ಸೇತುಬಂಧನ ಬೃಹದ್ದರ್ಶನವನ್ನು, ಆಗ ನಡೆದ ಅದ್ಭುತವನ್ನು ಯಾವ ಕವಿತಾನೆ ಬಣ್ಣಿಸಲು ಸಾಧ್ಯ? ಹಾಗೆ ವರ್ಣಿಸುವಾಗ ಅವನ ಮನಸ್ಸು ಬಲಹೀನವಾಗಿ ಸೋತು ಬಳಲುವುದಿಲ್ಲವೆ? ಎಂದು ಕುವೆಂಪು ಪ್ರಶ್ನಿಸಿದ್ದಾರೆ. ಕಲ್ಪನಾ ಶಕ್ತಿ ಕುಂದುವುದನ್ನು ‘ಗರಿಗೆಡು’ ಪದದಲ್ಲಿ ಆಲಂಕರಿಕವಾಗಿ ಪ್ರಯೋಗಿಸಿದ್ದಾರೆ.
ಮುಂದೆ ನಡೆದದ್ಭುತವನಾವ ಕವಿ ಬಣ್ಣಿಪನೊ?
ಜೋಲುತೆ ಬಳಲ್ದು ಗರಿಗೆಟ್ಟುದುರದೇ ಮನಂ ?
ಬುದ್ಧಿ ಭೈರವ
ಬುದ್ಧಿ(ನಾ).ತಿಳಿವಳಿಕೆ; ಅರಿವು
ಭೈರವ (ಗು). ಪರಮೇಶ್ವರನ ರೂಪಗಳಲ್ಲಿ ಒಂದು, ಭಯಂಕರವಾದ
ಕುವೆಂಪು ಅವರು ‘ಸ್ವಾಮಿ ವಿವೇಕಾನಂದ’ ಕವನದಲ್ಲಿ ಆ ವರ ಯೋಗಿಯನ್ನು ನವಯುಗಾಚಾರ್ಯ, ರಾಮಕೃಷ್ಣರ ಭೀಮಶಿಷ್ಯ, ವೀರ ವೇದಾಂತಿ, ಮೇರು ಸಂನ್ಯಾಸಿ ಮುಂತಾದ ವಿಶೇಷಣಗಳಿಂದ ವರ್ಣಿಸುತ್ತಾ ‘ಬುದ್ಧಿಭೈರವ’ ಎಂಬ ಪದ ನಿರ್ಮಿಸಿ ಕೀರ್ತಿಸಿದ್ದಾರೆ.
ಮನುಷ್ಯನಲ್ಲಿಯ ದುಷ್ಟತನದ ಕ್ಷುಲ್ಲಕ ಭಾವದ ನಡೆನುಡಿಯನ್ನು ನಾಶಗೈಯಲು ‘ಬುದ್ಧಿಭೈರವ’ ಅವಶ್ಯಕ. ಆ ಭೈರವನ ಬುದ್ಧಿಯ ತುಳಿತಕ್ಕೆ ಒಳಗಾದಾಗ ವ್ಯಕ್ತಿಯ ಹೃದಯದಲ್ಲಿ ಕ್ಷುದ್ರತನ ಇಲ್ಲವಾಗಿ ವಿವೇಕ ಉದಯಿಸುತ್ತದೆ. ಎಲ್ಲ ದುಷ್ಟ ಭಾವಗಳು ಬಸ್ಮವಾಗುತ್ತವೆ. ಅಲ್ಲಿ ‘ಬುದ್ಧಿ ಭೈರವ’ ಪ್ರತಿಷ್ಠಾಪಿತನಾಗುತ್ತಾನೆ. ಆ ಅರಿವಿನಲ್ಲಿ ವಿವೇಕಾನಂದರನ್ನು ಕ್ರಾಂತಿ ಪ್ರತೀಕವಾಗಿ ಕುವೆಂಪು ಅವರು ‘ಬುದ್ಧಿ ಭೈರವ’ ಎಂದು ಕರೆದಿದ್ದಾರೆ.