ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಡಿ: ಅತಿಥಿ ಶಿಕ್ಷಕರ ₹30.83 ಲಕ್ಷ ಗೌರವಧನ ಬಾಕಿ

ಸಿದ್ಧ ಉತ್ತರ ಕೊಟ್ಟು ಸುಮ್ಮನಾಗುವ ಬಿಇಒ ಕಚೇರಿ ಸಿಬ್ಬಂದಿ
Published 25 ಜೂನ್ 2024, 5:51 IST
Last Updated 25 ಜೂನ್ 2024, 5:51 IST
ಅಕ್ಷರ ಗಾತ್ರ

ವಾಡಿ: ಮೊತ್ತೊಂದು ಶೈಕ್ಷಣಿಕ ಬಂದರೂ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿರುವ 264 ಜನರಿಗೆ ಕಳೆದ ವರ್ಷದ 2 ತಿಂಗಳ ಬಾಕಿ ಹಣ ಇನ್ನೂ ಕೈಸೇರಿಲ್ಲ.

264 ಅತಿಥಿ ಶಿಕ್ಷಕರ ಪೈಕಿ 132 ಜನರಿಗೆ ಫೆಬ್ರವರಿ, ಮಾರ್ಚ್ ತಿಂಗಳು, 124 ಜನರ ಮಾರ್ಚ್ ತಿಂಗಳ ಗೌರವಧನ ಸೇರಿ ಒಟ್ಟು ₹30.83 ಲಕ್ಷ ಗೌರವಧನ ಬಾಕಿ ಉಳಿದುಕೊಂಡಿದೆ.

ಕಳೆದ ವರ್ಷದ ಆರಂಭದಲ್ಲಿ ಮೊದಲು 180 ಜನರಿಗೆ ಮಾತ್ರ ಆಡಳಿತಾತ್ಮಕ ಅನುಮೋದನೆ ಪಡೆದು ಪಾಠಕ್ಕೆ ಅವಕಾಶ ನೀಡಲಾಗಿತ್ತು. ಆದರೂ ಶಿಕ್ಷಕರ ಕೊರತೆ ನಿಗದೇ ಇದ್ದಾಗ ಮತ್ತೆ 74 ಜನರಿಗೆ ಅವಕಾಶ ನೀಡಲಾಯಿತು. 74 ಜನರ ವೇತನ ಸಮಸ್ಯೆ ಮುಚ್ಚಿಟ್ಟ ಇಲಾಖೆ ಬಂದ ಹಣವನ್ನು 264 ಜನರಿಗೆ 2 ತಿಂಗಳ ವೇತನ ಕಡಿತ ಮಾಡಿ ಎಲ್ಲರಿಗೂ ಹಂಚಿದ್ದೇ ಸಮಸ್ಯೆಗೆ ಮೂಲಕಾರಣವಾಗಿದೆ. ಅಧಿಕಾರಿಗಳ ಯಡವಟ್ಟಿನಿಂದ ವೇತನ ಬಾರದೇ ಅತಿಥಿ ಶಿಕ್ಷಕರು ಕಂಗಲಾಗಿದ್ದಾರೆ.

ಬಾಕಿ ಹಣ ಬಿಡುಗಡೆ ಮಾಡುವಂತೆ ಹಲವು ಅತಿಥಿ ಶಿಕ್ಷಕರು ಬಿಇಒ ಕಚೇರಿಗೆ ಪ್ರತಿನಿತ್ಯ ಅಲೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಅನುದಾನ ಬಿಡುಗಡೆಗೆ ಕಚೇರಿಗೆ ಪತ್ರ ಬರೆದಿದ್ದೇವೆ ಎನ್ನುವ ಸಿದ್ದ ಉತ್ತರ ಹೇಳುತ್ತಾ ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ. ಆದರೆ ಮೂರು ತಿಂಗಳು ಕಳೆದರೂ ಹಣ ಬರುತ್ತಿಲ್ಲ. ಇದು ನಮ್ಮ ಆರ್ಥಿಕ ಸಂಕಷ್ಟ ಹೆಚ್ಚಿಸಿದೆ ಎಂದು ಅತಿಥಿ ಶಿಕ್ಷಕರು ಗೋಳು ತೋಡಿಕೊಳ್ಳುತ್ತಿದ್ದಾರೆ.

ಗೌರವಧನ ನೆಚ್ಚಿಕೊಂಡೇ ಕುಟುಂಬ ನಿರ್ವಹಣೆ ಮಾಡುತ್ತಿರುವ ಹಲವು ಅತಿಥಿ ಶಿಕ್ಷಕರಿಗೆ ಈಗ ವೇತನ ವಿಳಂಬ ದೊಡ್ಡ ಸಮಸ್ಯೆ ತಂದೊಡ್ಡಿದೆ. ತಮ್ಮ ಮೂಲ ನಿವಾಸ ಬಿಟ್ಟು ದೂರದ ಪ್ರದೇಶದವರೆಗೆ ಸಾರಿಗೆ ವೆಚ್ಚ ಭರಿಸಿ ತೆರಳಿ ಪಾಠ ಮಾಡಿದ ಶಿಕ್ಷಕರು ಈಗ ಆರ್ಥಿಕ ತೊಳಲಾಟಕ್ಕೆ ಸಿಲುಕಿದ್ದಾರೆ. ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದ್ದು ಕೂಡಲೇ ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ವರ್ಷದ ಬಾಕಿ ಹಣಕ್ಕಾಗಿ ಮೂರು ತಿಂಗಳಿನಿಂದ ಕಚೇರಿಗೆ ಅಲೆಯುತ್ತಿದ್ದೇವೆ. ಮನವಿ ಮಾಡಿ ಸುಸ್ತಾಗಿದ್ದೇವೆ. ಕೂಡಲೇ ಬಾಕಿ ವೇತನ ಬಿಡುಗಡೆ ಮಾಡಬೇಕು
ಸೋಮು ದಂಡಗುಂಡತಾಲ್ಲೂಕು ಅಧ್ಯಕ್ಷ, ಅತಿಥಿ ಶಿಕ್ಷಕರ ಸಂಘ
ಚಿತ್ತಾಪುರ ತಾಲ್ಲೂಕಿನ ಅತಿಥಿ ಶಿಕ್ಷಕರ ವೇತನ ಬಾಕಿ ಇರುವ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿ ಕೂಡಲೇ ಬಾಕಿ ಹಣ ಮಂಜೂರಿಗೆ ಕ್ರಮ ವಹಿಸಲಾಗುವುದು
ಸಕ್ರೆಪ್ಪಗೌಡ ಬಿರಾದಾರ ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT