ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಯಾಪ್ಟನ್ ಅಂಶುಮಾನ್ ಸಿಂಗ್ ಪತ್ನಿ ಬಗ್ಗೆ ಅವಹೇಳನಕಾರಿ ಪೋಸ್ಟ್‌: FIR ದಾಖಲು

Published 13 ಜುಲೈ 2024, 10:11 IST
Last Updated 13 ಜುಲೈ 2024, 10:11 IST
ಅಕ್ಷರ ಗಾತ್ರ

ನವದೆಹಲಿ: ಕೀರ್ತಿಚಕ್ರ ಪ್ರಶಸ್ತಿ ವಿಜೇತ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ದೆಹಲಿಯ 'ಇಂಟೆಲಿಜೆನ್ಸ್ ಫ್ಯೂಜನ್ ಆ್ಯಂಡ್ ಸ್ಟ್ರಾಟೆಜಿಕ್ ಆಪರೇಷನ್ಸ್‌ನ (ಐಎಫ್‌ಎಸ್‌ಒ) ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಂಶುಮಾನ್ ಸಿಂಗ್ ಅವರ ಪತ್ನಿಯ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡಿದವರ ಬಗ್ಗೆ ವಿವರಗಳನ್ನು ನೀಡುವಂತೆ ಸಾಮಾಜಿಕ ಮಾಧ್ಯಮಗಳಾದ ‘ಎಕ್ಸ್‌’ (ಟ್ವಿಟರ್), ಮೆಟಾಗೆ (ಫೇಸ್‌ಬುಕ್‌) ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗವು (ಎನ್‌ಸಿಡಬ್ಲ್ಯು) ಈಚೆಗೆ ದೆಹಲಿ ಪೊಲೀಸರಿಗೆ ದೂರು ನೀಡಿತ್ತು. ಜತೆಗೆ, ಪ್ರಕರಣದ ತನಿಖೆ ಹಾಗೂ ಕೈಗೊಂಡ ಕ್ರಮದ ಬಗ್ಗೆ ಮೂರು ದಿನಗಳಲ್ಲಿ ವರದಿ ನೀಡುವಂತೆಯೂ ಸೂಚಿಸಿತ್ತು.

ಈ ಬಾರಿ ಭಾರತೀಯ ಸೇನೆಯ ಆರು ಮಂದಿ ವೀರರನ್ನು ಕೀರ್ತಿ ಚಕ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆರು ಮಂದಿ ಪೈಕಿ ಮೂವರು ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ಪಡೆದಿದ್ದಾರೆ.

ಶಾಂತಿಕಾಲದ ಎರಡನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿ ಇದು. 21 ಪ್ಯಾರಾಚೂಟ್‌ ರೆಜಿಮೆಂಟ್‌ನ ಮೇಜರ್ ದಿಗ್ವಿಜಯ್ ಸಿಂಗ್, 4 ಸಿಖ್ ರೆಜಿಮೆಂಟ್‌ನ ಮೇಜರ್ ದೀಪೇಂದ್ರ ವಿಕ್ರಮ್, 21 ಮಹರ್‌ನ ಹವಾಲ್ದಾರ್ ಪವನ್ ಕುಮಾರ್ ಯಾದವ್ ಅವರು ರಾಷ್ಟ್ರಪತಿಯವರಿಂದ ಕೀರ್ತಿ ಚಕ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಆರ್ಮಿ ಮೆಡಿಕಲ್ ಕೋರ್‌ನ ಕ್ಯಾಪ್ಟನ್ ಅಂಶುಮಾನ್ ಸಿಂಗ್, ಪ್ಯಾರಾಚೂಟ್‌ ರೆಜಿಮೆಂಟ್‌ನ 9ನೆಯ ತುಕಡಿಯ ಹವಾಲ್ದಾರ್ ಅಬ್ದುಲ್ ಮಜಿದ್, 55 ಗ್ರೆನೆಡಿಯರ್ಸ್‌ನ ಸಿಪಾಯಿ ಪವನ್ ಕುಮಾರ್ ಅವರು ಮರಣೋತ್ತರವಾಗಿ ಈ ಪ್ರಶಸ್ತಿಗೆ ಪಾತ್ರರಾಗಿದ್ದರು. ಅವರ ಪರವಾಗಿ ಕುಟುಂಬಸ್ಥರು ಪ್ರಶಸ್ತಿ ಸ್ವೀಕರಿಸಿದ್ದಾರೆ.

ಈ ಬಾರಿ ಅಶೋಕ ಚಕ್ರ ಪ್ರಶಸ್ತಿಯನ್ನು ಘೋಷಿಸಿಲ್ಲ. 16 ಮಂದಿಗೆ ಶೌರ್ಯ ಚಕ್ರ (ಇದರಲ್ಲಿ ಇಬ್ಬರಿಗೆ ಮರಣೋತ್ತರ), 53 ಮಂದಿಗೆ ಸೇನಾ ಪದಕ (ಏಳು ಮಂದಿಗೆ ಮರಣೋತ್ತರವಾಗಿ), ಒಬ್ಬರಿಗೆ ನೌಸೇನಾ ಪದಕ ಹಾಗೂ ನಾಲ್ಕು ಮಂದಿಗೆ ವಾಯುಸೇನಾ ಪದಕ ಘೋಷಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT