ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಅಕ್ರಮ ಸಂಬಂಧದಿಂದ ಮಗು ಜನನ: ಮರ್ಯಾದೆಗೆ ಅಂಜಿ ಕರುಳ ಕುಡಿ ಮಾರಿದ ತಾಯಿ

Published 4 ಜುಲೈ 2024, 4:44 IST
Last Updated 4 ಜುಲೈ 2024, 4:44 IST
ಅಕ್ಷರ ಗಾತ್ರ

ಹಾವೇರಿ: ಮಗು ಅಕ್ರಮ ಹಸ್ತಾಂತರ ಹಾಗೂ ಮಾರಾಟಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು, ‘ಅಕ್ರಮ ಸಂಬಂಧದಿಂದ ಜನಿಸಿದ್ದ ಮಗುವನ್ನು ಮರ್ಯಾದೆಗೆ ಅಂಜಿ ತಾಯಿಯೇ ಮಾರಿದ್ದರು’ ಎಂಬುದನ್ನು ಪತ್ತೆ ಮಾಡಿದ್ದಾರೆ.

ದಾವಣಗೆರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್. ಕವಿತಾ ಅವರು ನೀಡಿದ್ದ ದೂರಿನಡಿ ದಾಖಲಾದ ಪ್ರಕರಣದಲ್ಲಿ ಆರೋಪಿಗಳನ್ನು ಠಾಣೆಗೆ ಕರೆಸಿದ್ದ ಪೊಲೀಸರು, ಹೇಳಿಕೆ ಪಡೆದಿದ್ದಾರೆ. ತಮ್ಮದೇ ಮಗುವನ್ನು ಬೇರೆಯವರ ಮಗುವೆಂದು ಹೇಳಿ ಅಕ್ರಮವಾಗಿ ಹಸ್ತಾಂತರಿಸಿದ್ದ ತಾಯಿಯ ಜೀವನದ ಮಾತುಗಳನ್ನು ಕೇಳಿ ಪೊಲೀಸರೇ ಮರುಗುತ್ತಿದ್ದಾರೆ.

‘ಹೊರ ಜಿಲ್ಲೆಯ 30 ವರ್ಷ ವಯಸ್ಸಿನ ಮಹಿಳೆ, ಪತಿಯಿಂದ ದೂರವಾಗಿ ಹಾವೇರಿ ಜಿಲ್ಲೆಗೆ ಬಂದು ಮೆಣಸಿನಕಾಯಿ ಸ್ವಚ್ಛಗೊಳಿಸುವ ಕೆಲಸಕ್ಕೆ ಸೇರಿದ್ದರು. ವ್ಯಕ್ತಿಯೊಬ್ಬರ ಜೊತೆ ಸಲುಗೆ ಬೆಳೆದು, ಹೆಣ್ಣು ಮಗು ಜನಿಸಿತ್ತು. ಪತಿಯಿಂದ ದೂರವಾದ ಮಹಿಳೆಗೆ ಮಗು ಹೇಗೆ ಎಂಬುದು ಸಮಾಜ ಪ್ರಶ್ನಿಸುತ್ತದೆ ಎಂದು ಮರ್ಯಾದೆಗೆ ಅಂಜಿದ್ದ ಮಹಿಳೆ, ಮಗುವನ್ನು ಬೇರೆಯವರಿಗೆ ಅಕ್ರಮವಾಗಿ ಹಸ್ತಾಂತರಿಸಿದ್ದರು. ಮಾರಾಟದ ಸಂಶಯವಿದ್ದು, ಈ ಬಗ್ಗೆ ಸದ್ಯಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ. ಅದೇ ಮಗುವನ್ನು ಜಿಲ್ಲಾ ರಕ್ಷಣಾಧಿಕಾರಿಗಳು ರಕ್ಷಣೆ ಮಾಡಿ, ಪುನರ್ವಸತಿ ಕಲ್ಪಿಸಿದ್ದಾರೆ. ಮಗು ಆರೋಗ್ಯವಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಗುವಿನ ತಾಯಿ, ಹೆರಿಗೆ ಮಾಡಿಸಿದ್ದ ಮಹಿಳೆ ಹಾಗೂ ಮಗುವನ್ನು ಖರೀದಿಸಿದ್ದ ದಂಪತಿ ಮೇಲೆ ಪ್ರಕರಣ ದಾಖಲಾಗಿದೆ. ಎಲ್ಲರನ್ನೂ ಒಮ್ಮೆ ವಿಚಾರಣೆ ಮಾಡಿ ಹೇಳಿಕೆ ಪಡೆಯಲಾಗಿದೆ. ಪ್ರಕರಣದ ಸೂಕ್ಷ್ಮತೆ ಗಮನಿಸಿದರೆ, ತಾಯಿ ಅನುಭವಿಸಿದ್ದ ಯಾತನೆ ಗೊತ್ತಾಗುತ್ತದೆ. ಆದರೆ, ಮಗುವನ್ನು ಅಕ್ರಮವಾಗಿ ಹಸ್ತಾಂತರಿಸುವ ಸಂದರ್ಭದಲ್ಲಿ ನಕಲಿ ದಾಖಲೆ ಬಳಸಿ ಜನ್ಮ ಪ್ರಮಾಣ ಪತ್ರ ಪಡೆಯಲಾಗಿದೆ. ಇದನ್ನು ಪಡೆದಿದ್ದು ಹೇಗೆ? ಯಾವೆಲ್ಲ ನಕಲಿ ದಾಖಲೆ ಸೃಷ್ಟಿಸಲಾಗಿತ್ತು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

ಹೊಟ್ಟೆಯಲ್ಲಿದ್ದ ಮಗು ತೆಗೆಸಲು ಮನಸ್ಸಾಗಲಿಲ್ಲ: ‘ವಿನಾಕಾರಣ ಜಗಳ ಮಾಡುತ್ತಿದ್ದ ಪತಿ, ನನ್ನನ್ನು ಮನೆಯಿಂದ ಹೊರಗೆ ಹಾಕಿದ. ಮನೆಯವರೂ ಆತನಿಗೆ ಸಹಕರಿಸಿದರು. ಎಲ್ಲಿಗೆ ಹೋಗಬೇಕು ಎಂದು ತಿಳಿಯದೇ, ರಸ್ತೆಯಲ್ಲಿ ಸಿಕ್ಕ ವಾಹನ ಹತ್ತಿದ್ದೆ. ಅದು ಹಾವೇರಿ ಜಿಲ್ಲೆಗೆ ಬಂತು. ಏನು ಮಾಡಬೇಕು ಎನ್ನುತ್ತ ಹೊರಟಾಗ, ಮೆಣಸಿನಕಾಯಿ ಸ್ವಚ್ಛಗೊಳಿಸುವ ಜಾಗ ಕಂಡಿತು. ಅಲ್ಲಿಯೇ ಕೆಲಸ ಸಿಕ್ಕಿತು. ಅದುವೇ ಜೀವನಕ್ಕೆ ದಾರಿ ಆಯಿತು’ ಎಂದು ಮಹಿಳೆ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಗೊತ್ತಾಗಿದೆ.

‘ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ಹೇಳಿ ಅಕ್ರಮ ಸಂಬಂಧ ಬೆಳೆಸಿದ. ಆತನ ಮಾತು ನಂಬಿದೆ. ಅದರಿಂದ ನಾನು ಗರ್ಭಿಣಿಯಾದೆ. ಈ ವಿಷಯ ತಿಳಿದ ಆತನೂ ನನ್ನಿಂದ ದೂರವಾದ. ದಿಕ್ಕು ತೋಚದಂತಾಯಿತು. ಹೊಟ್ಟೆಯಲ್ಲಿರುವ ಮಗುವನ್ನು ತೆಗೆಸಿದರೆ, ನಾನೇ ಮಗುವಿಗೆ ಮೋಸ ಮಾಡಿದಂತಾಗುತ್ತದೆ ತೆಗೆಸಲಿಲ್ಲ. ಗರ್ಭಿಣಿ ಇದ್ದರೂ ಕೊನೆಯ ದಿನದವರೆಗೂ ಕೆಲಸ ಮಾಡಿದೆ’ ಎಂದು ಅವರು ಹೇಳಿದರು.

‘ಮಗು ಜನನದ ಗಂಟೆಗೂ ಮುನ್ನ, ಮೆಣಸಿನಕಾಯಿ ಸ್ವಚ್ಛಗೊಳಿಸುವ ಕೆಲಸದಲ್ಲಿದ್ದೆ. ವಿಪರೀತ ಹೊಟ್ಟೆ ನೋವು ಬಂತು. ಆಗ ಸ್ಥಳೀಯ ಮಹಿಳೆಯೊಬ್ಬರ ಮಾತಿನಂತೆ, ಹೆರಿಗೆ ಮಾಡಿಸುವ ಮಹಿಳೆಯೊಬ್ಬರ ಮನೆಗೆ ಹೋದೆ. ಅವರ ಮನೆಯ ಕಟ್ಟೆ ಮೇಲೆಯೇ ಮಲಗಿದ್ದೆ. ಅಲ್ಲಿಯೇ ಮಗುವಿನ ಜನ್ಮವಾಯಿತು. ಮಗುವನ್ನು ನಾನು ತೆಗೆದುಕೊಂಡು ಹೋದರೆ, ಮರ್ಯಾದೆ ಹೋಗುತ್ತದೆಂದು ಭಯವಾಯಿತು. ಮಹಿಳೆ ಮೂಲಕವೇ ದಾವಣಗೆರೆ ದಂಪತಿಗೆ ಮಗುವನ್ನು ಅಕ್ರಮವಾಗಿ ಹಸ್ತಾಂತರಿಸಿದೆ. ಅದಾದ ನಂತರ, ಮರುದಿನದಿಂದ ಎಂದಿನಂತೆ ಕೆಲಸ ಮುಂದುವರಿಸಿದ್ದೆ. ಇತ್ತೀಚೆಗೆ ಪೊಲೀಸರು ನನ್ನನ್ನು ಠಾಣೆಗೆ ಕರೆಸಿದ್ದಾಗಲೇ, ಪುನಃ ಮಗುವಿನ ನೆನಪು ಬಂತು’ ಎಂದು ಮಹಿಳೆ ಹೇಳಿಕೆಯಲ್ಲಿ ವಿವರಿಸಿರುವುದಾಗಿ ಗೊತ್ತಾಗಿದೆ.

‘ನನ್ನ ಮಗುವನ್ನು ನನಗೆ ಕೊಡಿ. ಸಾಕುತ್ತೇನೆ’ ಎಂದು ಮಹಿಳೆ ಈಗ ಕೇಳುತ್ತಿದ್ದಾರೆ. ಆದರೆ, ಈಗಾಗಲೇ ಪ್ರಕರಣ ದಾಖಲಾಗಿರುವುದರಿಂದ ನ್ಯಾಯಾಲಯದ ನಿರ್ದೇಶನದಂತೆ ಮುನ್ನಡೆಯುವುದಾಗಿ ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT