ಶಿಮ್ಲಾ: ರದ್ದಾದ ಮೂರು ಕೃಷಿ ಕಾನೂನುಗಳನ್ನು ಮರು ಜಾರಿಗೊಳಿಸಬೇಕು ಎಂಬ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡಿರುವುದಾಗಿ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್ ತಿಳಿಸಿದ್ದಾರೆ.
ಈ ಕುರಿತ ವಿಡಿಯೊ ಹೇಳಿಕೆಯನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಂಗನಾ, ‘ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಪಕ್ಷದ ನಿಲುವು ಅಲ್ಲ’ ಎಂದಿದ್ದಾರೆ.
‘ಮೊದಲ ಬಾರಿಗೆ ಮೂರು ಕೃಷಿ ಕಾನೂನುಗಳನ್ನು ಪ್ರಸ್ತಾಪಿಸಿದಾಗ, ನಾವೆಲ್ಲರೂ ಅದನ್ನು ಬೆಂಬಲಿಸಿದ್ದೇವು. ರೈತರ ಮೇಲಿನ ಕಾಳಜಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಆ ಕಾನೂನುಗಳನ್ನು ರದ್ದುಗೊಳಿಸಿದರು. ಅವರ ಮಾತನ್ನು ಘನತೆಯಿಂದ ಪಾಲಿಸುವುದು ಪಕ್ಷದ ಎಲ್ಲ ಕಾರ್ಯಕರ್ತರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.
‘ಈಗ ನಾನು ನಟಿ ಮಾತ್ರ ಅಲ್ಲ ಬಿಜೆಪಿಯ ಸದಸ್ಯೆಯೂ ಹೌದು. ನನ್ನ ಅಭಿಪ್ರಾಯಗಳು ವೈಯಕ್ತಿಕವಾಗಿರದೇ ಪಕ್ಷದ ನಿಲುವನ್ನು ಪ್ರತಿನಿಧಿಸುವಂತಿರಬೇಕು’ ಎಂದು ವಿಷಾದ ವ್ಯಕ್ತಪಡಿಸಿದರು.