ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮಿತ್ ಶಾ ವಿರುದ್ಧ ರಾಹುಲ್ ಅವಹೇಳನ ಆರೋಪ: ವಿಚಾರಣೆ ಸೆ. 21ಕ್ಕೆ ಮುಂದೂಡಿಕೆ

Published : 19 ಸೆಪ್ಟೆಂಬರ್ 2024, 9:45 IST
Last Updated : 19 ಸೆಪ್ಟೆಂಬರ್ 2024, 9:45 IST
ಫಾಲೋ ಮಾಡಿ
Comments

ಸುಲ್ತಾನಪುರ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯಲ್ಲಿ ದೂರುದಾರರ ಪರ ವಕೀಲರ ಅಲಭ್ಯತೆಯಿಂದಾಗಿ ಶಾಸಕರ ಹಾಗೂ ಸಂಸದರ ವಿಶೇಷ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಸೆ. 21ಕ್ಕೆ ಮುಂದೂಡಿದೆ.

ಪ್ರಕರಣದ ದೂರುದಾರರಾದ ವಿಜಯ್ ಮಿಶ್ರಾ ಅವರ ಪರ ವಕೀಲ ಸಂತೋಶ್ ಕುಮಾರ್ ಪಾಂಡೆ ಅವರಿಗೆ ಗುರುವಾರ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಚಾರಣೆ ಇದ್ದುದರಿಂದ ಹೆಚ್ಚುವರಿ ಕಾಲಾವಕಾಶ ಕೋರಿದರು. ವಿಶೇಷ ನ್ಯಾಯಾಧೀಶ ಶುಭಂ ವರ್ಮಾ ಅವರು ಅದನ್ನು ಮಾನ್ಯ ಮಾಡಿದರು.

2018ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯನ್ನು ರಾಹುಲ್ ಗಾಂಧಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಬಿಜೆಪಿ ಮುಖಂಡರೂ ಆಗಿರುವ ಮಿಶ್ರಾ ಅವರು 2018ರ ಆಗಸ್ಟ್‌ನಲ್ಲಿ ದೂರು ನೀಡಿದ್ದರು. ಭಾರತ್ ಜೋಡೊ ಯಾತ್ರಾ ಸಂದರ್ಭದಲ್ಲೇ 2024ರ ಫೆ. 20ರಂದು ನ್ಯಾಯಾಲಯಕ್ಕೆ ಹಾಜರಾದ ರಾಹುಲ್ ಗಾಂಧಿ ಅವರಿಗೆ ವೈಯಕ್ತಿಕ ಬಾಂಡ್‌ ಮೇಲೆ ಜಾಮೀನು ಮಂಜೂರು ಮಾಡಲಾಗಿತ್ತು.

ಈ ನಡುವೆ ತಮ್ಮ ಹೇಳಿಕೆ ದಾಖಲಿಸುವಂತೆ ಹಲವು ಬಾರಿ ನ್ಯಾಯಾಲಯ ನೋಟಿಸ್ ನೀಡಿದ್ದರೂ, ರಾಹುಲ್ ಹಾಜರಾಗಿರಲಿಲ್ಲ. ಹೀಗಾಗಿ ಖುದ್ದು ಹಾಜರಿಗೆ ನ್ಯಾಯಾಲಯ ನಿರ್ದೇಶಿಸಿತ್ತು. ಅದರಂತೆ ಕಳೆದ ಜುಲೈ 26ರಂದು ವಿಶೇಷ ನ್ಯಾಯಾಲಯದ ಮುಂದೆ ಹಾಜರಾದ ರಾಹುಲ್ ಗಾಂಧಿ, ತಮ್ಮ ಹೇಳಿಕೆ ದಾಖಲಿಸಿದ್ದರು.

‘ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಾಗುವಂತೆ ನಾನು ಯಾರ ವಿರುದ್ಧವೂ ಹೇಳಿಕೆ ನೀಡಿಲ್ಲ. ಇದೊಂದು ಅಗ್ಗದ ಪ್ರಚಾರಕ್ಕಾಗಿ ಮಾಡಿರುವ ಆರೋಪ’ ಎಂದು ನ್ಯಾಯಾಲಯಕ್ಕೆ ಹೇಳಿದ್ದರು.

ಪ್ರಕರಣದ ವಿಚಾರಣೆಗೆ ಆ. 12ರಂದು ದಿನಾಂಕ ನಿಗದಿಯಾಗಿತ್ತು. ಆದರೆ ಆ ದಿನ ನ್ಯಾಯಾಧೀಶರು ರಜೆ ಇದ್ದರು. ಆರೋಗ್ಯ ಸಮಸ್ಯೆಯಿಂದ ಆಗಸ್ಟ್‌ 23 ಹಾಗೂ ಸೆ. 5ರಂದು ದೂರುದಾರ ವಿಚಾರಣೆಗೆ ಗೈರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT