ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಾಜದಲ್ಲಿ ಆರ್ಥಿಕ ಶಕ್ತಿ ಬರಲೆಂದು ಪಂಚ ಗ್ಯಾರಂಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Published : 28 ಸೆಪ್ಟೆಂಬರ್ 2024, 13:50 IST
Last Updated : 28 ಸೆಪ್ಟೆಂಬರ್ 2024, 13:50 IST
ಫಾಲೋ ಮಾಡಿ
Comments

ಮೈಸೂರು: ‘ಅನ್ನಕ್ಕಾಗಿ ಯಾರೊಬ್ಬರೂ ಇನ್ನೊಬ್ಬರ ಮನೆಯ ಮುಂದೆ ನಿಂತು ಕೈಒಡ್ಡದಂತೆ ಮಾಡುವ ಉದ್ದೇಶದಿಂದ ನಾನು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದೆ. ಸಮಾಜದಲ್ಲಿ ಆರ್ಥಿಕ ಶಕ್ತಿ ಬರಲೆಂದು ಪಂಚ ಗ್ಯಾರಂಟಿಗಳನ್ನು ನೀಡಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮತ್ತು ಇನ್‌ಸ್ಟಿಟ್ಯೂಟ್‌ ಫಾರ್‌ ಸೋಷಿಯಲ್‌ ವರ್ಕರ್ಸ್‌ ಫಾರ್‌ ಆ್ಯಕ್ಷನ್‌ ರಿಸರ್ಚ್‌ ಸಹಯೋಗದಲ್ಲಿ ಇಲ್ಲಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ.ಶ್ರೀನಿವಾಸ ಮಣಗಳ್ಳಿ ಸಂಪಾದಿತ ‘ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಹೊಟ್ಟೆ ತುಂಬ ಹಿಟ್ಟು; ಬಾಯಿ ತುಂಬ ಅನ್ನ ಎಂದು ನನ್ನಮ್ಮ ಹೇಳುತ್ತಿದ್ದರು. ಬಡವರಿಗೆ ಅನ್ನ ಹಬ್ಬದ ಸಂದರ್ಭದಲ್ಲಷ್ಟೆ ಸಿಗುತ್ತಿತ್ತು. ಮಕ್ಕಳಿಗೆ ಹುಷಾರಿಲ್ಲದ ವೇಳೆ ಬಡವರು ಉಳ್ಳವರ ಮನೆಗಳಿಗೆ ತುತ್ತು ಅನ್ನಕ್ಕಾಗಿ ಬಂದು ನಿಲ್ಲುತ್ತಿದ್ದರು. ನಮ್ಮ ಮನೆಯ ಬಳಿಗೂ ಬರುತ್ತಿದ್ದರು. ಅನ್ನಕ್ಕಾಗಿ ಕಾದು ನಿಂತ ಪರಿಸ್ಥಿತಿಯೇ ನಾನು ಅನ್ನಭಾಗ್ಯ ಜಾರಿಗೊಳಿಸಲು ಕಾರಣ’ ಎಂದು ಬಾಲ್ಯದ ದಿನಗಳನ್ನು ನೆನೆದರು.

ಫಲಾನುಭವಿಗಳು ಮಾತನಾಡಬೇಕು:

‘ಗ್ಯಾರಂಟಿ‌ ಯೋಜನೆಗಳ ಬಗ್ಗೆ ಫಲಾನುಭವಿಗಳು ಮಾತನಾಡುವುದು ಬಹಳ ಮುಖ್ಯ. ಯಾವುದೇ ಧರ್ಮ, ಜಾತಿ ಹಾಗೂ ತಾರತಮ್ಯ ‌ಇಲ್ಲದೇ ಯೋಜನೆಗಳನ್ನು ನೀಡಿದ್ದೇವೆ. ಟೀಕೆ–ಅವಹೇಳನ ಸಹಜ. ಅದನ್ನೆಲ್ಲಾ ಸಹಿಸಿಕೊಳ್ಳಬೇಕಾಗುತ್ತದೆ’ ಎಂದು ನುಡಿದರು.

‘ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಪ್ರಭುತ್ವ ಬಾರದೇ ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗದು. ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿ ಮಾಡದಿದ್ದರೆ ಜಾತಿ ಹೋಗುತ್ತದೆಯೇ? ಸಾಮಾಜಿಕ ವ್ಯವಸ್ಥೆಗೆ ಚಲನೆ ಸಿಕ್ಕಾಗ ಮಾತ್ರ ಜಾತಿ ಹೋಗುತ್ತದೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಜಾತಿ ವ್ಯವಸ್ಥೆಯ ಕಾರಣದಿಂದಾಗಿಯೇ ಅಸಮಾನತೆ ‌ನಿರ್ಮಾಣವಾಗಿದೆ’ ಎಂದು ಪ್ರತಿಪಾದಿಸಿದರು.

ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹4ಸಾವಿರದಿಂದ ₹5ಸಾವಿರ ದೊರೆಯುವ ಯೋಜನೆ ಸುಲಭದ್ದೇನಲ್ಲ. ಅದಕ್ಕಾಗಿ ಈ ಬಜೆಟ್‌ನಲ್ಲಿ ₹ 50ಸಾವಿರ ಕೋಟಿ ಇಟ್ಟಿದ್ದೇವೆ’ ಎಂದು ತಿಳಿಸಿದರು.

ಧಾರವಾಡದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಪ್ರೊ.ಎಂ. ಚಂದ್ರ ಪೂಜಾರಿ ಮಾತನಾಡಿ, ‌‘ರಾಜ್ಯದಲ್ಲಿದ್ದ ರಾಜಕೀಯ ಸ್ಥಿತಿಯೂ ಇಂತಹ ಯೋಜನೆಗಳ ಅನಿವಾರ್ಯತೆ ಸೃಷ್ಟಿಸಿತ್ತು. ಇವು ಉಚಿತವಲ್ಲ. ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಕಟ್ಟುತ್ತಿರುವವರಿಗೆ ಶೇ 15ರಷ್ಟನ್ನಾದರೂ ವಾಪಸ್ ಕೊಡುವುದು ಉಚಿತ ಹೇಗಾಗುತ್ತದೆ? ಆದ್ದರಿಂದ, ಉಚಿತ ಎಂದು ಹೇಳಿ ಫಲಾನುಭವಿಗಳನ್ನು ಅವಮಾನಿಸಬಾರದು’ ಎಂದರು.

‘ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಕರ್ನಾಟಕದ ಜಿಡಿಪಿ ಶೇ 2ರಿಂದ ಶೇ 4ರಷ್ಟು ಏರಿಕೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಾಧ್ಯಾಪಕ, ನಾಟಕಕಾರ ಕೆ.ವೈ.ನಾರಾಯಣಸ್ವಾಮಿ ಮಾತನಾಡಿ, ‘ಪಂಚ ಗ್ಯಾರಂಟಿ ಯೋಜನೆಗಳು ಮನುಷ್ಯರಿಗೆ ಚಾಲಕ ಶಕ್ತಿಗಳಾಗಿವೆ. ಈ ನಿಟ್ಟಿನಲ್ಲಿ ಈ ಪುಸ್ತಕವನ್ನು ಗ್ಯಾರಂಟಿ ಯೋಜನೆಗಳ ಸೋಷಿಯಲ್ ಆಡಿಟ್ ಆಗಿ ನೋಡಬೇಕು’ ಎಂದರು.

‘ಸರ್ಕಾರವು ಬ್ಯಾಕ್‌ಲಾಗ್ ಹುದ್ದೆ ಭರ್ತಿ ಗ್ಯಾರಂಟಿಯನ್ನೂ ಕೊಡಬೇಕು’ ಎಂದು ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮಾತನಾಡಿ, ‘ನಮ್ಮ ಸರ್ಕಾರದಿಂದ ಎಲ್ಲ ವರ್ಗದ ಬಡವರಿಗೆ ಗ್ಯಾರಂಟಿ ಯೋಜನೆಗಳು‌ ದೊರೆತಿದ್ದರಿಂದಾಗಿಯೇ, ಶೋಷಣೆ ಮಾಡುತ್ತಿದ್ದವರ ಕಣ್ಣು ಕೆಂಪಗಾಗಿದೆ’ ಎಂದರು.

‘ಸಂವಿಧಾನ ತಿರುಚುವ ಹುನ್ನಾರ ನಡೆಯುತ್ತಲೇ ಇದೆ. ಸಿದ್ದರಾಮಯ್ಯ ನಾಯಕತ್ವಕ್ಕೆ ಗಂಡಾಂತರ ತರಲು ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಪ್ರಯತ್ನಿಸುತ್ತಿವೆ. ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಅವರನ್ನು ಉಳಿಸಿಕೊಳ್ಳಬೇಕು. ಸರ್ಕಾರ ಅಸ್ಥಿರಗೊಳಿಸಲು ಅವಕಾಶ ‌ಕೊಡಬಾರದು. ಗ್ಯಾರಂಟಿ ಯೋಜನೆಗಳ ವಿರುದ್ದ ಮಾತನಾಡುವವರ ವಿರುದ್ಧ ಫಲಾನುಭವಿಗಳು ಧ್ವನಿ ಎತ್ತಿ, ಬಾಯಿ ಮುಚ್ಚಿಸಬೇಕು’ ಎಂದು ಕರೆ ನೀಡಿದರು.

ಕುಲಪತಿ ಪ್ರೊ.ಎನ್.ಕೆ. ಲೋಕನಾಥ್‌ ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಂ. ರೇವಣ್ಣ, ಉಪಾಧ್ಯಕರಾದ ಪುಷ್ಪಾ ಅಮರನಾಥ್, ಸೂರಜ್ ಹೆಗಡೆ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು, ಕೃತಿ ಸಂಪಾದಕ ಡಿ.ಶ್ರೀನಿವಾಸ ಮಣಗಳ್ಳಿ, ಸಮಾಜ ಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಚಂದ್ರಮೌಳಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT