ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲ್ವೆ: ಹೆಚ್ಚು ಕನ್ನಡಿಗರಿಗೆ ಉದ್ಯೋಗ ಸಿಗಲಿ: ಕೇಂದ್ರ ಸಚಿವ ವಿ.ಸೋಮಣ್ಣ

Published : 27 ಸೆಪ್ಟೆಂಬರ್ 2024, 16:33 IST
Last Updated : 27 ಸೆಪ್ಟೆಂಬರ್ 2024, 16:33 IST
ಫಾಲೋ ಮಾಡಿ
Comments

ಬೆಂಗಳೂರು: ‘ರೈಲ್ವೆ ನೇಮಕಾತಿ ಮಂಡಳಿ ನಡೆಸುವ‌ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಅವಕಾಶವಿದ್ದು, ಈ ಬಾರಿ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಆಯ್ಕೆಯಾಗಬೇಕು’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಅಖಿಲ ಕರ್ನಾಟಕ ಕನ್ನಡ ಚಳವಳಿ ಸಮಿತಿ ಮತ್ತು ಬಿಬಿಎಂಪಿ ನೌಕರರ ಕನ್ನಡ ಸಂಘ ಜಂಟಿಯಾಗಿ ಶುಕ್ರವಾರ ಆಯೋಜಿಸಿದ್ದ ‘ಕನ್ನಡ ಸೇನಾನಿ ಜಿ‌.ನಾರಾಯಣಕುಮಾರ್ ಸಂಸ್ಮರಣೆ' ಕಾರ್ಯಕ್ರಮ ಉದ್ಘಾಟಿಸಿ, 'ಜಿನಾಕು ಪ್ರಶಸ್ತಿ' ಪ್ರದಾನ ಮಾಡಿ ಅವರು ಮಾತನಾಡಿದರು.

‘ರೈಲ್ವೆ ಇಲಾಖೆಯಲ್ಲಿ ಈ ಬಾರಿ ಸುಮಾರು 16 ಸಾವಿರ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯುತ್ತಿದೆ. ಈ ಪರೀಕ್ಷೆಯಲ್ಲಿ ರಾಜ್ಯದಿಂದ ಎರಡು ಸಾವಿರ ಮಂದಿಯಾದರೂ ಆಯ್ಕೆಯಾಗಬೇಕು. ಆಗ ಈ ವ್ಯವಸ್ಥೆಯನ್ನು ಮುಂದುವರಿಸಲು ಅನುಕೂಲವಾಗುತ್ತದೆ’ ಎಂದರು.

‘ಜಿ.ನಾರಾಯಣಕುಮಾರ್ ಅವರು, ಚುನಾವಣೆಯಲ್ಲಿ ಮಾತ್ರ ನನ್ನ ಎದುರಾಳಿಯಾಗಿದ್ದರು. ಆನಂತರ ಅದನ್ನೆಲ್ಲ ಮರೆತು ಸ್ನೇಹಿತರಂತೆ ಇರುತ್ತಿದ್ದರು. ಅವರು ಅಪ್ಪಟ ಕನ್ನಡ ಪರ ಹೋರಾಟಗಾರ. ಕನ್ನಡ ಭಾಷೆ, ನಾಡು, ನುಡಿಗಾಗಿ ಜೀವನವನ್ನೇ ಮುಡುಪಿಟ್ಟಿದ್ದರು. ಇವತ್ತಿನ ರಾಜಕಾರಣದಲ್ಲಿ ಅಂಥವರು ಅಪರೂಪ’ ಎಂದು ಅವರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು‌.

ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿದರು.

‘ಜಿನಾಕು ಪ್ರಶಸ್ತಿ’ ಪಶಸ್ತಿ ಸ್ಬೀಕರಿಸಿದ ಲಕ್ಷ್ಮಿಕಾಂತ ಮತ್ತು ಎಚ್‌.ರವೀಂದ್ರ ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದರು.

ಜಿ.ನಾರಾಯಣಕುಮಾರ್ ಅವರ ಪುತ್ರ ಗುರುದೇವ್‌ ನಾರಾಯಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ತಂದೆಯ ಹೋರಾಟದ ಹಾದಿ ಸ್ಮರಿಸಿದರು. ‘ನಮ್ಮ ನಾಡು, ನಮ್ಮ ಆಳ್ವಿಕೆ’ ತಂಡದ ಭುವನೇಶ್, ಕನ್ನಡ ಚಳವಳಿ ನಡೆದು ಬಂದ ಹಾದಿ ಕುರಿತು ಉಪನ್ಯಾಸ ನೀಡಿದರು‌.

ಯಾವುದೇ ಭಾಷೆ ಕಲಿಯಲು ಇಚ್ಛಾಶಕ್ತಿ ಇರಬೇಕು. ನಾನು ಕಡಿಮೆ ಅವಧಿಯಲ್ಲಿ ಹಿಂದಿ ಭಾಷೆ ಕಲಿತೆ. ಇದರಿಂದ ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸುವುದೂ ಸೇರಿ ರಾಜ್ಯಕ್ಕೆ ಒಂದಷ್ಟು ಸೌಲಭ್ಯ ತರಲು ಸಾಧ್ಯವಾಯಿತು‌
ವಿ.ಸೋಮಣ್ಣ ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT