ನವದೆಹಲಿ: 'ಭಾರತ ಮಾತೆಯ ಹಾಗೂ ಪ್ರೀತಿಯ ಧ್ವನಿ ದೇಶದೆಲ್ಲೆಡೆ ಕೇಳಿಸುವಂತೆ ಮಾಡುವುದೇ ನಮ್ಮ ಗುರಿಯಾಗಿದೆ' ಎಂದು 'ಭಾರತ್ ಜೋಡೊ ಯಾತ್ರೆ'ಯ ಎರಡನೇ ವರ್ಷಾಚರಣೆಯ ವೇಳೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ. 'ಭಾರತ್ ಜೋಡೊ ಯಾತ್ರೆಯು ನನಗೆ ಮೌನದ ಸೌಂದರ್ಯವನ್ನು ಕಲಿಸಿತು. ಆ 145 ದಿನಗಳಲ್ಲಿ ಹಾಗೂ ನಂತರದ ಎರಡು ವರ್ಷಗಳಲ್ಲಿ ನಾನು ವಿವಿಧ ಹಿನ್ನೆಲೆಯ ಸಾವಿರಾರು ಮಂದಿ ಭಾರತೀಯರ ಮಾತುಗಳನ್ನು ಆಲಿಸಿದ್ದೇನೆ. ಪ್ರತಿಯೊಬ್ಬರ ಧ್ವನಿಯು ಹೊಸತನವನ್ನು ಹೊಂದಿತ್ತು. ಭಾರತ ಮಾತೆಯನ್ನು ಪ್ರತನಿಧಿಸಿತ್ತು' ಎಂದು ಅವರು ಹೇಳಿದ್ದಾರೆ.
'ಸ್ವತಸ್ಸಿದ್ಧವಾಗಿ ಭಾರತೀಯರು ಪ್ರೀತಿಸುವ ಜನರು ಎಂದು ಯಾತ್ರೆಯು ಸಾಬೀತುಪಡಿಸಿತು. ನಾನು ಯಾತ್ರೆಯ ಆರಂಭದಲ್ಲಿ ದ್ವೇಷದ ಮೇಲೆ ಪ್ರೀತಿಯು ಜಯ ಗಳಿಸಲಿದೆ ಮತ್ತು ಭಯವನ್ನು ಸೋಲಿಸಲಿದೆ ಎಂದು ಹೇಳಿದ್ದೆ. ಇಂದಿಗೂ ನಮ್ಮ ಧ್ಯೇಯವು ಅದೇ ಆಗಿದೆ. ಭಾರತ ಮಾತೆಯ ಹಾಗೂ ಪ್ರೀತಿಯ ಧ್ವನಿ ದೇಶದೆಲ್ಲೆಡೆ ಕೇಳಿಸುವಂತೆ ಮಾಡುವುದೇ ನಮ್ಮ ಗುರಿಯಾಗಿದೆ' ಎಂದು ಹೇಳಿದ್ದಾರೆ.
2022ರ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೊ ಪಾದಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 3,570 ಕಿ.ಮೀ. ಅಧಿಕ ದೂರ ಸಂಚರಿಸಿತ್ತು. ಈ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ರಾಹುಲ್ ಗಾಂಧಿ ಆಲಿಸಿದ್ದರು.