ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Wayanad landslide | ಅರಣ್ಯ ನಾಶ, ಹವಾಮಾನ ಬದಲಾವಣೆಯೇ ಕಾರಣ: ಅಧ್ಯಯನ

ವಯನಾಡ್‌ ಜಿಲ್ಲೆಯಲ್ಲಿ ಭೂಕುಸಿತ * ಹಲವು ಅಧ್ಯಯನಗಳು ಪ್ರತಿಪಾದನೆ
Published : 1 ಆಗಸ್ಟ್ 2024, 16:25 IST
Last Updated : 1 ಆಗಸ್ಟ್ 2024, 16:25 IST
ಫಾಲೋ ಮಾಡಿ
Comments

ನವದೆಹಲಿ: ಕೇರಳದ ವಯನಾಡ್‌ನಲ್ಲಿ ಉಂಟಾದ ವಿಧ್ವಂಸಕ ಭೂಕುಸಿತಕ್ಕೆ ಹವಾಮಾನ ಬದಲಾವಣೆ, ಅರಣ್ಯ ನಾಶ ಹಾಗೂ ಸೂಕ್ಷ್ಮವಾದ ಪ್ರದೇಶಗಳೇ ಕಾರಣ ಎಂಬುದು ಈ ಹಿಂದಿನ ವರ್ಷಗಳಲ್ಲಿ ನಡೆಸಿದ ಅಧ್ಯಯನಗಳು ಹೇಳುತ್ತವೆ.

ಇಸ್ರೊ ಸೇರಿದಂತೆ ವಿವಿಧ ಸಂಸ್ಥೆಗಳ ಅಧ್ಯಯನವು ಪಶ್ಷಿಮ ಘಟ್ಟ ಹಾಗೂ ಕೊಂಕಣ ಪ್ರದೇಶಗಳಲ್ಲಿ ಆಗಾಗ ಸಂಭವಿಸುವ ವಿಕೋಪಗಳ ಕುರಿತು ಬೆಳಕು ಚೆಲ್ಲಿವೆ.

ವಯನಾಡ್‌ ಜಿಲ್ಲೆಯಲ್ಲಿ ಅರಣ್ಯ ನಾಶವಾಗುತ್ತಿರುವ ಕುರಿತು 2022ರಲ್ಲಿ ನಡೆಸಿದ್ದ ಅಧ್ಯಯನ, 1950ರಿಂದ 2018ರ ಅವಧಿಯಲ್ಲಿ ಶೇ 62ರಷ್ಟು ಅರಣ್ಯ ನಾಶವಾಗಿದೆ ಎಂದು ಹೇಳುತ್ತದೆ. ಇದೇ ಅವಧಿಯಲ್ಲಿ ತೋಟಗಳಿರುವ ಪ್ರದೇಶದಲ್ಲಿ ಶೇ 1,800ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಇದೇ ಅಧ್ಯಯನ ಹೇಳುತ್ತದೆ.

‘1950ರ ವರೆಗೆ ವಯನಾಡ್‌ ಜಿಲ್ಲೆಯಲ್ಲಿ ಒಟ್ಟು ಪ್ರದೇಶದ ಪೈಕಿ ಶೇ 85ರಷ್ಟು ಭಾಗವು ಅರಣ್ಯದಿಂದ ಕೂಡಿತ್ತು’ ಎಂದು ಇಂಟರ್‌ನ್ಯಾಷನಲ್ ಜರ್ನಲ್‌ ಆಫ್‌ ಎನ್ವಿರಾನ್‌ಮೆಂಟಲ್ ರಿಸರ್ಚ್‌ ಅಂಡ್ ಪಬ್ಲಿಕ್ ಹೆಲ್ತ್‌ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನ ವರದಿ ಹೇಳುತ್ತದೆ.

ಇಸ್ರೊ ವರದಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೊ) ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಕಳೆದ ವರ್ಷ ಬಿಡುಗಡೆ ಮಾಡಿರುವ ವರದಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಯ ಪ್ರದೇಶಗಳ ಕುರಿತು ವಿವರಿಸಲಾಗಿದೆ.

‘ಭೂಕುಸಿತ ಉಂಟಾಗುವ ಸಾಧ್ಯತೆ ಹೆಚ್ಚಿರುವ ದೇಶದ 30 ಜಿಲ್ಲೆಗಳ ಪೈಕಿ 10 ಜಿಲ್ಲೆಗಳು ಕೇರಳದಲ್ಲಿವೆ. ಈಗ ಭೂಕುಸಿತಕ್ಕೆ ತತ್ತರಿಸಿರುವ ವಯನಾಡ್‌ ಜಿಲ್ಲೆ 13ನೇ ಸ್ಥಾನದಲ್ಲಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಪಶ್ಚಿಮ ಘಟ್ಟಗಳು ಹಾಗೂ ಕೊಂಕಣ ಪ್ರದೇಶಗಳ (ತಮಿಳುನಾಡು, ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ) ಪೈಕಿ 0.09 ದಶಲಕ್ಷ ಚದರ ಕಿ.ಮೀ.ನಷ್ಟು ಪ್ರದೇಶವು ಭೂಕುಸಿತ ಸಂಭವಿಸುವ ಅಪಾಯ ಎದುರಿಸುತ್ತಿದೆ ಎಂದು ವರದಿಯು ಹೇಳುತ್ತದೆ.

‘ಪಶ್ಚಿಮ ಘಟ್ಟಗಳಲ್ಲಿ ಜನವಸತಿ ಹಾಗೂ ಕುಟುಂಬ ಸಾಂದ್ರತೆ ಹೆಚ್ಚು. ಅದರಲ್ಲೂ, ಕೇರಳದಲ್ಲಿ ಇದರ ಪ್ರಮಾಣ ಅಧಿಕ. ಈ ಕಾರಣಕ್ಕಾಗಿಯೇ, ಇಲ್ಲಿ ವಾಸಿಸುವ ಜನರು ಭೂಕುಸಿತಕ್ಕೆ ಸಂಬಂಧಿಸಿ ಹೆಚ್ಚು ಅಪಾಯ ಎದುರಿಸುತ್ತಿದ್ದಾರೆ’ ಎಂದೂ ವರದಿಯಲ್ಲಿ ವಿವರಿಸಲಾಗಿದೆ.

‘ಸ್ಪ್ರಿಂಗರ್’ ವರದಿ: ಜರ್ಮನಿ ಮೂಲದ ‘ಸ್ಪ್ರಿಂಗರ್’ ನಿಯತಕಾಲಿಕದಲ್ಲಿ 2021ರಲ್ಲಿ ಪ್ರಕಟವಾದ ವರದಿ ಸಹ ಈ ವಿಷಯ ಕುರಿತು ಮಹತ್ವದ ಅಂಶಗಳನ್ನು ಒಳಗೊಂಡಿದೆ.

ಕೇರಳದಲ್ಲಿ ಭೂಕುಸಿತದ ಅಪಾಯ ಎದುರಿಸುತ್ತಿರುವ ಎಲ್ಲ ಪ್ರದೇಶಗಳು ಪಶ್ಚಿಮ ಘಟ್ಟಗಳಲ್ಲಿವೆ. ಅವು ಹೆಚ್ಚಾಗಿ ಇಡುಕ್ಕಿ, ಎರ್ನಾಕುಲಂ, ಕೋಟ್ಟಯಂ, ವಯನಾಡ್‌, ಕೋಯಿಕ್ಕೋಡ್‌ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿಯೇ ಇವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕೇರಳದಲ್ಲಿ ಕಂಡುಬಂದ ಭೂಕುಸಿತಗಳ ಪೈಕಿ ಶೇ 59ರಷ್ಟು ವಿಕೋಪಗಳು ತೋಟಗಳಿಂದ ಕೂಡಿದ ಪ್ರದೇಶಗಳಲ್ಲಿ ಸಂಭವಿಸಿವೆ ಎಂದೂ ವಿವರಿಸಲಾಗಿದೆ.

ಕೊಚ್ಚಿ ವಿ.ವಿ ಅಧ್ಯಯನ: ಕೊಚ್ಚಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (ಸಿಯುಎಸ್ಎಟಿ) ಅಡ್ವಾನ್ಸ್‌ಡ್ ಸೆಂಟರ್‌ ಫಾರ್ ಅಟ್ಮಾಸ್ಪಿಯರಿಕ್ ರೇಡಾರ್‌ ರಿಸರ್ಚ್‌ ಸಹ ಈ ಕುರಿತು ಸಂಶೋಧನೆ ನಡೆಸಿದೆ.

‘ಹವಾಮಾನದಲ್ಲಿನ ಅಸ್ಥಿರತೆಯಿಂದಾಗಿ ದಟ್ಟವಾದ ಮೋಡಗಳು ಉಂಟಾಗುತ್ತಿವೆ. ಇದಕ್ಕೆ ಹವಾಮಾನ ಬದಲಾವಣೆಯೇ ಕಾರಣ. ಇಂತಹ ವಿದ್ಯಮಾನದಿಂದಾಗಿ ದೇಶದ ‍ಪಶ್ಚಿಮ ಕರಾವಳಿಯಲ್ಲಿ ಅಲ್ಪ ಅವಧಿಯಲ್ಲಿ ಭಾರಿ ಮಳೆ ಬೀಳುತ್ತದೆ ಎಂಬುದು ನಮ್ಮ ಅಧ್ಯಯನದಿಂದ ಕಂಡುಬಂದಿದೆ’ ಎಂದು ಅಡ್ವಾನ್ಸ್‌ಡ್ ಸೆಂಟರ್‌ ಫಾರ್ ಅಟ್ಮಾಸ್ಪಿಯರಿಕ್ ರೇಡಾರ್‌ ರಿಸರ್ಚ್‌ನ ನಿರ್ದೇಶಕ ಎಸ್‌.ಅಭಿಲಾಷ್‌ ಹೇಳುತ್ತಾರೆ.

‘ಇಂತಹ ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟುವುದಕ್ಕಾಗಿ ನಮ್ಮ ಅಧ್ಯಯನ ತಂಡವು ಹಲವು ಶಿಫಾರಸುಗಳನ್ನು ಮಾಡಿದೆ. ಭೂಕುಸಿತದ ಅಪಾಯ ಎದುರಿಸುತ್ತಿರುವ ಪ್ರದೇಶಗಳಲ್ಲಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬಾರದು. ಹೊಸದಾಗಿ ಉಷ್ಣವಿದ್ಯುತ್‌ ಸ್ಥಾವರ, ಜಲವಿದ್ಯುತ್ ಯೋಜನೆಗಳನ್ನು ನಿಷೇಧಿಸಬೇಕು ಸೂಕ್ಷ್ಮಪರಿಸರ ಪ್ರದೇಶಗಳಲ್ಲಿ ಬೃಹತ್‌ ಪ್ರಮಾಣದ ಪವನ ವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡಬಾರದು ಎಂಬ ಶಿಫಾರಸುಗಳನ್ನು ಮಾಡಲಾಗಿದೆ’ ಎಂದು ಅಭಿಲಾಷ್‌ ಹೇಳುತ್ತಾರೆ.

ರಾಜ್ಯ ಸರ್ಕಾರಗಳು, ಉದ್ದಿಮೆಗಳು ಹಾಗೂ ಸ್ಥಳೀಯರ ಪ್ರತಿರೋಧದ ಕಾರಣದಿಂದ ಈ ಶಿಫಾರಸುಗಳನ್ನು 14 ವರ್ಷಗಳ ನಂತರವೂ ಅನುಷ್ಠಾನಗೊಳಿಸಿಲ್ಲ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT