ಮೈಸೂರು: ಪ್ಯಾರಿಸ್ ಒಲಿಂಪಿಕ್ಸ್ನ ಕಂಚಿನ ಪದಕವಿಜೇತ ಭಾರತ ಹಾಕಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಗುರುವಾರ ಇಲ್ಲಿ ಆರಂಭಗೊಂಡ ದಸರಾ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಆಕರ್ಷಣೆಯಾದರು. ಅವರೊಟ್ಟಿಗೆ ಸೆಲ್ಫಿ ತೆಗೆಸಿಕೊಳ್ಳಲು ಕ್ರೀಡಾಪಟುಗಳು ಮುಗಿಬಿದ್ದರು.
ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಹರ್ಮನ್ಪ್ರೀತ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಪೇಟ ತೊಡಿಸಿ, ₹ 5 ಲಕ್ಷ ಚೆಕ್ ನೀಡಿ ಸನ್ಮಾನಿಸಿದರು.
‘ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವುದು ನನ್ನ ಕನಸಾಗಿತ್ತು. ಪ್ಯಾರಿಸ್ ನಲ್ಲಿ ಅದು ನನಸಾಗಿದೆ. ಕರ್ನಾಟಕದಲ್ಲಿ ಉತ್ತಮ ಕ್ರೀಡಾಸೌಲಭ್ಯ ಇರುವುದು ಒಳ್ಳೆಯ ಬೆಳವಣಿಗೆ. ಇಲ್ಲಿಂದ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮಲಿ’ ಎಂದು ಹರ್ಮನ್ಪ್ರೀತ್ ಆಶಿಸಿದರು.
ರಾಜ್ಯದ 5 ವಿಭಾಗಗಳ 3 ಸಾವಿರ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು, ಶುಕ್ರವಾರದಿಂದ ಸ್ಪರ್ಧೆಗಳು ಆರಂಭ ಆಗಲಿವೆ.