜಕೀಯ ಸಮರಕ್ಕೆ ದೊಡ್ಡ ನಾಂದಿ ಹಾಡಿದೆ. ನಾಯ್ಡು ಬಂಧನದ ಬಗ್ಗೆ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT