ಗುರುವಾರ, 24 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Wayanad landslides | ಭರವಸೆ ಜೀವಂತ, ನಿಲ್ಲದ ಶೋಧ

ವಯನಾಡ್: 131 ಮಂದಿ ನಾಪತ್ತೆ l ಇಂದು ಪ್ರಧಾನಿ ಭೇಟಿ
Published : 9 ಆಗಸ್ಟ್ 2024, 23:32 IST
Last Updated : 9 ಆಗಸ್ಟ್ 2024, 23:32 IST
ಫಾಲೋ ಮಾಡಿ
Comments
ಭೂಮಿ ಅಲುಗಾಡಿದ ಅನುಭವ, ಆತಂಕ
ನಿವಾಸಿಗಳಲ್ಲಿ ಆತಂಕ ವಯನಾಡ್‌ (ಪಿಟಿಐ): ಜಿಲ್ಲೆಯ ವಿವಿಧೆಡೆ ಶುಕ್ರವಾರ ಬೆಳಿಗ್ಗೆ ಭಾರಿ ಶಬ್ದ ಕೇಳಿಬಂದಿದ್ದು ಭೂಮಿ ಅಲುಗಾಡಿದ ಅನುಭವವಾಗಿದೆ. ಇದು ನಿವಾಸಿಗಳು ಹಾಗೂ ಸ್ಥಳೀಯ ಆಡಳಿತದವರಲ್ಲಿ ಕೆಲಹೊತ್ತು ಆತಂಕವನ್ನು ಮೂಡಿಸಿತ್ತು.  ಭೂಕುಸಿತ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದು ಈ ಗ್ರಾಮಗಳ ವ್ಯಾಪ್ತಿಯಲ್ಲಿ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ಅವರು ತಿಳಿಸಿದ್ದಾರೆ. ಬಲವಯಲ್‌ ಗ್ರಾಮ ಮತ್ತು ವೈತ್ತಿರಿ ತಾಲ್ಲೂಕು ವ್ಯಾಪ್ತಿಯಲ್ಲಿ ಭೂಮಿ ಅಲುಗಾಡಿದ ಅನುಭವವಾಗಿದೆ ಎಂದೂ ಜಿಲ್ಲಾಡಳಿತ ತಿಳಿಸಿದೆ. ಜಿಲ್ಲೆಯ ಮೂರು ಗ್ರಾಮಗಳಲ್ಲಿ ಈಚೆಗೆ ಸಂಭವಿಸಿದ್ದ ಭೂಕುಸಿತ ಅವಘಡದ ಹಿನ್ನೆಲೆಯಲ್ಲಿ ನಿವಾಸಿಗಳಲ್ಲಿ ಆತಂಕ ಮೂಡಿತ್ತು. ‘ಶಬ್ದದ ಮೂಲ ಗುರುತಿಸಲಾಗುತ್ತಿದೆ. ಭೂಕಂಪದ ಸಂಜ್ಞೆ ಕಂಡುಬಂದಿಲ್ಲ’ ಎಂದು ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರವು ಹೇಳಿಕೆ ನೀಡಿದೆ.
ದೀಪಾ: ಸಂಕಷ್ಟದಲ್ಲಿ ನೆರವಿನ ‘ಬೆಳಕು‘
ವಯನಾಡ್‌: ದೀಪಾ ಜೋಸೆಫ್‌, ಬಾಧಿತ ಗ್ರಾಮಗಳಲ್ಲಿ ನೆರವು ಕಾರ್ಯಕ್ಕೆ ಕೈಜೋಡಿಸಿರುವ ಆಂಬುಲೆನ್ಸ್‌ನ ಚಾಲಕಿ. ಕೇರಳದ ಪ್ರಥಮ ಮಹಿಳಾ ಆಂಬುಲೆನ್ಸ್ ಚಾಲಕಿ ಎಂಬ ಹಿರಿಮೆ ಇವರದು. ತಮ್ಮ ವ್ಯಕ್ತಿಗತ ಬದುಕಿನ ನೋವಿನಲ್ಲೂ ಅವರು ಆಂಬುಲೆನ್ಸ್ ಓಡಿಸುತ್ತಾ ಶವಗಳ ಸಾಗಣೆ ಸೇರಿದಂತೆ ನೆರವು ಕಾರ್ಯದಲ್ಲಿ ತೊಡಗಿದ್ದಾರೆ. ಇವರ ಮಗಳು ಕೆಲ ತಿಂಗಳ ಹಿಂದೆ ರಕ್ತದ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಆಂಬುಲೆನ್ಸ್‌ ಸೇವೆ ಅತ್ಯಗತ್ಯ ಎಂದು ತಿಳಿದು ಕೋಯಿಕ್ಕೋಡ್‌ನಿಂದ ವಯನಾಡ್‌ಗೆ ಬಂದಿದ್ದರು. ಅಂಗಾಂಗಗಳು, ಶವಗಳನ್ನು ಸಾಗಿಸಿದ್ದರು. ‘ಬಾಧಿತ ಪ್ರದೇಶಗಳಲ್ಲಿ ಐದು ದಿನ ಕಷ್ಟದ ವಿಸ್ತೃತ ಸ್ವರೂಪವನ್ನು ಪ್ರತ್ಯಕ್ಷವಾಗಿ ನೋಡಿದ ನಂತರ, ತನ್ನ ವೈಯಕ್ತಿಕ ಬದುಕಿನಲ್ಲಿನ ನೋವು ಸುಲಭವಾಗಿ ಶಮನ ಆಗಬಹುದು ಎನಿಸುತ್ತಿದೆ’ ಎನ್ನುತ್ತಾರೆ. ‘ನಮ್ಮವರು ಸತ್ತಿದ್ದಾರೆ ಎಂದು ನಂಬಲು ಸಿದ್ಧರಿಲ್ಲದವರೂ, ಕೆಲ ದಿನದ ಬಳಿಕ ನಾಪತ್ತೆಯಾಗಿರುವ ಶವ ನಮ್ಮವರದೇ ಆಗಿರಲಿ ಎಂದು ಪ್ರಾರ್ಥಿಸುವ ಹಂತವನ್ನು ಕೂಡ ತಲುಪಿದ್ದರು’ ಎಂದು ಅವರು ಸ್ಮರಿಸಿದರು. ಇವರಿಗೆ ಒಬ್ಬ ಮಗನಿದ್ದಾನೆ. ಇನ್ನೂ ಓದುತ್ತಿದ್ದಾನೆ. ‘ಅವನಿಗಾಗಿ ಆಂಬುಲೆನ್ಸ್‌ ಚಾಲಕಿ ಕೆಲಸ ಮುಂದುವರಿಸುತ್ತೇನೆ’ ಎನ್ನುತ್ತಾರೆ ದೀಪಾ.
ಬಾಧಿತರಿಗೆ ಆರ್ಥಿಕ ನೆರವು –ಸರ್ಕಾರ 
ತಿರುವನಂತಪುರ (ಪಿಟಿಐ): ಭೂಕುಸಿತದಿಂದಾಗಿ ವಸತಿ ಕಳೆದುಕೊಂಡಿರುವ ಚೂರಲ್‌ಮಲ ಮುಂಡಕ್ಕೈ ನಿವಾಸಿಗಳಿಗೆ ಸ್ಥಳಾಂತರಕ್ಕೆ ಆರ್ಥಿಕ ನೆರವು ನೀಡಲು ಕೇರಳ ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿಗಳ ಕಚೇರಿಯು ಈ ಕುರಿತು ಹೇಳೀಕೆ ನೀಡಿದೆ. ದುರಂತದ ಬಳಿಕ ಆದಾಯದ ಮೂಲ ಕಳೆದುಕೊಂಡಿರುವ ವಯಸ್ಕರಿಗೆ ನಿತ್ಯ ₹300 ಭತ್ಯೆ ನೀಡಲಾಗುವುದು ಎಂದು ತಿಳಿಸಿದೆ. ಕುಟುಂಬ ಸದಸ್ಯರು ಗಂಭೀರ ಸ್ಥಿತಿಯಲ್ಲಿರುವುದು ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣ ಹೊರತುಪಡಿಸಿ ಈ ಸೌಲಭ್ಯ ಕುಟುಂಬದಲ್ಲಿ ಇಬ್ಬರು ವಯಸ್ಕರಿಗೆ ಸಿಗಲಿದೆ ಎಂದು ಸ್ಪಷ್ಟಪಡಿಸಿದೆ. ಗರಿಷ್ಠ 30 ದಿನ ಈ ಸೌಲಭ್ಯ ಸಿಗಲಿದೆ. ಶಿಬಿರಗಳಲ್ಲಿ ಇರುವವರಿಗೆ ತುರ್ತು ಆರ್ಥಿಕ ನೆರವಾಗಿ ₹ 10 ಸಾವಿರ ನೀಡಲಾಗುತ್ತದೆ. ಮನೆ ಇಲ್ಲದವರಿಗೆ ವಸತಿ ಸೌಲಭ್ಯ ಕಲ್ಪಿಸುವ ಚಿಂತನೆ ಇದೆ. ಈ ಸಂಬಂಧ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದೂ ಸರ್ಕಾರ ತಿಳಿಸಿದೆ.
ಕೃಷಿಕರ ಸಂಘಗಳಿಂದ ₹1 ಕೋಟಿ ನೆರವು
ಥಾಣೆ (ಪಿಟಿಐ): ಪರಿಹಾರ ಕಾರ್ಯಗಳಿಗಾಗಿ ಅಖಿಲ ಭಾರತ ಕಿಸಾನ್‌ ಸಭಾ (ಎಐಕೆಎಸ್‌) ಮತ್ತು ಕೇರಳ ಕರ್ಶಕ ಸಂಘಂ (ಕೆಕೆೆಎಸ್‌) ಒಟ್ಟು ₹ 1 ಕೋಟಿ ದೇಣಿಗೆಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿವೆ. ಉಭಯ ಸಂಘಟನೆಗಳ ಮುಖಂಡರು ಗುರುವಾರ ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೆರವಿನ ಚೆಕ್‌ ಹಸ್ತಾಂತರಿಸಿದರು. ಸಂಘಗಳಿಗೆ ಸೇರಿದ 27ಸಾವಿರಕ್ಕೂ ಅಧಿಕ ಘಟಕಗಳಿಂದ ಈ ನೆರವು ಸಂಗ್ರಹಿಸಲಾಗಿತ್ತು ಎಂದು ಎಐಕೆಎಸ್‌ ಮುಖ್ಯಸ್ಥ ಅಶೋಕ್‌ ಧಾವಲೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT