ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಮತ್ತೊಂದು ಹಿನ್ನಡೆಯಾಗಿದೆ. ನಿಲೋಖೇರಿ ವಿಧಾನಸಭಾ ಕ್ಷೇತ್ರದ (ಮೀಸಲು) ಎಎಪಿ ಅಭ್ಯರ್ಥಿ ಅಮರ್ ಸಿಂಗ್ ಕಾಂಗ್ರೆಸ್ ಸೇರಿದ್ದಾರೆ.
ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಅವರ ಸಮ್ಮುಖದಲ್ಲಿ ಅಮರ್ ಸಿಂಗ್ ಕಾಂಗ್ರೆಸ್ ಸೇರಿದರು. ಬಳಿಕ ಮಾತನಾಡಿದ ಅವರು, ರೈತರು, ಮಹಿಳೆಯರು, ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿರುವ ಬಿಜೆಪಿಯನ್ನು ಸೋಲಿಸುವ ಶಕ್ತಿ ಹೊಂದಿರುವುದು ಕಾಂಗ್ರೆಸ್ ಮಾತ್ರ ಎಂದರು.
ಸೆಪ್ಟೆಂಬರ್ 28ರಂದು ಫರೀದಾಬಾದ್ ಕ್ಷೇತ್ರದ ಎಎಪಿ ಅಭ್ಯರ್ಥಿಯಾಗಿದ್ದ ಪ್ರವೇಶ್ ಮೆಹ್ತಾ ಅವರು ಆಡಳಿತಾರೂಢ ಬಿಜೆಪಿ ಸೇರಿದ ಕೆಲವೇ ದಿನಗಳ ನಂತರ ಎಎಪಿಗೆ ಮತ್ತೊಂದು ಹಿನ್ನಡೆಯಾಗಿದೆ.
ಎಎಪಿ ಪಕ್ಷವು ಇಂಡಿಯಾ ಮೈತ್ರಿಕೂಟದ ಭಾಗವಾಗಿದೆ. ಈಗಿದ್ದರೂ ಹರಿಯಾಣದಲ್ಲಿ ಕಾಂಗ್ರೆಸ್ ಮತ್ತು ಎಎಪಿ ನಡುವೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆಗಾಗಿ ಎರಡು ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿವೆ.