ನವದೆಹಲಿ: ಆತ್ಮಹತ್ಯೆ ಪ್ರಕರಣಗಳಿಂದ ಭಾರತದ ಆರ್ಥಿಕತೆಯ ಮೇಲೆ ಆಗುತ್ತಿರುವ ವಾರ್ಷಿಕ ಹೊರೆಯ ಮೊತ್ತ ₹13.41 ಲಕ್ಷ ಕೋಟಿ ರೂಪಾಯಿ (16 ಬಿಲಿಯನ್ ಡಾಲರ್). ರಾಜ್ಯವಾರು ಕರ್ನಾಟಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆರ್ಥಿಕತೆಯ ಹೊರೆಯಲ್ಲಿ ರಾಜ್ಯದ ಪಾಲು ಐದನೇ ಒಂದರಷ್ಟಾಗಿದೆ.
ದಕ್ಷಿಣದ ರಾಜ್ಯಗಳಾದ ಕರ್ನಾಟಕ (₹2.33 ಲಕ್ಷ ಕೋಟಿ), ತಮಿಳುನಾಡು (₹2.13 ಲಕ್ಷ ಕೋಟಿ) ಮತ್ತು ಮಹಾರಾಷ್ಟ್ರ (₹1.81 ಲಕ್ಷ ಕೋಟಿ) ರಾಜ್ಯಗಳ ಒಟ್ಟು ಪಾಲು ಬಹುತೇಕ ಶೇ 45ರಷ್ಟಿದೆ. ಈ ಮೊತ್ತ ಕೇಂದ್ರ ಆರೋಗ್ಯ ಸಚಿವಾಲಯದ ವಾರ್ಷಿಕ ಬಜೆಟ್ಗಿಂತಲೂ ಅಧಿಕವಾಗಿದೆ.
ಆತ್ಮಹತ್ಯೆ ಕಾರಣಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟ ಅನುಭವಿಸಿರುವ ರಾಜ್ಯಗಳಲ್ಲಿ ಗುಜರಾತ್, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳು ಇವೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ 20–34 ವರ್ಷ ವಯಸ್ಸಿನವರೇ ಹೆಚ್ಚಿದ್ದು, ಒಟ್ಟು ಪ್ರಕರಣಗಳಲ್ಲಿ ಈ ವಯಸ್ಸಿನವರ ಪ್ರಮಾಣ ಶೇ 53ರಷ್ಟಿದೆ.
2019ರಲ್ಲಿ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದಿರುವ 1.95 ಲಕ್ಷ ಆತ್ಮಹತ್ಯೆಗಳ ಅಂಕಿ ಅಂಶಗಳನ್ನು ಈ ಸಮೀಕ್ಷೆಯು ಆಧರಿಸಿದೆ.
ಅಧ್ಯಯನ ವರದಿಯು ಕಳೆದ ವಾರ ‘ಲ್ಯಾನ್ಸೆಟ್’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಇದು, ಆತ್ಮಹತ್ಯೆಯಿಂದ ಆಗುವ ಆರ್ಥಿಕ ಹೊರೆಯನ್ನು ಲೆಕ್ಕ ಹಾಕಿದ ಮೊದಲಅಧ್ಯಯನವಾಗಿದೆ. ಜೀವಹಾನಿಯನ್ನು ತಡೆಯಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವನ್ನು ವರದಿ ಪ್ರತಿಪಾದಿಸಿದೆ.