ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತಿಗಣತಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ ಬೆಂಬಲ

Published 20 ಜುಲೈ 2024, 10:20 IST
Last Updated 20 ಜುಲೈ 2024, 10:20 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರವ್ಯಾಪಿ ಜಾತಿಗಣತಿ ನಡೆಸುವ ಕುರಿತು ಬೆಂಬಲ ವ್ಯಕ್ತಪಡಿಸಿರುವ ಕೇಂದ್ರ ಸಚಿವರು ಆಗಿರುವ ಎಲ್‌ಜೆಪಿ(ರಾಮ್‌ ವಿಲಾಸ್‌) ನಾಯಕ ಚಿರಾಗ್ ಪಾಸ್ವಾನ್‌, ಜಾತಿಗಣತಿಯ ದತ್ತಾಂಶಗಳನ್ನು ಬಹಿರಂಗಗೊಳಿಸುವುದು ಸಮಾಜದಲ್ಲಿ ಒಡಕುಂಟು ಮಾಡಬಹುದು ಎಂದಿದ್ದಾರೆ.

ಪಿಟಿಐ ಸಂಪಾದಕರೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ‘ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಜಾತಿಗಣತಿ ನಡೆಸುವ ಅಗತ್ಯವಿದೆ’ ಎಂದರು.

‘ಸಮುದಾಯ ಆಧಾರಿತ ಅಭಿವೃದ್ಧಿ ಯೋಜನೆಗಳಿಗೆ ಹಣ ಹಂಚಿಕೆ ಮಾಡುವಾಗ ನಿರ್ದಿಷ್ಟ ದತ್ತಾಂಶಗಳ ಅಗತ್ಯವಿದೆ. ಇದಕ್ಕಾಗಿ ಜಾತಿಗಣತಿ ನಡೆಸುವ ಅವಶ್ಯಕತೆಯಿದೆ. ಜಾತಿಗಣತಿಯು ಮುಂದಿನ ಜನಗಣತಿಯ ಒಂದು ಭಾಗವಾಗಬೇಕಿದೆ. ಆದರೆ ಜಾತಿಗಣತಿ ದತ್ತಾಂಶಗಳನ್ನು ಬಹಿರಂಗಗೊಳಿಸುವುದಕ್ಕೆ ನನ್ನ ವಿರೋಧವಿದೆ. ಇದು ಸಮಾಜದಲ್ಲಿ ಒಡಕುಂಟು ಮಾಡುವ ಸಾಧ್ಯತೆಯಿದೆ’ ಎಂದು ಹೇಳಿದರು.

ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಸ್ವಾನ್‌, ‘ಭಾಷೆ, ಸಂಸ್ಕೃತಿ, ಜೀವನ ಶೈಲಿ ವಿಷಯದಲ್ಲಿ ದೇಶದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಚರಣೆಯಿದೆ. ಒಂದೇ ಛತ್ರಿಯಡಿಯಲ್ಲಿ ಎಲ್ಲರನ್ನು ತಂದು ನಿಲ್ಲಿಸುವುದು ಹೇಗೆ?’ ಎಂದು ಕೇಳಿದರು.

‘ಯುಸಿಸಿಯ ಕರಡು ಪ್ರತಿ ನಮಗೆ ಸಿಕ್ಕಿಲ್ಲ. ಅದನ್ನು ಪರಿಶೀಲಿಸುವವರೆಗೂ ಅದರ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿದ್ದರಿಂದ ಆ ಬಗ್ಗೆ ಸಾಕಷ್ಟು ಕಳವಳ ವ್ಯಕ್ತವಾಗುತ್ತಿದೆ’ ಎಂದರು. ಅದಾಗ್ಯೂ ‘ಒಂದು ರಾಷ್ಟ್ರ ಒಂದು ಚುನಾವಣೆ’ಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

‘ಯುಸಿಸಿ ಎಲ್ಲ ಚರ್ಚೆಗಳಲ್ಲಿ ಹಿಂದೂ ಮತ್ತು ಮುಸ್ಲಿಮರ ಬಗ್ಗೆ ಮಾತನಾಡಲಾಗುತ್ತದೆ. ಆದರೆ ಇದು ಹಿಂದೂಗಳಿಗೂ ಸಂಬಂಧಿಸಿದ್ದಾಗಿದೆ. ಮದುವೆಗೆ ಸಂಬಂಧಿಸಿದಂತೆ ಹಿಂದೂಗಳ ಆಚರಣೆಗಳು ಮತ್ತು ಸಂಪ್ರದಾಯಗಳು ದೇಶದಾದ್ಯಂತ ಭಿನ್ನವಾಗಿವೆ’ ಎಂದು ಹೇಳಿದರು.

ಏಕರೂಪ ನಾಗರಿಕ ಸಂಹಿತೆ ಮತ್ತು ‘ಒಂದು ರಾಷ್ಟ್ರ– ಒಂದು ಚುನಾವಣೆ’ ಕುರಿತು ಆಡಳಿತಾರೂಢ ಎನ್‌ಡಿಎಯಲ್ಲಿ ಇದುವರೆಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಇದೇ ವೇಳೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT