ಶ್ರೀನಗರ: ವಿಧಾನಸಭೆ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜನರು ನೀಡಿದ ತೀರ್ಪಿನಿಂದ ಬಿಜೆಪಿ ಪಾಠ ಕಲಿತುಕೊಳ್ಳಬೇಕು, ಮುಂಬರುವ ನ್ಯಾಷನಲ್ ಕಾನ್ಫರೆನ್ಸ್–ಕಾಂಗ್ರೆಸ್ ಸರ್ಕಾರದಲ್ಲಿ ಮೂಗು ತೂರಿಸಬಾರದು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
‘ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನ್ಯಾಷನಲ್ ಕಾನ್ಫರೆನ್ಸ್ನ ನಾಯಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅತಂತ್ರ ವಿಧಾನಸಭೆ ಫಲಿತಾಂಶ ನೀಡದ ಜಮ್ಮು ಮತ್ತು ಕಾಶ್ಮೀರದ ಜನತೆಗೂ ನಾನು ಅಭಿನಂದನೆ ತಿಳಿಸುತ್ತೇನೆ. ಯಾಕೆಂದರೆ ಅವರು 2019ರ ಆಗಸ್ಟ್ 5ರ ಬಳಿಕ ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಅವರ ಸಮಸ್ಯೆಗಳ ಪರಿಹಾರಕ್ಕೆ ಸ್ಥಿರ ಮತ್ತು ಗಟ್ಟಿ ಸರ್ಕಾರದ ಅವಶ್ಯಕತೆ ಇದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.
ಸ್ಪಷ್ಟವಾದ ಫಲಿತಾಂಶ ಬರದೇ ಇದ್ದಿದ್ದರೆ, ಯಾವುದಾದರೂ ದುಸ್ಸಾಹಸ ನಡೆಯುತ್ತಿತ್ತು. ಈ ಫಲಿತಾಂಶದಿಂದ ಬಿಜೆಪಿ ಪಾಠ ಕಲಿಯಬೇಕು. ಸರ್ಕಾರದ ಆಗುಹೋಗುಗಳಲ್ಲಿ ಮೂಗು ತೂರಿಸಬಾರದು. ಒಂದು ವೇಳೆ ಹಾಗೆ ಮಾಡಿದರೆ ಅವರ ಪರಿಸ್ಥಿತಿ ಈಗಿನದ್ದಕ್ಕಿಂತ ಇನ್ನೂ ಕೆಡಲಿದೆ ಎಂದು ಹೇಳಿದ್ದಾರೆ.