ಹಾವೇರಿ: ತಾಲ್ಲೂಕಿನ ಕೋಳೂರು ಗ್ರಾಮದಲ್ಲಿರುವ ಬಸವಣ್ಣ ದೇವರ ದರ್ಶನಕ್ಕೆ ಬಂದಿದ್ದ ಸಂದರ್ಭದಲ್ಲಿ ಸ್ನಾನ ಮಾಡಲು ವರದಾ ನದಿಗೆ ಇಳಿದಿದ್ದ ಬಸವರಾಜ ಮಲ್ಲಿಕಾರ್ಜುನ ತೋಟದ (47) ಎಂಬುವವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
‘ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಕಮಡೊಳ್ಳಿಯ ಬಸವರಾಜ ಮಲ್ಲಿಕಾರ್ಜುನ ತೋಟದ (47) ಅವರು ಸೋಮವಾರ ದೇವರ ದರ್ಶನಕ್ಕೆ ಬಂದಿದ್ದರು. ದರ್ಶನಕ್ಕೂ ಮುನ್ನ ಸ್ನಾನ ಮಾಡಲು ವರದಾ ನದಿಗೆ ಇಳಿದಿದ್ದರು’ ಎಂದು ಹಾವೇರಿ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದರು.
‘ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದರು. ಬಳಿಕ, ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಅಸುನೀಗಿದ್ದಾರೆ. ಬಸವರಾಜ ಅವರು ಕಾಲುಜಾರಿ ಬೀಳುತ್ತಿದ್ದಂತೆ ಗಮನಿಸಿದ್ದ ಕೆಲವರು, ರಕ್ಷಣೆಗೆ ಮುಂದಾಗಿದ್ದರು. ಆದರೆ, ರಕ್ಷಿಸಲು ಸಾಧ್ಯವಾಗಿರಲಿಲ್ಲ. ಮೃತದೇಹವನ್ನು ಹೊರಗೆ ತೆಗೆದು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಸಾವಿನ ಸಂಬಂಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.