ಮುಂಬೈ: ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಾತಿ ಕೊಡಿಸುವುದಾಗಿ ಹಲವರಿಗೆ ವಂಚಿಸಿದ್ದ ಆರೋಪಿಯನ್ನು ಕರ್ನಾಟಕ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
‘ನಗರದ ಸಾಕಿನಾಕ ಪ್ರದೇಶದಲ್ಲಿ ಕೌನ್ಸೆಲಿಂಗ್ ಕೇಂದ್ರ ನಡೆಸುತ್ತಿದ್ದ ಬೆಳಗಾವಿ ಮೂಲದ ಆರ್ಗಾಂಡ ಅರವಿಂದ್ ಕುಮಾರ್ (47) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹಲವರಿಗೆ ವಂಚಿಸಿದ್ದ ಆರೋಪದ ಮೇಲೆ ಆರೋಪಿ ವಿರುದ್ಧ ಕರ್ನಾಟಕದಲ್ಲಿ ಕಳೆದ ವರ್ಷ ವಂಚನೆ ಪ್ರಕರಣ ದಾಖಲಾಗಿತ್ತು’ ಎಂದಿದ್ದಾರೆ.
‘ವೈದ್ಯಕೀಯ ಸೀಟು ಕೊಡಿಸುವುದಾಗಿ ಹಲವರಿಂದ ಹಣ ಪಡೆದು, ನಂತರ ಹೇಳಿದ ಕೆಲಸ ಮಾಡಿಕೊಡಲು ವಿಫಲರಾಗಿದ್ದರು’ ಎಂದು ಅವರು ತಿಳಿಸಿದ್ದಾರೆ.
‘ಇವರ ಬಂಧನಕ್ಕೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೂ ಸಂಬಂಧವಿಲ್ಲ. ತನ್ನ ತಂಡದ ಜೊತೆಗೆ ಸಾಕಿನಾಕ ಪ್ರದೇಶದಲ್ಲಿ ಕೌನ್ಸೆಲಿಂಗ್ ಸೆಂಟರ್ ತೆರೆದಿದ್ದರು. ಈತ ಸಾಕಷ್ಟು ಮಂದಿಗೆ ಇದೇ ರೀತಿ ವಂಚಿಸಿರುವ ಅನುಮಾನವಿದೆ. ಕರ್ನಾಟಕ ಪೊಲೀಸರು ದಾಳಿ ನಡೆಸಿ, ಬಂಧಿಸಿದ್ದಾರೆ’ ಎಂದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ಸಿಬಿಐ ತನಿಖೆ ಆರಂಭಿಸಿದ್ದು, ಈ ಪ್ರಕರಣ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಿದೆ.