ಸಂಚಾರ ಶಿಸ್ತಿಗೆ ಆದ್ಯತೆ: ಎಸ್.ಪಿ.
ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎನ್ನುವುದನ್ನು ಈಗಾಗಲೇ ವಾಹನಗಳ ಸವಾರರಿಗೆ ಸ್ಪಷ್ಟವಾಗಿ ಹೇಳಿದ್ದೇವೆ. ಇದಕ್ಕಾಗಿ ನಮ್ಮ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಜನರಲ್ಲಿಯೂ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಬೇಕು. ಅವರೂ ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಹೇಳಿದರು. ಸಂಚಾರ ಪೊಲೀಸರನ್ನು ಹಬ್ಬಕ್ಕೆ ಬೇರೆಡೆ ಕರ್ತವ್ಯಕ್ಕೆ ನಿಯೋಜಿಸುವುದರಿಂದ ಸಂಚಾರ ಶಿಸ್ತಿನ ಮೇಲೆ ಪರಿಣಾಮ ಬೀರುತ್ತಿದೆಯಲ್ಲವೇ ಎನ್ನುವ ಪ್ರಶ್ನೆಗೆ ‘ಸಾಧ್ಯವಾದಷ್ಟು ಅವರನ್ನು ಬಂದೋಬಸ್ತ್ ಕೆಲಸಕ್ಕೆ ನಿಯೋಜಿಸುವುದನ್ನು ತಡೆಯಲಾಗುವುದು. ಅನಿವಾರ್ಯವಾದರೆ ನಿಯೋಜಿಸಬೇಕಾಗುತ್ತದೆ. ಕೊಪ್ಪಳ ನಗರದ ಹಲವು ಪಾರ್ಕಿಂಗ್ ಸ್ಥಳಗಳು ಒತ್ತುವರಿಯಾಗಿರುವ ಮಾಹಿತಿಯಿದ್ದು ಈ ಬಗ್ಗೆ ನಗರಸಭೆಯಿಂದ ಮಾಹಿತಿ ಪಡೆದುಕೊಂಡು ಹಂತಹಂತವಾಗಿ ಸುಧಾರಣೆ ಮಾಡಲಾಗುವುದು’ ಎಂದರು.