ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಣ್ಣನ ಮೆರವಣಿಗೆಗೆ ಇಲ್ಲದ ಜನ ಶಿವಾಜಿ ಮೆರವಣಿಗೆಯಲ್ಲಿ: ಬಸವರಾಜ ಹೊರಟ್ಟಿ ಬೇಸರ

ಬಸವ ಸಮಿತಿ ವಜ್ರಮಹೋತ್ಸವ ಉದ್ಘಾಟಿಸಿ ಬಸವರಾಜ ಹೊರಟ್ಟಿ ಬೇಸರ
Published : 14 ಸೆಪ್ಟೆಂಬರ್ 2024, 15:20 IST
Last Updated : 14 ಸೆಪ್ಟೆಂಬರ್ 2024, 15:20 IST
ಫಾಲೋ ಮಾಡಿ
Comments

ಬೆಂಗಳೂರು: ‘ಹುಬ್ಬಳ್ಳಿಯಲ್ಲಿ ಒಂದೆರಡು ಲಕ್ಷ ಲಿಂಗಾಯತರಿದ್ದಾರೆ. ಬಸವ ಜಯಂತಿ ಪ್ರಯುಕ್ತ ಮೆರವಣಿಗೆ ಮಾಡಿದರೆ 250 ರಿಂದ 300 ಜನ ಸೇರಿದರೆ ಹೆಚ್ಚು. ಆದರೆ, ಶಿವಾಜಿ ಭಾವಚಿತ್ರ ಮೆರವಣಿಗೆ ಮಾಡಿದರೆ 2500 ರಿಂದ 3000 ಜನ ಸೇರುತ್ತಾರೆ. ಇವರ ಹೃದಯದೊಳಗೆ ಏನಿದೆ ಎಂದು ತಿಳಿಯುವ ಕೆಲಸವಾಗಬೇಕು’ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಬಸವ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಬಿ.ಡಿ. ಜತ್ತಿಯವರ 112ನೇ ಜನ್ಮದಿನೋತ್ಸವ ಹಾಗೂ ಬಸವ ಸಮಿತಿ ವಜ್ರಮಹೋತ್ಸವ  ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನ ವಿಚಾರಗಳನ್ನು ಮುಟ್ಟಿಸಲು ಯಾಕೆ ಸಾಧ್ಯವಾಗಿಲ್ಲ ಎಂಬುದರ ಬಗ್ಗೆ ಚರ್ಚೆಯಾಗಬೇಕು. ಏನು ತಪ್ಪಿದೆ ಎಂದು ತಿಳಿದುಕೊಂಡು ವಿಚಾರ ಮಾಡಬೇಕು ಎಂದು ಸಲಹೆ ನೀಡಿದರು.

‘ಭಾರತ ಜಾತ್ಯತೀತ ದೇಶ ಎಂದು ಮಾತಿನಲ್ಲಿ ಹೇಳುತ್ತೇವೆ. ಆದರೆ, ಎಲ್ಲ ಕಡೆ ಜಾತಿವಾದವೇ ಕಾಣುತ್ತಿದೆ. ಚುನಾವಣೆಯಲ್ಲಿ ಅಭ್ಯರ್ಥಿಯನ್ನು ನಿಲ್ಲಿಸಬೇಕಿದ್ದರೆ ಜಾತಿ ಮಾತ್ರವಲ್ಲ, ಉಪಜಾತಿಯನ್ನೂ ಕೇಳಿಯೇ ನಿಲ್ಲಿಸಲಾಗುತ್ತಿದೆ. ಎಲ್ಲರೂ ಜಾತಿ ಆಚರಿಸುವಾಗ ನಾವು ಲಿಂಗಾಯತರು ಹಿಂದಕ್ಕೆ ಸರಿಯುವುದರಲ್ಲಿ ಅರ್ಥವಿಲ್ಲ. ನಾವು ಜಾತಿ ಆಚರಿಸುವುದರಲ್ಲಿ ತಪ್ಪಿಲ್ಲ’ ಎಂದು ಪ್ರತಿಪಾದಿಸಿದರು.

ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ‘ರಾಜ್ಯ, ದೇಶ ಮಾತ್ರವಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮನ್ವಯ ಸಾಧಿಸಲು ಬಸವಣ್ಣನ ತತ್ವಗಳು ಬೇಕಾಗಿದೆ. ವಚನಗಳು ಮಾನವೀಯತೆಯ ಭಂಡಾರವಾಗಿದ್ದು, ಅವುಗಳನ್ನು ಸರ್ವರಿಗೂ ತಲುಪಿಸಬೇಕು’ ಎಂದು ತಿಳಿಸಿದರು.

‘ನಾವು ಆಡುವ ಮಾತು ಮತ್ತು ಮಾಡುವ ಕೆಲಸಗಳು ದೇಶಕ್ಕೆ ಪೂರಕವಾಗಿರಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುವುದಿಲ್ಲ. ವಿದ್ಯಾರ್ಥಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ’ ಎಂದು ಹೇಳಿದರು.

ಬೇಲಿಮಠದ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಧ್ಯಕ್ಷತೆ ವಹಿಸಿದ್ದರು. ಎನ್‌.ಜಿ. ಮಹಾದೇವಪ್ಪ ಅವರ ‘ಅಲ್ಲಮನ ವಜ್ರಗಳು’ ಕೃತಿ ಬಿಡುಗಡೆ ಮಾಡಲಾಯಿತು. ವಿವಿಧ ಮಹನೀಯರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT