ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Bangla Unrest | ಭಾರತೀಯ ಸಾಂಸ್ಕೃತಿಕ ಕೇಂದ್ರ ಧ್ವಂಸ: 4 ದೇಗುಲಗಳಿಗೆ ಹಾನಿ

Published : 6 ಆಗಸ್ಟ್ 2024, 0:42 IST
Last Updated : 6 ಆಗಸ್ಟ್ 2024, 0:42 IST
ಫಾಲೋ ಮಾಡಿ
Comments

ಢಾಕಾ: ಉದ್ರಿಕ್ತರ ಗುಂಪು ರಾಜಧಾನಿಯಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನು ಧ್ವಂಸಗೊಳಿಸಿದೆ.

‘ಇದೇ ವೇಳೆ ದೇಶದಾದ್ಯಂತ ನಾಲ್ಕು ಹಿಂದೂ ದೇವಾಲಯಗಳಿಗೂ ಹಾನಿಯಾಗಿದೆ ಎಂಬ ವರದಿಗಳು ಬಂದಿವೆ’ ಎಂದು ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ನಾಯಕಿ ಕಾಜೋಲ್ ದೇವನಾಥ್ ತಿಳಿಸಿದರು.  

ಪ್ರತ್ಯಕ್ಷದರ್ಶಿಗಳ ಪ್ರಕಾರ, ಢಾಕಾದ ಧನ್ಮೋಂಡಿ ಪ್ರದೇಶದಲ್ಲಿರುವ ಇಂದಿರಾಗಾಂಧಿ ಸಾಂಸ್ಕೃತಿಕ ಕೇಂದ್ರ ವನ್ನು ಉದ್ರಿಕ್ತರ ಗುಂಪು ಹಾನಿ ಗೊಳಿಸಿದೆ.  2010ರ  ಮಾರ್ಚ್‌ನಲ್ಲಿ ಉದ್ಘಾಟನೆಗೊಂಡ ಈ ಕೇಂದ್ರವು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ದ್ವಿಪಕ್ಷೀಯ ಸಾಂಸ್ಕೃತಿಕ ಸಂಬಂಧವನ್ನು ಉತ್ತೇಜಿಸುತ್ತಾ ಬಂದಿದೆ. ಇಲ್ಲಿ ಯೋಗ, ಹಿಂದಿ ಭಾಷೆ, ಭಾರತೀಯ ಶಾಸ್ತ್ರೀಯ ಸಂಗೀತ ಗಾಯನ, ಕಥಕ್, ಮಣಿಪುರಿ ಸೇರಿ ಭಾರತೀಯ ನೃತ್ಯ ಪ್ರಾಕಾರಗಳ ಕಲಿಕೆಯನ್ನು ಭಾರತದ ಮೂಲದ ವೃತ್ತಿಪರರು ಮತ್ತು ತರಬೇತುದಾರರಿಂದಲೇ ಕಲಿಸಲಾಗುತ್ತಿದೆ. ಅಲ್ಲದೆ, 21,000ಕ್ಕೂ ಹೆಚ್ಚು ಪುಸ್ತಕಗಳಿರುವ ಗ್ರಂಥಾಲಯವನ್ನು ಸಹ ಹೊಂದಿದೆ.

ಬಂಗಬಂಧು ಮೆಮೋರಿಯಲ್ ಮ್ಯೂಸಿಯಂ ಎಂದೂ ಕರೆಯಲಾಗುವ ಬಂಗಬಂಧು ಭಾಬನ್ ಸೇರಿದಂತೆ ಢಾಕಾದ ಹಲವಾರು ಪ್ರಮುಖ ಸ್ಥಳಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ ಎಂದು ‘ಢಾಕಾ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.

1975ರಲ್ಲಿ ಅಧ್ಯಕ್ಷರಾಗಿದ್ದಾಗ ಹತ್ಯೆಗೀಡಾದ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರ ಹೆಸರಿನಲ್ಲಿ ಈ ವಸ್ತುಸಂಗ್ರಹಾಲಯ ನಿರ್ಮಿಸಲಾಗಿತ್ತು. 

ಹಸೀನಾ ಅವರ ರಾಜೀನಾಮೆ ನಂತರ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವುದರಿಂದ ಕೆಲವು ಹಿಂದೂ ಸಮಾಜದ ಮುಖಂಡರು ಭಯಭೀತರಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಢಾಕಾಕ್ಕೆ ಏರ್‌ ಇಂಡಿಯಾ ವಿಮಾನ ಸೇವೆ ರದ್ದು
ನವದೆಹಲಿ (ಪಿಟಿಐ): ಬಾಂಗ್ಲಾದೇಶದಲ್ಲಿ ಸದ್ಯ ಪರಿಸ್ಥಿತಿ ಹದಗೆಟ್ಟಿರುವು ದರಿಂದ ಢಾಕಾಕ್ಕೆ ಸಂಚರಿಸುವ ಎಲ್ಲ ವಿಮಾನಗಳನ್ನು ಏರ್‌ ಇಂಡಿಯಾ ತಕ್ಷಣವೇ ಜಾರಿಗೆ ಬರುವಂತೆ ಸೋಮವಾರದಿಂದಲೇ ರದ್ದುಪಡಿಸಿದೆ. ರಾಷ್ಟ್ರೀಯ ರಾಜಧಾನಿಯಿಂದ ಢಾಕಾಗೆ ನಿತ್ಯ ಏರ್‌ ಇಂಡಿಯಾದ ಎರಡು ವಿಮಾನಗಳು ಸಂಚಾರ ನಡೆಸುತ್ತಿದ್ದವು.  ‘ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ತಕ್ಷಣವೇ ಜಾರಿಗೆ ಬರುವಂತೆ ಢಾಕಾಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳ ನಿಗದಿತ ಕಾರ್ಯಾಚರಣೆಯನ್ನು ನಾವು ರದ್ದುಗೊಳಿಸಿದ್ದೇವೆ. ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ’ ಎಂದು ಏರ್‌ ಇಂಡಿಯಾದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತ– ಬಾಂಗ್ಲಾ ನಡುವೆ ವ್ಯಾಪಾರ ಸ್ಥಗಿತ
ಕೋಲ್ಕತ್ತ (ಪಿಟಿಐ): ಭಾರತ -ಬಾಂಗ್ಲಾದೇಶದ ನಡುವೆ ವ್ಯಾಪಾರವು ಸೋಮವಾರ ಮಧ್ಯಾಹ್ನದಿಂದಲೇ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಇಲ್ಲಿನ ವರ್ತಕರು ತಿಳಿಸಿದ್ದಾರೆ. ಬಾಂಗ್ಲಾದೇಶ ಸರ್ಕಾರವು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮೂರು ದಿನಗಳ ಮಟ್ಟಿಗೆ ವ್ಯಾಪಾರಕ್ಕೆ ರಜೆ ಘೋಷಿಸಿ ಭಾನುವಾರ ಅಧಿಸೂಚನೆ ಹೊರಡಿಸಿತ್ತು.   ‘ಬಾಂಗ್ಲಾದೇಶದ ಕಸ್ಟಮ್ಸ್‌ನಿಂದ ತಮ್ಮ ಬಂದರುಗಳಲ್ಲಿ ಕ್ಲಿಯರೆನ್ಸ್ ಕೊರತೆಯಿಂದಾಗಿ, ಎಲ್ಲ ಭೂ ಬಂದರುಗಳಲ್ಲಿ ರಫ್ತು ಮತ್ತು ಆಮದು ಚಟುವಟಿಕೆಗಳು ಸ್ಥಗಿತಗೊಂಡಿವೆ.
ಲಿಪ್‌ಸ್ಟಿಕ್‌, ಸೋಫಾ ಎತ್ತೊಯ್ದರು
lಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರ ರಾಜೀನಾಮೆ ಬೆನ್ನಲ್ಲೇ, ಢಾಕಾದಲ್ಲಿನ ಅವರ ಅಧಿಕೃತ ನಿವಾಸವಾದ ಗಾನಾಭವನಕ್ಕೆ ನುಗ್ಗಿದ ಪ್ರತಿಭಟನಕಾರರು, ಅಲ್ಲಿನ ಆವರಣದಲ್ಲಿ ಹರಿಯುವ ನದಿಯಲ್ಲಿ ಮಿಂದು ಸಂಭ್ರಮಿಸಿದರು lಪ್ರಧಾನಿ ನಿವಾಸದಿಂದ ಸೋಫಾ, ಕುರ್ಚಿ, ಹೂಕುಂಡಗಳನ್ನು ತೆಗೆದುಕೊಂಡು ಹೋದ ಪ್ರತಿಭಟನಕಾರರು lಒಬ್ಬ ಪ್ರತಿಭಟನಕಾರ ಲಿಪ್‌ಸ್ಟಿಕ್‌ ತೆಗೆದುಕೊಂಡು ಹೋದರು. ‘ನಮ್ಮ ಹೋರಾಟದ ಮೂಲಕ ನಿರಂಕುಶಾಧಿಕಾರಿಯನ್ನು ತೊಲಗಿಸಿದ್ದೇವೆ. ಅವರು ಈ ಲಿಪ್‌ಸ್ಟಿಕ್‌ ಅನ್ನು ಬಳಸುತ್ತಿದ್ದರು. ಹೋರಾಟದ ಸ್ಮರಣೆಗೆ ಇದನ್ನು ತೆಗೆದುಕೊಂಡಿದ್ದೇನೆ’ ಎಂದು ಆ ವ್ಯಕ್ತಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು
ಶೇಖ್ ಹಸೀನಾ ಅವರು ರಾಜಕೀಯ ಪುನರಾಗಮನ ಮಾಡುವುದಿಲ್ಲ. ಅವರು ತಮ್ಮ ಕುಟುಂಬದ ಒತ್ತಾಯದ ಮೇರೆಗೆ ಸುರಕ್ಷತೆಗಾಗಿ ದೇಶ ತೊರೆದಿದ್ದಾರೆ
ಸಜೀಬ್ ವಾಝೆದ್ ಜಾಯ್ ಹಸೀನಾ ಅವರ ಪುತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT