ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

MUDA Scam | ಮುಖ್ಯಮಂತ್ರಿ ವಿರುದ್ಧ ಪ್ರಕರಣ: ರಾಜ್ಯಪಾಲರ ನಡೆಯ ಕುತೂಹಲ

Published : 6 ಆಗಸ್ಟ್ 2024, 23:50 IST
Last Updated : 6 ಆಗಸ್ಟ್ 2024, 23:50 IST
ಫಾಲೋ ಮಾಡಿ
Comments

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅನುಮತಿ ನೀಡುವ ವಿಚಾರದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ನಡೆ ಕುತೂಹಲ ಮೂಡಿಸಿದೆ.

ದೆಹಲಿಗೆ ತೆರಳಿದ್ದ ರಾಜ್ಯಪಾಲರು ಸೋಮವಾರ ತಡರಾತ್ರಿ ರಾಜಭವನಕ್ಕೆ ಮರಳಿದ್ದಾರೆ. ಸಿ.ಎಂ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿದ್ದ ಟಿ.ಜೆ. ಅಬ್ರಹಾಂ ಅವರು  ರಾಜ್ಯಪಾಲರನ್ನು ಮಂಗಳವಾರ ಭೇಟಿ ಮಾಡಿ ಚರ್ಚಿಸಿದರು.

ರಾಜಭವನಕ್ಕೆ ತೆರಳಿದ್ದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ರಾಜ್ಯಪಾಲರ ಜತೆ ಒಂದು ಗಂಟೆ ಚರ್ಚಿಸಿದರು. ಜುಲೈ 31ರಂದು ಅಧಿಕಾರ ಸ್ವೀಕರಿಸಿದ್ದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ರಾಜ್ಯಪಾಲರನ್ನು ಭೇಟಿ ಆದರು.

ಸಿ.ಎಂ ವಿರುದ್ಧ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್‌) ಅನುಮತಿ ಕೋರಿ ಜುಲೈ 26ರಂದು ಅಬ್ರಹಾಂ ಅವರು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು.  ಮರುದಿನವೇ, ಮುಖ್ಯಮಂತ್ರಿಗೆ ರಾಜ್ಯಪಾಲರು ನೋಟಿಸ್ ನೀಡಿದ್ದರು. 

ಆಗಸ್ಟ್‌ 1ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಮಂತ್ರಿ ಪರಿಷತ್ ಸಭೆ, ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ನೀಡಿರುವ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ನೋಟಿಸ್‌ ಹಿಂದಕ್ಕೆ ಪಡೆಯಬೇಕು ಮತ್ತು ಅಬ್ರಹಾಂ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ರಾಜ್ಯಪಾಲರಿಗೆ ಸಲಹೆ ನೀಡುವ ತೀರ್ಮಾನ ಕೈಗೊಂಡಿತ್ತು.

ಸಭೆಯ ಬಳಿಕ ಎಲ್ಲ ಸಚಿವರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ‘ರಾಜ್ಯಪಾಲರು ನೀಡಿರುವ ನೋಟಿಸ್‌ ಕಾನೂನು ಮತ್ತು ಸಂವಿಧಾನ ಬಾಹಿರ. ರಾಜಭವನವನ್ನು ಬಳಸಿಕೊಂಡು ಬಹುಮತದ ಸರ್ಕಾರವನ್ನು ಅಸ್ಥಿರಗೊಳಿಸುವ ಮತ್ತು ಬುಡಮೇಲು ಮಾಡುವ ಪ್ರಯತ್ನ ನಡೆದಿದೆ. ಕೇಂದ್ರ ರಾಜ್ಯಪಾಲರನ್ನು ಕೈಗೊಂಬೆಯಾಗಿ ಬಳಸಿಕೊಳ್ಳುತ್ತಿದೆ’ ಎಂದು ಆರೋಪ ಮಾಡಿದ್ದರು.

ಇದೇ ಮಾತನ್ನು ಸಿದ್ದರಾಮಯ್ಯ ಮಾರನೇ ದಿನ ಪುನರುಚ್ಚರಿಸಿದ್ದರು. ಸರ್ಕಾರ ಉರುಳಿಸುವ ಸಂಚು ನಡೆಯುತ್ತಿದ್ದು, ಪ್ರಕರಣ ದಾಖಲಿಸಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ, ಹಿಂದುಳಿದ ಸಮುದಾಯದ ಸಂಘಟನೆಗಳು ರಾಜ್ಯದ ವಿವಿಧೆಡೆ ಪ್ರತಿಭಟನೆ, ಬಂದ್‌ ನಡೆಸುತ್ತಿವೆ.

ಪ್ರಾಸಿಕ್ಯೂಷನ್‌ಗೆ ಅನುಮತಿ– ಅಬ್ರಹಾಂ ವಿಶ್ವಾಸ
‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅನುಮತಿ ನೀಡುವ ವಿಶ್ವಾಸವಿದೆ’ ಎಂದು ವಕೀಲ ಟಿ.ಜೆ. ಅಬ್ರಹಾಂ ಹೇಳಿದರು. ರಾಜ್ಯಪಾಲರನ್ನು ರಾಜಭವನದಲ್ಲಿ ಮಂಗಳವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನ್ನ ಮೇಲೆ ರಾಜ್ಯ ಸರ್ಕಾರ ಮಾಡಿರುವ ಆಪಾದನೆಗಳಿಗೆ ರಾಜ್ಯಪಾಲರಿಗೆ ಸ್ಪಷ್ಟೀಕರಣ ನೀಡಿದ್ದೇನೆ. ನಾನು ನೀಡಿದ್ದ ದೂರು ಅರ್ಜಿಯಲ್ಲಿ ಹೇಳಿರುವುದೆಲ್ಲ ಸರಿಯಿದೆ ಎಂದೂ ಸ್ಪಷ್ಟನೆ ಕೊಟ್ಟಿದ್ದೇನೆ’ ಎಂದರು. ‘ನನ್ನ ದೂರಿಗೆ ಸಂಬಂಧಿಸಿದಂತೆ ರಾಜ್ಯಪಾಲರು ಮತ್ತಷ್ಟು ವಿವರಣೆ ಕೇಳಿದ್ದರು. ಈ ಹಿಂದೆ ಕೇಳಿದ್ದ ದಾಖಲೆಗಳ ಬಗ್ಗೆಯೂ ಚರ್ಚೆ ನಡೆಸಿದರು. ಹೆಚ್ಚುವರಿಯಾಗಿ ಯಾವುದೇ ದಾಖಲೆಗಳನ್ನು ನೀಡಿಲ್ಲ’ ಎಂದರು. ‘ಮೈಸೂರು ಲೋಕಾಯುಕ್ತದಲ್ಲಿ ನಾನು ನೀಡಿದ್ದ ದೂರಿಗೆ ಸಂಬಂಧಿಸಿದಂತೆ, ಪ್ರಾಸಿಕ್ಯೂಷನ್‌ ಬೇಡಿಕೆಗೆ ಪೂರಕವಾಗಿ ರಾಜ್ಯಪಾಲರು ಮುಖ್ಯಮಂತ್ರಿಗೆ ಶೋಕಾಸ್​ ನೋಟಿಸ್ ನೀಡಿದ್ದರು. ಆದರೆ ಮೂರು ತಾಸು ಸಚಿವ ಸಂಪುಟ ಸಭೆ ನಡೆಸಿದ ಸಚಿವರು, ರಾಜ್ಯಪಾಲರಿಗೆ ನಾನು ನೀಡಿದ್ದ ದೂರು ಅರ್ಜಿಯಲ್ಲಿರುವ ಯಾವುದೇ ತಪ್ಪುನ್ನು ಹೇಳಿಲ್ಲ. ಅದೆ ಬದಲು, ತಮ್ಮ ತಪ್ಪಿಲ್ಲ, ರಾಜ್ಯಪಾಲರು ನೊಟೀಸ್ ಕೊಟ್ಟಿದ್ದೇ ತಪ್ಪು ಎಂದು ನಿರ್ಣಯ ತೆಗೆದುಕೊಂಡಿದ್ದಾರೆ. ಟಿ.ಜೆ. ಅಬ್ರಹಾಂ ಸರಿಯಿಲ್ಲ ಎಂದೂ ಹೇಳಿದ್ದಾರೆ’ ಎಂದರು. ‘ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರೆ ಎಂದ ಮೇಲೆ ಪ್ರಕರಣವನ್ನು ಮುಂದುವರೆಸಲು ಅವರಿಗೆ ಆಸಕ್ತಿಯಿದೆ ಎಂದರ್ಥ. ರಾಜ್ಯಪಾಲರ ಭೇಟಿಗೆ ಕಳೆದ ಗುರುವಾರ ಸಮಯ ಕೇಳಿದ್ದೆ. ಇಂದು (ಮಂಗಳವಾರ) ಬರಲು ಹೇಳಿದ್ದರು. ಹೀಗಾಗಿ, ಭೇಟಿ ಮಾಡಿದ್ದೇನೆ’ ಎಂದರು. ‘ನನ್ನ ವಿರುದ್ಧ ಯಾವ ದೂರೂ ಇಲ್ಲ. ನನ್ನ ವಿರುದ್ಧದ ಪ್ರಕರಣಗಳನ್ನು ಹುಡುಕಿ, ಆಗದೇ ಇದ್ದರೆ ಹೇಗೆ ಹುಡುಕಬೇಕೆಂದು ನನ್ನನ್ನು ಕೇಳಿ’ ಎಂದು ಸರ್ಕಾರಕ್ಕೆ ಅಬ್ರಹಾಂ ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT