ಮುಂಬೈ: ಧಂಗರ್ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನಕ್ಕೆ ಆಗ್ರಹಿಸಿ ಮಹಾರಾಷ್ಟ್ರ ವಿಧಾನಸಭೆಯ ಉಪ ಸಭಾಪತಿ ನರಹರಿ ಝಿರ್ವಾಲ್ ಅವರು ಸಚಿವಾಲಯದ ಮೂರನೇ ಮಹಡಿಯಿಂದ ಹಾರಿದ ನಾಟಕೀಯ ಬೆಳವಣಿಗೆ ಶುಕ್ರವಾರ ನಡೆಯಿತು.
ಅದೃಷ್ಟವಶಾತ್ ನೆಲಕ್ಕೆ ಬೀಳದಂತೆ ಹಾಕಲಾಗಿದ್ದ ಬಲೆ ನರಹರಿಯವರನ್ನು ರಕ್ಷಿಸಿದೆ. ಝಿರ್ವಾಲ್ ಅವರೊಂದಿಗೆ ಬಿಜೆಪಿಯ ಸಂಸದ ಸೇರಿ ಮೂವರು ಜನಪ್ರತಿನಿಧಿಗಳು ಹಾರಿದ್ದರು. ಸಚಿವಾಲಯದಲ್ಲಿ ಆತ್ಮಹತ್ಯೆ ಯತ್ನ ತಡೆಯುವ ಉದ್ದೇಶದೊಂದಿಗೆ 2018ರಲ್ಲಿ ಬಲೆ ಹಾಕಲಾಗಿತ್ತು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಎನ್ಸಿಪಿ ಅಜಿತ್ ಪವಾರ್ ಬಣದ ಸದಸ್ಯರಾಗಿರುವ ಝಿರ್ವಾಲ್ ಅವರು ಧಂಗರ್ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸುವಂತೆ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ನಂತರ ಮೂರನೇ ಮಹಡಿಯಿಂದ ಹಾರಲು ನಿರ್ಧರಿಸಿದರು. ಬಲೆ ಮೇಲೆ ಬಿದ್ದಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.