ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಯಾಣ ಕರ್ನಾಟಕ: ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕರಜಗಿ ನೇತೃತ್ವದ ಸಮಿತಿ

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿ: ಡಾ. ಅಜಯ್ ಸಿಂಗ್
Published : 5 ಅಕ್ಟೋಬರ್ 2024, 0:19 IST
Last Updated : 5 ಅಕ್ಟೋಬರ್ 2024, 0:19 IST
ಫಾಲೋ ಮಾಡಿ
Comments

ಕಲಬುರಗಿ: ಸತತವಾಗಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಿಂದುಳಿಯುತ್ತಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಶಿಕ್ಷಣ ತಜ್ಞ ಗುರುರಾಜ ಕರಜಗಿ ನೇತೃತ್ವದಲ್ಲಿ ಆರು ಜನ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ ಡಾ. ಅಜಯ್ ಸಿಂಗ್ ತಿಳಿಸಿದರು.

ಮಂಡಳಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರಜಗಿ ಅವರೊಂದಿಗೆ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಡಾ. ರುದ್ರೇಶ್, ಹಿರೇಮಠ ಸ್ವಾಮೀಜಿ, ಬಳ್ಳಾರಿಯ ಫಾದರ್ ಫ್ರಾನ್ಸಿಸ್, ಬೀದರ್‌ನ ಶಹೀನ್ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಅಬ್ದುಲ್ ಖದೀರ್ ಸದಸ್ಯರಾಗಿ ಇರಲಿದ್ದು, ಸದಸ್ಯ ಕಾರ್ಯದರ್ಶಿಯಾಗಿ ಎನ್.ಬಿ. ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದರು.

‘ಈ ಸಮಿತಿಯು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಶಾಲೆಗಳಿಗೆ ಸಂಚರಿಸಿ ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಕುರಿತು ಜನವರಿ ಅಂತ್ಯ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ವರದಿ ನೀಡಲಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಹೆಚ್ಚಿಸಲು ಏನು ಸಿದ್ಧತೆ ನಡೆಸಬೇಕು ಎಂಬ ಬಗ್ಗೆ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಕುರಿತೂ ಸಲಹೆ ನೀಡಲಿದೆ’ ಎಂದು ಹೇಳಿದರು. 

‘ಕಳೆದ ಎರಡು ವರ್ಷಗಳಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜ್ ನೀಡಲಾಗುತ್ತಿತ್ತು. ಅಷ್ಟಾಗಿ ಸುಧಾರಣೆ ಕಂಡು ಬರದ ಹಿನ್ನೆಲೆಯಲ್ಲಿ ಈ ಬಾರಿ ಎಂಟು ಹಾಗೂ ಒಂಬತ್ತನೇ ತರಗತಿ ವಿದ್ಯಾರ್ಥಿಗಳಿಗೂ ಅಕ್ಷರ ಆವಿಷ್ಕಾರ ಯೋಜನೆಯಡಿ ಪಾಸಿಂಗ್ ಪ್ಯಾಕೇಜ್ ನೀಡಲಾಗುವುದು’ ಎಂದು ಡಾ. ಅಜಯ್ ಸಿಂಗ್ ಮಾಹಿತಿ ನೀಡಿದರು.

‘ಪ್ರತಿ ವರ್ಷ ಪ್ರಥಮ್ ಪ್ರತಿಷ್ಠಾನವು ಸಲ್ಲಿಸಿದಂತಹ ವರದಿಯ ಅನ್ವಯ ಕಲಬುರಗಿ ವಿಭಾಗದಲ್ಲಿ ಐದನೇ ತರಗತಿಯ ಶೇ 10.9ರಷ್ಟು ಮಕ್ಕಳು ಮಾತ್ರ ಎರಡನೇ ತರಗತಿಯ ಪಠ್ಯವನ್ನು ಓದುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ. ಎಂಟನೇ ತರಗತಿಯ ಶೇ 31.2ರಷ್ಟು ವಿದ್ಯಾರ್ಥಿಗಳು ಮಾತ್ರ ಎರಡನೇ ತರಗತಿಯ ಪಠ್ಯವನ್ನು ಓದುತ್ತಾರೆ. ರಾಜ್ಯಮಟ್ಟದಲ್ಲಿ ಈ ಪ್ರಮಾಣ ಕ್ರಮವಾಗಿ ಶೇ 19 ಹಾಗೂ ಶೇ 48.8ರಷ್ಟಿದೆ. ಈ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುವುದು. ಖಾಲಿ ಇರುವ ಶಿಕ್ಷಕರ ಹುದ್ದೆಗಳ ಪೈಕಿ ಮುಂದಿನ ದಿನಗಳಲ್ಲಿ 5,530 ಹುದ್ದೆಗಳನ್ನು ಭರ್ತಿ ಮಾಡಲಾಗುವುದು’ ಎಂದರು.

ಗುರುರಾಜ ಕರಜಗಿ
ಗುರುರಾಜ ಕರಜಗಿ
ಆಕಾಶ್ ಶಂಕರ್
ಆಕಾಶ್ ಶಂಕರ್

‘ಒಬ್ಬ ಶಿಕ್ಷಕರಿಗೆ 10 ವಿದ್ಯಾರ್ಥಿಗಳ ದತ್ತು’

ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ರಚಿಸಲಾದ ಸಮಿತಿಯ ಅಧ್ಯಕ್ಷ ಗುರುರಾಜ ಕರಜಗಿ ಮಾತನಾಡಿ ‘ಜಗತ್ತಿನಲ್ಲಿ ಎಲ್ಲಿಯೂ ನಡೆಯದ ವಚನ ಚಳವಳಿ ಬಸವಕಲ್ಯಾಣದಲ್ಲಿ ನಡೆಯಿತು. ದಾಸರು ಸೂಫಿ ಸಂತರು ಇಲ್ಲಿಯೇ ನೆಲೆಸಿದ್ದರು. ಹಾಗಾಗಿ ಇದು ಹಿಂದುಳಿದ ಪ್ರದೇಶವಲ್ಲ. ಆದರೆ ಕೆಲ ಕಾರಣಗಳಿಗಾಗಿ ಇಂದು ಫಲಿತಾಂಶ ಕುಸಿದಿದೆ. ಅದನ್ನು ಮೇಲೆತ್ತಲು ಹಲವು ದಾರಿಗಳಿವೆ’ ಎಂದು ಹೇಳಿದರು. ಬಹುತೇಕ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಂಗ್ಲಿಷ್ ಗಣಿತ ವಿಜ್ಞಾನದಲ್ಲಿ ಫೇಲ್ ಆಗಿದ್ದಾರೆ. ಹಾಗಾಗಿ ಆ ವಿಷಯಗಳ ನುರಿತ ಶಿಕ್ಷಕರ ತಂಡಗಳನ್ನು ರಚಿಸಲಾಗುವುದು. ಅವರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಕಾಳಜಿ ವಹಿಸಿ ಕಲಿಸಬೇಕು. ತಲಾ ಒಬ್ಬ ಶಿಕ್ಷಕರಿಗೆ 10 ವಿದ್ಯಾರ್ಥಿಗಳನ್ನು ದತ್ತು ನೀಡಲಾಗುವುದು. ಅವರು ಪರೀಕ್ಷೆಗೆ ಅಣಿಗೊಳಿಸಬೇಕು. ಬೆಳಿಗ್ಗೆ ಬೇಗನೇ ಎಬ್ಬಿಸುವುದರಿಂದ ಹಿಡಿದು ಪಾಠಗಳನ್ನು ಸರಿಯಾಗಿ ಓದುತ್ತಾರೋ ಇಲ್ಲವೋ ಎಂಬುದನ್ನು ಗಮನಿಸುವವರೆಗೂ ಹಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಜಿಲ್ಲೆಗಳಲ್ಲಿ ಸಂಚರಿಸಿ ಅಗತ್ಯವಿರುವ ಸಲಹೆಗಳನ್ನು ಕೆಕೆಆರ್‌ಡಿಬಿ ಹಾಗೂ ಶಾಲಾ ಶಿಕ್ಷಣ ಇಲಾಖೆಗೆ ನೀಡಲಿದ್ದೇವೆ’ ಎಂದರು.

‘ಫಲಿತಾಂಶ ಸುಧಾರಿಸದಿದ್ದರೆ ಶಿಸ್ತು ಕ್ರಮ’

ಜಿಲ್ಲಾ ಮಟ್ಟಕ್ಕಿಂತ ಕಡಿಮೆ ಫಲಿತಾಂಶ ದಾಖಲಿಸಿದ ಶಾಲೆಗಳ ಶಿಕ್ಷಕರ ವೇತನದ ಇನ್‌ಕ್ರಿಮೆಂಟ್ ಕಡಿತ ಮಾಡುವ ಮೂಲಕ ಶಿಸ್ತು ಕ್ರಮವನ್ನು ಈಗಾಗಲೇ ಯಾದಗಿರಿಯಲ್ಲಿ ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ. ಆಕಾಶ್ ಶಂಕರ್ ತಿಳಿಸಿದರು. ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ಶಿಕ್ಷಕರು ಕೆಲಸ ಮಾಡಲೇಬೇಕು. ಹಾಗೆ ಮಾಡದ ಸಕಾಲಕ್ಕೆ ಶಾಲೆಗೆ ಹಾಜರಾಗದ ಶಿಕ್ಷಕರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುತ್ತಲೇ ಇರುತ್ತೇವೆ. ಈ ಬಾರಿ ಕಡಿಮೆ ಫಲಿತಾಂಶದ ಕಾರಣಕ್ಕೆ ಇನ್‌ಕ್ರಿಮೆಂಟ್‌ ಕಡಿತ ಮಾಡುವ ನಿರ್ಣಯವನ್ನು ಕೈಗೊಳ್ಳುವಂತೆ ಯಾದಗಿರಿ ಜಿ.ಪಂ. ಸಿಇಒ ಅವರಿಗೆ ತಿಳಿಸಲಾಗಿತ್ತು. ಇತ್ತೀಚೆಗೆ ಮುಖ್ಯಮಂತ್ರಿ ಅವರು ವಿಜಯನಗರ ಜಿಲ್ಲೆಯ ಡಿಡಿಪಿಐ ಅವರನ್ನು ಇದೇ ಕಾರಣಕ್ಕೆ ಅಮಾನತುಗೊಳಿಸಿದ್ದರು’ ಎಂದರು. ಬೇರೆ ಜಿಲ್ಲೆಗೆ ನಿಯೋಜನೆಗೊಂಡ ಶಿಕ್ಷಕರನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT