ಜಮ್ಮು: 'ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲು ನಮ್ಮ ಹೋರಾಟ ಮುಂದುವರಿಯಲಿದೆ. ಆ ಹೋರಾಟವನ್ನು ನಾವು ಕೈಬಿಡುವುದಿಲ್ಲ. ನನಗೀಗ 83 ವರ್ಷ. ನಾನು ಅಷ್ಟು ಬೇಗ ಸಾಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಬದುಕಿರುತ್ತೇನೆ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಥುವಾ ಜಿಲ್ಲೆಯಲ್ಲಿ ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಖರ್ಗೆ ಇಂದು (ಭಾನುವಾರ) ಮಾತನಾಡಿದರು.
ಭಾಷಣದ ವೇಳೆ ಅಸ್ವಸ್ಥರಾದ ಖರ್ಗೆ ಅವರಿಗೆ ವೈದ್ಯಕೀಯ ನೆರವನ್ನು ಒದಗಿಸಲಾಯಿತು.
'ಬಿಜೆಪಿ ಸರ್ಕಾರವು ಜಮ್ಮು-ಕಾಶ್ಮೀರವನ್ನು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸುತ್ತಿದೆ' ಎಂದು ಅವರು ಆರೋಪಿಸಿದರು.
'ಕಣಿವೆ ರಾಜ್ಯದಲ್ಲಿ ಚುನಾವಣೆ ನಡೆಸಲು ಬಿಜೆಪಿ ಎಂದಿಗೂ ಬಯಸಿಲ್ಲ. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶದ ಬಳಿಕವಷ್ಟೇ ಚುನಾವಣೆ ನಡೆಸಲು ಮುಂದಾಗಿತ್ತು' ಎಂದು ಹೇಳಿದರು.
'ಅಧಿಕಾರ ಇದ್ದರೂ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲು ಬಿಜೆಪಿ ಏಕೆ ವಿಳಂಬ ಮಾಡುತ್ತಿದೆ? ಜಮ್ಮು ಕಾಶ್ಮೀರದ ಜನರಿಗಾಗಿ ನಾವು ಹೋರಾಡಲಿದ್ದೇವೆ. ಬಿಜೆಪಿ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ' ಎಂದು ಅವರು ಹೇಳಿದ್ದಾರೆ.
'ಜಮ್ಮು-ಕಾಶ್ಮೀರದ ಯುವ ಜನತೆಯ ಭವಿಷ್ಯಕ್ಕಾಗಿ ಮೋದಿ, ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ನಿಜ ಸಂಗತಿಯೆಂದರೆ ಕಳೆದ 10 ವರ್ಷಗಳಲ್ಲಿ ಯುವಜನತೆಯನ್ನು ಕತ್ತಲೆಯತ್ತ ತಳ್ಳಿ ಹಾಕಿದ್ದಾರೆ. ಇದಕ್ಕೆ ಮೋದಿ ಕೂಡ ಹೊಣೆಗಾರರು. ಪ್ರಧಾನಿ ಅವರು ಕಳೆದ 10 ವರ್ಷಗಳಲ್ಲಿ ಯುವಜನತೆಗಾಗಿ ಏನನ್ನೂ ಮಾಡಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.