ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗ‍ಪಟ್ಟಣ: ದಸರಾ ಬೊಂಬೆ ನಿನ್ನನು ನೋಡಲು....!

Published : 7 ಅಕ್ಟೋಬರ್ 2024, 5:57 IST
Last Updated : 7 ಅಕ್ಟೋಬರ್ 2024, 5:57 IST
ಫಾಲೋ ಮಾಡಿ
Comments

ಶ್ರೀರಂಗ‍ಪಟ್ಟಣ: ದಸರಾ ಉತ್ಸವಕ್ಕೂ ಬೊಂಬೆಗಳ ಪ್ರದರ್ಶನಕ್ಕೂ ಶತಮಾನಗಳ ನಂಟಿದ್ದು, ಪಟ್ಟಣದ ಹಳೇ ಅಂಚೆ ಕಚೇರಿ ಬೀದಿಯ ನಾಗರತ್ನಮ್ಮ ನಾರಾಯಣಭಟ್ಟ ಭವನದಲ್ಲಿ ಏರ್ಪಡಿಸಿರುವ ದಸರಾ ಬೊಂಬೆಗಳ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದೆ.

ಪಟ್ಟಣದ ಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಭಟ್‌ ಮತ್ತು ಮಂಗಳಾ ದಂಪತಿ ಈ ಬೊಂಬೆಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಇಲ್ಲಿ 3 ಸಾವಿರಕ್ಕೂ ಹೆಚ್ಚು ಬೊಂಬೆಗಳನ್ನು ಒಪ್ಪ, ಓರಣವಾಗಿ ಜೋಡಿಸಲಾಗಿದೆ. ಮೂರು ದಿನಗಳ ಸತತ ಪರಿಶ್ರಮದಿಂದ ಬೊಂಬೆಗಳನ್ನು ಜೋಡಿಸಿದ್ದು, ದೇಶದ ವಿವಿಧ ರಾಜ್ಯಗಳ ಜಾನಪದ ಕಲೆಗಳನ್ನು ಬಿಂಬಿಸುವ ಬೊಂಬೆಗಳು ಆಯಾ ರಾಜ್ಯಗಳ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತಿವೆ.

ದಸರಾ ಉತ್ಸವದಲ್ಲಿ ಜಂಬೂ ಸವಾರಿಯ ಮೆರವಣಿಗೆ, ಮಂಗಳ ವಾದ್ಯ, ಸಪ್ತ ಮಾತೃಕೆಯರು, ನವ ದುರ್ಗೆಯರು, ಶ್ರೀನಿವಾಸ ಕಲ್ಯಾಣ, ವೈಕುಂಠ, ಕಂಚಿ ಗರುಡೋತ್ಸವ, ಶಿವ– ಪಾರ್ವತಿ, ಲಕ್ಷ್ಮಿನಾರಾಯಣ, ವಿಷ್ಣುವಿನ ದಶಾವತಾರ, ರಾಜಸ್ತಾನಿ ವಾದ್ಯವೃಂದ, ಸಿಪಾಯಿ, ಮೈಸೂರಿನ ಚನ್ನಯ್ಯ ಕುಸ್ತಿ ಅಖಾಡವನ್ನು ಬಿಂಬಿಸುವ ಬೊಂಬೆಗಳು ಮತ್ತೆ ಮತ್ತೆ ನೋಡಬೇಕೆನಿಸುತ್ತವೆ. ಶ್ರೀಕೃಷ್ಣ ಕುಟೀರವಂತೂ ನೋಡುಗರಲ್ಲಿ ಭಕ್ತಿ, ಭಾವ ಮೂಡಿಸುತ್ತದೆ.

ಆಧುನಿಕತೆಯನ್ನು ಬಿಂಬಿಸುವ ಕ್ರಿಕೆಟ್‌ ಕ್ರೀಡಾಂಗಣ, ಲಲನೆಯರ ಜಲಕ್ರೀಡೆ, ಹಣ್ಣು ಮತ್ತು ತರಕಾರಿ ಅಂಗಡಿ, ದಿನಸಿ ಅಂಗಡಿ, ಮೆಟಲ್‌ ಸ್ಟೋರ್‌, ಬೇಕರಿ, ಆಭರಣದ ಅಂಗಡಿ, ಪಾದರಕ್ಷೆ ಅಂಗಡಿಗಳು ಕೂಡ ಬೊಂಬೆ ಪ್ರದರ್ಶನದಲ್ಲಿವೆ. ಶಿವನ ಜಡೆಯಿಂದ ಧುಮುಕುವ ಗಂಗೆ ಗಮನ ಸೆಳೆಯುತ್ತವೆ.

ಪ್ರದರ್ಶನಕ್ಕೆ ಇರಿಸಿರುವ ಬೊಂಬೆಗಳ ಪೈಕಿ ಅರ್ಧದಷ್ಟು ಬೊಂಬೆಗಳನ್ನು ಕೃಷ್ಣಭಟ್‌ ಅವರ ಪತ್ನಿ ಮಂಗಳ ಅವರೇ ಸಿದ್ದಪಡಿಸಿರುವುದು ವಿಶೇಷ. ರಾಜಸ್ತಾನ ಇತರ ರಾಜ್ಯಗಳಿಂದ ಬೊಂಬೆಗಳು ತರಲಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಬೊಂಬೆಗಳಿಗೆ ಪಾರಂಪರಿಕ ಸ್ಪರ್ಶ ನೀಡಿ ಆಕರ್ಷಕಗೊಳಿಸಲಾಗಿದೆ.

ನವರಾತ್ರಿ ಆಚರಣೆಯ ಆರಂಭದ ದಿನದಿಂದ 15 ದಿನಗಳ ವರೆಗೆ ಬೊಂಬೆಗಳ ಪ್ರದರ್ಶನ ಇರುತ್ತದೆ. ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆ ವರೆಗೆ ಬೊಂಬೆಗಳನ್ನು ನೋಡಲು ಮುಕ್ತ ಅವಕಾಶವಿದೆ. ಬೊಂಬೆಗಳನ್ನು ನೋಡಲು ಬರುವವರಿಗೆ ಸಿಹಿ ತಿನಿಸು, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು ಕೊಡಲಾಗುತ್ತಿದೆ.

‘ಮೂವತ್ತೈದು ವರ್ಷಗಳಿಂದ ನಮ್ಮ ತಾಯಿ ದಸರಾ ಬೊಂಬೆಗಳನ್ನು ಮನೆಯಲ್ಲಿ ಕೂರಿಸುತ್ತಿದ್ದರು. ಈಚಿನ ವರ್ಷಗಳಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಪ್ರತ್ಯೇಕ ಭವನದಲ್ಲಿ ದಸರಾ ಬೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ. ಪ್ರತಿ ದಿನ 300ರಿಂದ 400 ಜನರು ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಉದ್ದೇಶದಿಂದ ಬೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ ಎಂಬುದು ಕೃಷ್ಣಭಟ್‌ ಅವರ ವಿವರಣೆ. ಕೃಷ್ಣಭಟ್‌ ಅವರ ಸಂಪರ್ಕಕ್ಕೆ ಮೊ:98451 38068.

ದಸರಾ ಬೊಂಬೆ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿರುವ ಕೃಷ್ಣ ಕುಟೀರ
ದಸರಾ ಬೊಂಬೆ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿರುವ ಕೃಷ್ಣ ಕುಟೀರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT