ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಮಿನಲ್ ಅ‍ಪರಾಧಗಳಿಗೆ ಹೊಸ ಕಾನೂನು: ಇಂದಿನಿಂದ ಜಾರಿ

Published 26 ಜೂನ್ 2024, 15:21 IST
Last Updated 26 ಜೂನ್ 2024, 15:21 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ತರುವ ಹೊಸ ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳು ಸೋಮವಾರದಿಂದ (ಜುಲೈ 1) ಜಾರಿಗೆ ಬರಲಿವೆ.

ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಹೊಸದಾಗಿ ಅನುಷ್ಠಾನಗೊಳ್ಳಲಿರುವ ಕಾಯ್ದೆಗಳು.

163 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ದಂಡ ಸಂಹಿತೆ, 126 ವರ್ಷಗಳ ಹಿಂದಿನ ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು 151 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಈ ಮೂರು ಕಾನೂನುಗಳು ಜಾರಿಗೆ ಬರಲಿವೆ.

ಸಮಾಜದ ವಾಸ್ತವಾಂಶ ಮತ್ತು ಅಪರಾಧಗಳನ್ನು ಪರಿಣಾಮಕಾರಿ ಯಾಗಿ ಎದುರಿಸುವ ಕಾರ್ಯವಿಧಾನವನ್ನು ಹೊಸ ಕಾನೂನುಗಳ ಮೂಲಕ ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಸಂವಿಧಾನದಲ್ಲಿ ಪ್ರತಿಪಾದಿಸಿರುವ ಆದರ್ಶಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜೀರೋ ಎಫ್‌ಐಆರ್, ಆನ್‌ಲೈನ್‌ ಮೂಲಕ ದೂರು ಸಲ್ಲಿಕೆಗೆ ಅವಕಾಶ, ಎಸ್‌ಎಂಎಸ್‌ ಮೂಲಕ ಸಮನ್ಸ್ ಕಳುಹಿಸುವುದು ಮತ್ತು ಹೇಯ ಅಪರಾಧ ನಡೆದಾಗ ಆ ಸ್ಥಳದ ವಿಡಿಯೊ ಚಿತ್ರೀಕರಣವನ್ನು ಕಡ್ಡಾಯಗೊಳಿಸಿರುವಂತಹ ನಿಬಂಧನೆಗಳನ್ನು ಒಳಗೊಂಡಿರುವ ಹೊಸ ಕಾನೂನುಗಳು ಆಧುನಿಕ ನ್ಯಾಯ ವ್ಯವಸ್ಥೆಯನ್ನು ಜಾರಿಗೆ ತರಲಿದೆ ಎಂದು ವಿಶ್ಲೇಷಿಸಲಾಗಿದೆ.

ಜುಲೈ 1ರ ಹಾಗೂ ಆ ಬಳಿಕದ ಎಲ್ಲ ಎಫ್‌ಐಆರ್‌ಗಳನ್ನು ಸಿಆರ್‌ಪಿಸಿಯ 154ನೇ ಸೆಕ್ಷನ್‌ ಬದಲು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ 173ನೇ ಸೆಕ್ಷನ್‌ ಅಡಿಯಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. 

ಹೊಸ ಕಾನೂನು ಮಿಶ್ರ ಪ್ರತಿಕ್ರಿಯೆ

ಬೆಂಗಳೂರು: ಕ್ರಿಮಿನಲ್‌ ಅಪರಾಧಕ್ಕೆ ಸಂಬಂಧಿಸಿದ ಮೂರು ಹೊಸ ಕಾನೂನುಗಳ ಜಾರಿ ಕುರಿತು ವಕೀಲರ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಳೆಯ ಮತ್ತು ಹೊಸ ಎರಡೂ ಕಾನೂನುಗಳನ್ನು 20 ವರ್ಷಗಳವರೆಗೆ ಬಳಸಬೇಕಾಗುತ್ತದೆ ಎಂದು ಕೆಲವರು ಹೇಳಿದರೆ, ಹೊಸ ಕಾನೂನುಗಳ ಆಧಾರದಲ್ಲೇ ಎಲ್ಲವೂ ನಡೆಯುತ್ತದೆ ಎಂಬುದು ಇನ್ನೂ ಕೆಲವರ ಅಭಿಪ್ರಾಯ.

ಹೊಸ ಕಾನೂನುಗಳ ಜಾರಿಯ ಕುರಿತು ವಕೀಲರ ವಲಯದಲ್ಲಿ ಚರ್ಚೆ ಜೋರಾಗಿದೆ. ಕಾನೂನು ತಜ್ಞರ ಪ್ರಕಾರ, ಕ್ರಿಮಿನಲ್‌ ಅಪರಾಧ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅನುಷ್ಠಾನಕ್ಕೆ ತಂದಿರುವ ಹೊಸ ಕಾನೂನುಗಳ ತಕ್ಷಣಕ್ಕೆ ಜನಸಾಮಾನ್ಯರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

‘ನನ್ನ ಪ್ರಕಾರ, ಸಾಮಾನ್ಯ ಜನರ ಮೇಲೆ ಹೊಸ ಕಾನೂನುಗಳಿಂದ ಯಾವ ಪರಿಣಾಮವೂ ಆಗದು. ಅಪರಾಧ ಕೃತ್ಯದಲ್ಲಿ ಭಾಗಿಯಾದ ಆರೋಪದ ಮೇಲೆ ತನಿಖೆ ಅಥವಾ ವಿಚಾರಣೆ ಎದುರಿಸುವ ವ್ಯಕ್ತಿ ಮಾತ್ರ ವಿಚಾರಣೆ ಹಾಗೂ ಶಿಕ್ಷೆಯ ಕುರಿತು ಚಿಂತಿಸಬೇಕಾಗುತ್ತದೆ. ವಿಚಾರಣಾ ಪ್ರಕ್ರಿಯೆಯಲ್ಲಿನ ಬದಲಾವಣೆಗಳ ಕುರಿತು ಸಂತ್ರಸ್ತ ಅಥವಾ ಆರೋಪಿ ಚಿಂತಿಸಬೇಕಾಗಿಲ್ಲ. ತನಿಖಾ ಸಂಸ್ಥೆಯ ಪರವಾಗಿ ವಾದಿಸುವ ಪ್ರಾಸಿಕ್ಯೂಟರ್‌ ಹಾಗೂ ಆರೋಪಿಯ ಪರ ವಕೀಲರಿಗೆ ಮಾತ್ರ ಇಂತಹ ಸಂಕೀರ್ಣ ಸಂದರ್ಭವು ಸವಾಲಿನ ಸಮಯವಾಗಲಿದೆ’ ಎನ್ನುತ್ತಾರೆ ಹೈಕೋರ್ಟ್‌ ವಕೀಲ ಎಸ್.ಎಸ್. ಶ್ರೀನಿವಾಸ ರಾವ್‌.

ಹೊಸ ಕಾನೂನುಗಳ ಕುರಿತು ಬೆಂಗಳೂರು ವಕೀಲರ ಸಂಘವು ತನ್ನ ಸದಸ್ಯರಿಗಾಗಿ ಒಂದು ತಿಂಗಳ ಕಾರ್ಯಾಗಾರಗಳನ್ನು ನಡೆಸಿದೆ. ಮ್ಯಾಜಿಸ್ಟ್ರೇಟ್‌ ಮತ್ತು ಸೆಷನ್ಸ್‌ ನ್ಯಾಯಾಲಯಗಳ ನ್ಯಾಯಾಧೀಶರಿಗಾಗಿಯೂ ತರಬೇತಿ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಈ ಕಾನೂನುಗಳನ್ನು ಅರಿತುಕೊಳ್ಳಲು ಇಂತಹ ತರಬೇತಿ, ಕಾರ್ಯಾಗಾರಗಳಿಂದಷ್ಟೇ ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.

ಶ್ರೀನಿವಾಸ ರಾವ್‌, ಛತ್ತೀಸಗಢ ಮತ್ತು ಮಹಾರಾಷ್ಟ್ರದ ಐಪಿಎಸ್‌ ಅಧಿಕಾರಿಗಳು ಹಾಗೂ ನ್ಯಾಯಾಂಗದ ಅಧಿಕಾರಿಗಳಿಗೆ ಹೊಸ ಕಾನೂನುಗಳ ಕುರಿತು ಕಾರ್ಯಾಗಾರ ನಡೆಸಿದ್ದರು. ಅವರ ಪ್ರಕಾರ, ಕ್ರಿಮಿನಲ್‌ ಪ್ರಕರಣಗಳ ವಿಚಾರಣಾ ವ್ಯವಸ್ಥೆಯಲ್ಲಿ ವಿಡಿಯೊ ಕಾನ್ಫರೆನ್ಸಿಂಗ್‌ ಮೂಲಕ ವಿಚಾರಣೆ ನಡೆಸುವುದು ಈವರೆಗೂ ಅಸ್ತಿತ್ವದಲ್ಲೇ ಇಲ್ಲದಂತಹ ಪದ್ಧತಿ.

‘ಕೋವಿಡ್‌–19 ಅವಧಿಯಲ್ಲಿ ತರಗತಿಗಳನ್ನು ಹೇಗೆ ನಡೆಸಲಾಯಿತು? ವಿದ್ಯಾರ್ಥಿಗಳ ಮೇಲೆ ಅದರ ಪರಿಣಾಮ ಏನಾಯಿತು? ಎಂಬುದನ್ನು ನಾವು ನೋಡಿದ್ದೇವೆ. ವಿಡಿಯೊ ಕಾನ್ಫರೆನ್ಸಿಂಗ್‌ ಮೂಲಕ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಕಲಿಯಲು ಅಸಾಧ್ಯ ಎನ್ನುವುದಾದರೆ, ನ್ಯಾಯಾಲಯಗಳು ವಿಡಿಯೊ ಕಾನ್ಫರೆನ್ಸಿಂಗ್‌ ಮೂಲಕ ವಿಚಾರಣೆ ನಡೆಸಿ ಆರೋಪಿಯ ಭವಿಷ್ಯ ನಿರ್ಧರಿಸುವುದನ್ನು ನಿರೀಕ್ಷಿಸುತ್ತೀರಾ? ಜಾಮೀನು, ಕಸ್ಟಡಿ, ಮಹಜರು ಪ್ರಕ್ರಿಯೆಗೆ ಸಂಬಂಧಿಸಿದಂತೆಯೂ ಅಂತಹ ವಿಷಯಗಳು ಹೊಸ ಕಾನೂನುಗಳಲ್ಲಿವೆ’ ಎಂದು ಶ್ರೀನಿವಾಸ ರಾವ್‌ ಹೇಳುತ್ತಾರೆ.

‘ಹೊಸ ಕಾನೂನುಗಳ ಜಾರಿಯಿಂದ ವಕೀಲರಿಗಿಂತಲೂ ಹೆಚ್ಚು ಸವಾಲು ಎದುರಾಗುವುದು ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗೆ. ನನ್ನ ಪ್ರಕಾರ, ಪೊಲೀಸರಿಗೆ ಹೆಚ್ಚು ಸಮಯ ಮತ್ತು ಹೆಚ್ಚಿನ ತರಬೇತಿ ಬೇಕಾಗುತ್ತದೆ’ ಎಂಬುದು ಹಿರಿಯ ವಕೀಲ ಉದಯ್‌ ಹೊಳ್ಳ ಅವರ ಅಭಿಪ್ರಾಯ.

‘ಸಂಪೂರ್ಣವಾಗಿ ಹೊಸ ಕಾನೂನುಗಳನ್ನು ಬಳಸಿ ನ್ಯಾಯದಾನ ಪ್ರಕ್ರಿಯೆ ನಡೆಸುವ ಅನುಭವ ವಕೀಲರು ಮತ್ತು ನ್ಯಾಯಾಧೀಶರಿಗೆ ಇದೆ. ಉದಾಹರಣೆಗೆ ಕಂಪನಿ ಕಾಯ್ದೆ 1953 ಅನ್ನು ಬದಲಿಸಿ 2013ರಲ್ಲಿ ಹೊಸ ಕಾನೂನು ಜಾರಿಗೊಳಿಸಲಾಯಿತು. ದಿನಗಳು ಕಳೆದಂತೆ ಹೊಸ ಕಾನೂನಿನಲ್ಲಿರುವ ಅಂಶಗಳ ಕುರಿತು ಮೇಲಿನ ನ್ಯಾಯಾಲಯಗಳು ವ್ಯಾಖ್ಯಾನ ನೀಡಿದವು. ವಕೀಲರೂ ಹೊಸ ಕಾಯ್ದೆಯನ್ನು ಬಳಸಲಾರಂಭಿಸಿದರು. ಎಲ್ಲಕ್ಕಿಂತಲೂ ಹೆಚ್ಚಾಗಿ ಅಪರಾಧಕ್ಕೆ ಸಂಬಂಧಿಸಿದ ಹೊಸ ಕಾನೂನುಗಳಲ್ಲಿ ನ್ಯಾಯಾಧೀಶರು ಪ್ರಕರಣವನ್ನು ಸರಿಯಾಗಿ ಅರಿಯಲು ಪ್ರಾಸಿಕ್ಯೂಷನ್‌ ಮತ್ತು ಆರೋಪಿ ಪರ ವಕೀಲರು ಇಬ್ಬರಿಂದಲೂ ಮಾಹಿತಿ ಪಡೆಯುವ ಅವಕಾಶವಿದೆ’ ಎಂದು ಅವರು ಹೇಳುತ್ತಾರೆ.

ಮೂರು ಕಾನೂನುಗಳ ಕೆಲವು ಅಂಶಗಳು

* ಅಪರಾಧ ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡ 45 ದಿನಗಳ ಒಳಗಾಗಿ ತೀರ್ಪು ಪ್ರಕಟಿಸಬೇಕು. ಮೊದಲ ವಿಚಾರಣೆ ನಡೆದ 60 ದಿನಗಳ ಒಳಗಾಗಿ ಆರೋಪಪಟ್ಟಿ ಸಲ್ಲಿಸಬೇಕು

* ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ಆಕೆಯ ಪೋಷಕರು ಅಥವಾ ಸಂಬಂಧಿಕರ ಸಮ್ಮುಖದಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯೇ ದಾಖಲಿಸಿಕೊಳ್ಳಬೇಕು. ವೈದ್ಯಕೀಯ ವರದಿ ಏಳು ದಿನಗಳ ಒಳಗೆ ಸಲ್ಲಿಕೆಯಾಗಬೇಕು

* 12 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಕನಿಷ್ಠ 20 ವರ್ಷ ಜೈಲು

* ಅಪರಾಧಗಳ ಬಗ್ಗೆ ಎಲೆಕ್ಟ್ರಾನಿಕ್ ಸಂವಹನ ಮಾಧ್ಯಮ ಬಳಸಿ ದೂರು ನೀಡಬಹುದು. ವ್ಯಕ್ತಿಯು ಪೊಲೀಸ್‌ ಠಾಣೆಗೆ ಖುದ್ದಾಗಿ ಹೋಗುವ ಅಗತ್ಯವಿಲ್ಲ

* ‘ಜೀರೊ ಎಫ್‌ಐಆರ್‌’ ಪರಿಕಲ್ಪನೆಯಡಿ, ವ್ಯಕ್ತಿಯು ಅಪರಾಧ ಕೃತ್ಯದ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಬಹುದು. ಠಾಣಾ ವ್ಯಾಪ್ತಿಯ ಪ್ರಶ್ನೆ ಉದ್ಭವಿಸದು

* ಬಂಧಿತ ವ್ಯಕ್ತಿಯು ತನ್ನ ಸ್ಥಿತಿಯ ಬಗ್ಗೆ ತಾನು ಇಚ್ಛಿಸಿದ ಇನ್ನೊಬ್ಬ ವ್ಯಕ್ತಿಗೆ ಮಾಹಿತಿ ನೀಡಬಹುದು. ಬಂಧಿತ ವ್ಯಕ್ತಿಗೆ ತಕ್ಷಣಕ್ಕೆ ನೆರವು ಪಡೆಯಲು ಇದರಿಂದ ಸಾಧ್ಯವಾಗಲಿದೆ

* ಬಂಧನದ ವಿವರಗಳನ್ನು ಪೊಲೀಸ್ ಠಾಣೆಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರಕಟಿಸಬೇಕು.

* ಮಹಿಳೆಯರನ್ನು ಗುರಿಯಾಗಿಸಿಕೊಂಡ ಕೆಲವು ಅಪರಾಧಗಳಲ್ಲಿ, ಸಂತ್ರಸ್ತೆಯ ಹೇಳಿಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಮಹಿಳಾ ಮ್ಯಾಜಿಸ್ಟ್ರೇಟ್ ಸಮಕ್ಷಮದಲ್ಲಿ ದಾಖಲು ಮಾಡಿಕೊಳ್ಳಬೇಕು

*  ಆರೋಪಿ ಹಾಗೂ ಸಂತ್ರಸ್ತರಿಗೆ ಎಫ್‌ಐಆರ್, ಪೊಲೀಸ್ ವರದಿ, ದೋಷಾರೋಪ ಪಟ್ಟಿ, ಹೇಳಿಕೆಗಳು, ತಪ್ಪೊಪ್ಪಿಗೆಗಳು ಮತ್ತು ಇತರ ದಾಖಲೆಗಳನ್ನು 14 ದಿನಗಳೊಳಗೆ ನೀಡಬೇಕು

* ಸಮನ್ಸ್‌ಗಳನ್ನು ಎಲೆಕ್ಟ್ರಾನಿಕ್ ಸಂವಹನ ಮಾಧ್ಯಮದ ಮೂಲಕ ರವಾನಿಸಬಹುದು

* ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಲಯಗಳು ಗರಿಷ್ಠ ಎರಡು ಸಲ ಮಾತ್ರ ಮುಂದೂಡಬಹುದು

* ಸಾಕ್ಷಿಗಳ ಸುರಕ್ಷತೆ ಮತ್ತು ಸಹಕಾರವನ್ನು ಖಚಿತಪಡಿಸಿಕೊಳ್ಳಲು ಎಲ್ಲ ರಾಜ್ಯಗಳು ಸಾಕ್ಷಿಗಳ ರಕ್ಷಣೆಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಬೇಕು

* ಗಂಭೀರ ಸ್ವರೂಪದ ಅಪರಾಧ ನಡೆದ ಸಂದರ್ಭ ಗಳಲ್ಲಿ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ತೆರಳಿ ಸಾಕ್ಷ್ಯ ಸಂಗ್ರಹಿಸುವುದು ಕಡ್ಡಾಯ. ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸುವ ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಬೇಕು

* ತಲೆಮರೆಸಿಕೊಂಡ ಆರೋಪಿಗಳ ವಿಚಾರಣೆ ಮತ್ತು ಅವರ ವಿರುದ್ಧ ತೀರ್ಪು ನೀಡಲು ಅವಕಾಶ

* ಮಹಿಳೆಯರು, 15 ವರ್ಷಕ್ಕಿಂತ ಕೆಳಗಿನ ಮತ್ತು 60 ವರ್ಷ ಮೇಲ್ಪಟ್ಟವರು, ಅಂಗವಿಕಲರು ಹಾಗೂ ತೀವ್ರ ಅನಾರೋಗ್ಯ ಸಮಸ್ಯೆ ಇರುವವರಿಗೆ ಪೊಲೀಸ್ ಠಾಣೆಗೆ ಹೋಗುವುದರಿಂದ ವಿನಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT