ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯೋಗಿಯ ಧ್ಯಾನದಲ್ಲಿ ಅರಳಿದ ಮೂರ್ತಿಗಳು..

ಮನದಂಗಳದೊಳು ರಾಮ ಒಡಮೂಡಿದ: ಗೀತಾ ರಾವ್‌ ಲೇಖನ
ಗೀತಾ ರಾವ್‌
Published : 6 ಜುಲೈ 2024, 20:25 IST
Last Updated : 6 ಜುಲೈ 2024, 20:25 IST
ಫಾಲೋ ಮಾಡಿ
Comments

'ನೀವು ರಾಮಲಲ್ಲಾನನ್ನು ಕೆತ್ತುವ ಮೊದಲು ಧ್ಯಾನ ಮಾಡುತ್ತಿದ್ರಾ?‘

’ಬಾಲರಾಮನನ್ನು ಕೆತ್ತುವುದೇ ನನ್ನ ಧ್ಯಾನವಾಗಿತ್ತು‘

ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲರಾಮನನ್ನು ಕೆತ್ತಿದ ಶಿಲ್ಪಿ ಮೈಸೂರಿನ ಅರುಣ್‌ ಯೋಗಿರಾಜ್‌ ಅವರ ಉತ್ತರವಿದು.

ಈಚೆಗೆ ‘ಕ್ರಾಫ್ಟ್ಸ್‌ ಕೌನ್ಸಿಲ್‌ ಆಫ್‌ ಕರ್ನಾಟಕ’ (ಕರ್ನಾಟಕ ಕರಕುಶಲ ಮಂಡಳಿ) ಮಳಿಗೆ  ಹೆರಿಟೇಜ್‌ನಲ್ಲಿ ಅರುಣ್‌ ಯೋಗಿರಾಜ್‌ ಅವರ ಉಪನ್ಯಾಸವನ್ನು ಏರ್ಪಡಿಸಿತ್ತು. ಅಲ್ಲಿ ಮಾತಿಗೆ ಸಿಕ್ಕ ಅರುಣ್‌, ಬಾಲರಾಮ ಸೃಷ್ಟಿಯಾದ ಕತೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಲೇ ತಮ್ಮ ಅನುಭವವನ್ನು ಹಂಚಿಕೊಂಡರು.

‘ದೇವರ ವಿಗ್ರಹವನ್ನು ಕೆತ್ತುವ ಮೊದಲು ಕುಲದೇವತೆಯನ್ನು ಪೂಜಿಸುತ್ತೇನೆ. ಹಿರಿಯರನ್ನು ನೆನೆಯುತ್ತೇನೆ. ಮುಂದಿನ ಕೆಲಸ ಸುಲಲಿತವಾಗುತ್ತ ಹೋಗುತ್ತದೆ. ಶ್ರದ್ಧೆ ಮತ್ತು ಪರಿಶ್ರಮ ನನ್ನದು. ಉಳಿದದ್ದು ದೈವ ಮಾಡಿಸಿಕೊಳ್ಳುತ್ತದೆ’ ಎಂದು ತಮ್ಮ ನಂಬಿಕೆಯನ್ನು ಅರುಹಿದರು.

ಅರುಣ್‌ ತಾತ ಬಸವಣ್ಣ ಶಿಲ್ಪಿ ಮೈಸೂರು ಅರಮನೆಯ ಕಲಾವಿದರು. ಗಾಯತ್ರಿ ಹಾಗೂ ಭುವನೇಶ್ವರಿ ದೇಗುಲಗಳ ಪ್ರತಿಮೆಗಳನ್ನು ಕೆತ್ತನೆ ಮಾಡುವ ಅವಕಾಶ ಪಡೆದವರು. ಮೈಸೂರು ರಾಜಮನೆತದೊಂದಿಗೆ ಸುದೀರ್ಘ ಬಾಂಧವ್ಯವನ್ನು ಈ ಮನೆತನವು ಬೆಳೆಸಿಕೊಂಡು ಬಂದಿದೆ. ಅರುಣ್‌, ಐದನೆಯ ತಲೆಮಾರಿನ ಶಿಲ್ಪಿ. ದೇಶದ ಶಿಲ್ಪಿಗಳಲ್ಲಿ ಖ್ಯಾತನಾಮರು.

ಅರುಣ್‌ ಯೋಗಿರಾಜ್‌ ಸಮರ್ಥ ಮತ್ತು ಅಸಾಮಾನ್ಯ ಶಿಲ್ಪಿ. ಓದಿನಲ್ಲಿಯೂ ಮುಂದಿದ್ದ ಇವರು, ಮೈಸೂರು ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ. ಕಂಪನಿಯೊಂದರಲ್ಲಿ ಒಂದಷ್ಟು ವರ್ಷ ದುಡಿದರು. ಆದರೆ, ಶಿಲ್ಪಕಲೆಯ ಸೆಳೆತ ಹೆಚ್ಚಾಯಿತು. 2008ರಲ್ಲಿ ಕೆಲಸವನ್ನು ಬಿಟ್ಟು ಉಳಿ ಮತ್ತು ಸುತ್ತಿಗೆಯನ್ನು ಹಿಡಿದರು. ಪೂರ್ಣಪ್ರಮಾಣದ ಶಿಲ್ಪಿಯಾಗಿ ಬದಲಾದರು. ತಾತ ಬಾಲ್ಯದಲ್ಲಿಯೇ ಅರುಣ್‌ ಅವರ ಈ ಸಾಮರ್ಥ್ಯವನ್ನು ಗುರುತಿಸಿದ್ದರು. ಶಿಲ್ಪಿಗೆ ಇರಬೇಕಾದ ಗುಣಗಳನ್ನು ಕಂಡ ಅವರು, ತಮ್ಮ ಪರಂಪರೆಯನ್ನು ಉಳಿಸುವ ಮತ್ತು ಕುಟುಂಬದ ಹೆಸರನ್ನು ಉನ್ನತ ಶಿಖರಕ್ಕೆ ಕೊಂಡೊಯ್ಯುವರು ಎಂದು ಭವಿಷ್ಯವನ್ನೂ ನುಡಿದಿದ್ದರು. ಆ ಭವಿಷ್ಯ ನಿಜವಾಗಿದ್ದು ಬಾಲ ರಾಮನ ನಿರ್ಮಿತಿಯಿಂದ.

ಪೂರ್ಣಪ್ರಮಾಣದ ಶಿಲ್ಪಿಯಾಗಿ ಬದಲಾಗುತ್ತಲೇ ಅರುಣ್‌ ಅವರಿಗೆ ಒಳ್ಳೆಯ ಅವಕಾಶಗಳು ಅರಸಿ ಬರಲಾರಂಭಿಸಿದವು. ಇವರ ನೇತೃತ್ವದಲ್ಲಿಯೇ ಕೇದಾರನಾಥದಲ್ಲಿ ಅಮೃತಶಿಲೆಯ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ವಿಗ್ರಹವನ್ನು ಸ್ಥಾಪಿಸಲಾಯಿತು. ಮೈಸೂರಿನಲ್ಲಿ ಜಯಚಾಮರಾಜೇಂದ್ರ ಒಡೆಯರ್‌ ಅವರ 15 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಯಿತು. ಈ ಪ್ರತಿಮೆಗೆ ಆಸ್ಟ್ರಿಯಾದಿಂದ ಶುಭ್ರಶ್ವೇತ ಅಮೃತ ಶಿಲೆಯನ್ನು ರಾಜಸ್ಥಾನದ ವ್ಯಾಪಾರಿಯೊಬ್ಬರು ತರಿಸಿಕೊಟ್ಟರು. ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ 28 ಅಡಿಗಳಷ್ಟು ಎತ್ತರದ ಪ್ರತಿಮೆಯನ್ನು  ಇಂಡಿಯಾ ಗೇಟ್‌ನಲ್ಲಿ ಪ್ರತಿಷ್ಠಾಪಿಸಲಾಯಿತು. ಇದಕ್ಕಾಗಿ 280 ಮೆಟ್ರಿಕ್‌ ಟನ್‌ ತೂಕದ ಗ್ರಾನೈಟ್‌ ಶಿಲೆಯನ್ನು ಬಳಸಲಾಗಿತ್ತು. ಅಯೋಧ್ಯೆಯ ಬಾಲರಾಮನ ವಿಗ್ರಹವನ್ನು ಕೆತ್ತುವುದು ಇವುಗಳಲ್ಲಿ ಅತಿಮುಖ್ಯವಾದ ಕೆಲಸವಾಗಿತ್ತು.

‘ದೇವರ ವಿಗ್ರಹಗಳಿಗಾಗಿ ಮೈಸೂರಿನ ಬಳಿ ಇರುವ ಎಚ್‌.ಡಿ. ಕೋಟೆ ಸಮೀಪ ದೊರೆಯುವ ಕೃಷ್ಣಶಿಲೆಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ವಿಗ್ರಹದ ಗಾತ್ರ ಮತ್ತು ಸ್ವರೂಪ ನಿರ್ಧಾರವಾದ ಮೇಲೆ ಯಾವ ಗಾತ್ರದ ಶಿಲೆ ಬೇಕು ಎಂಬ ಅಂದಾಜು ಇರುತ್ತದೆ. ಅದಕ್ಕೆ ತಕ್ಕಷ್ಟು ದೊಡ್ಡಗಾತ್ರದ ಶಿಲೆಯನ್ನೇ ಆಯ್ಕೆ ಮಾಡಲಾಗುತ್ತದೆ. ನಂತರ ಅದನ್ನು ಒಂದು ದಿನ ಗಾಳಿಗೆ ಮುಕ್ತವಾಗಿಡಲಾಗುತ್ತದೆ. ರಾಸಾಯನಿಕ ಕ್ರಿಯೆಯ ನಂತರ ಈ ಶಿಲೆ ಕೆತ್ತಲು ಅನುವಾಗುವಷ್ಟು ಕಠಿಣವಾಗಿ ಬದಲಾಗುತ್ತದೆ. ಈ ಶಿಲೆಗೆ ವಿಶೇಷ ಗುಣಗಳಿವೆ. ಜಲನಿರೋಧಕ ಮತ್ತು ಯಾವುದೇ ರಾಸಾಯನಿಕಗಳಿಗೆ ಯಾವುದೇ ಪರಿಣಾಮ ಬೀರದ ಶಿಲೆ ಅದಾಗಿರುವುದರಿಂದ ಕೃಷ್ಣಶಿಲೆಯೇ ನನ್ನ ಮೊದಲ ಆಯ್ಕೆಯಾಗಿರುತ್ತದೆ’.

‘ಯಾವುದೇ ವಿಗ್ರಹವಿರಲಿ, ಸಾಕಷ್ಟು ಪೂರ್ವತಯಾರಿ ಮಾಡಿಕೊಳ್ಳುತ್ತೇನೆ. ಮೊದಲು ಶಿಲ್ಪಶಾಸ್ತ್ರವನ್ನು ಅಧ್ಯಯನ ಮಾಡುತ್ತೇನೆ. ನಾನು ಮಾಡಬೇಕಿರುವ ವ್ಯಕ್ತಿ ಅಥವಾ ದೇವರ ಅಂಗರಚನೆಯತ್ತ ಗಮನ ನೀಡುತ್ತೇನೆ. ಅವರ ವ್ಯಕ್ತಿತ್ವಕ್ಕೆ ಎಂಥ ಮುಖಭಾವ ಇರಬೇಕು ಎನ್ನುವುದೂ ಇದೇ ಸಂದರ್ಭದಲ್ಲಿ ನಿರ್ಧರಿಸಲಾಗುತ್ತದೆ. ಸುಭಾಶ್ಚಂದ್ರ ಬೋಸ್‌ ಅವರ ಪ್ರತಿಮೆ ಮಾಡುವಾಗ ಆತ್ಮವಿಶ್ವಾಸ, ದೃಢ ನಿರ್ಧಾರಗಳು ಕಾಣುವಂತಿದ್ದವು. ಬಾಲರಾಮನ ವಿಗ್ರಹ ಮಾಡುವಾಗ ಚೂರು ಸವಾಲಿನ ಕೆಲಸವಾಗಿತ್ತು’.

’ನಾನು ಸಾಕಷ್ಟು ತಯಾರಿ ಮಾಡಿಕೊಂಡೆ. ಶ್ಲೋಕಗಳನ್ನು ಅರ್ಥೈಸಿಕೊಂಡೆ. ನನ್ನ ಹಿರಿಯರು ಹೇಳಿದ ಸೂತ್ರಗಳನ್ನು ನೆನಪಿಸಿಕೊಂಡೆ. ಮತ್ತೆ ಐದು ವರ್ಷ ವಯಸ್ಸಿನ ವಿವಿಧ ಮಕ್ಕಳ ಅಂಗರಚನೆಯನ್ನೂ ಅಧ್ಯಯನ ಮಾಡಿದೆ. ವಿಶೇಷವಾಗಿ ಮುಖದ ಸ್ನಾಯುಗಳ ರಚನೆಯನ್ನು ಗಮನಿಸುತ್ತಿದ್ದೆ. ದೇವಮುಖದ ಲಕ್ಷಣಗಳನ್ನು ಅರ್ಥವಾಗತೊಡಗಿತು. ಯಾವುದೇ ಪ್ರತಿಮೆಯಲ್ಲಿ ಕಣ್ಣಿನ ಪಾತ್ರ ದೊಡ್ಡದು ಎಂದು ನನ್ನಜ್ಜ ಹೇಳಿಕೊಟ್ಟಿದ್ದರು. ಕಣ್ಣನ್ನು ಕೊರೆಯುವಾಗ ಅತಿ ನಾಜೂಕಿನಿಂದ ಮಾಡಬೇಕಾದ ಕೆಲಸವದು. ಇದಕ್ಕಾಗಿ ಚಿನ್ನದ ಉಳಿ, ಬೆಳ್ಳಿಯ ಸುತ್ತಿಗೆ ಇರಬೇಕು. ದೇವಮೊಗದ ಕಣ್ಣುಗಳನ್ನು ತೆರೆಯಬೇಕಾದರೆ ಅದಕ್ಕೆಂದೇ ಒಂದು ಶಾಸ್ತ್ರ ಮಾಡಲಾಗುತ್ತದೆ. ಅದಕ್ಕೆ ನೇತ್ರೋಮಿಲನ ಎಂದು ಕರೆಯಲಾಗುತ್ತದೆ. ಇದು ಕೇವಲ ಕೆತ್ತುವ ಕ್ರಿಯೆಯಲ್ಲ. ಅದೊಂದು ಪ್ರಕ್ರಿಯೆ. ನಾನು ಮಿಂದು ಬಂದು, ಕುಲದೇವತೆಯನ್ನು ಪೂಜಿಸಿ, ಹಿರಿಯರನ್ನು ನೆನೆದು ಈ ಕಾರ್ಯವನ್ನು ಆರಂಭಿಸುತ್ತೇನೆ. ನಮ್ಮೆಲ್ಲ ಕಾಳಜಿಯನ್ನೂ, ಕೌಶಲದ ನಾಜೂಕನ್ನು ಬಯಸುವ ಹಂತ ಇದು’ ಎಂದು ಅರುಣ್‌ ತನ್ಮಯತೆಯಿಂದ ವಿವರಿಸಿದರು.

‘ನಿಮ್ಮ ಪರಿಕಲ್ಪನೆಯಲ್ಲಿ ಬಾಲರಾಮ ಅಥವಾ ರಾಮಲಲ್ಲಾ ಹೇಗಿದ್ದರು’ ಎಂಬ ಪ್ರಶ್ನೆಗೆ ಮಂದಹಾಸದೊಂದಿಗೆ ಉತ್ತರಿಸಿದ ಅವರು, ‘ನನಗೆ ಬಾಲರಾಮನ ಮೊಗದಲ್ಲಿ ಮುಗ್ಧತೆಯೂ ದಿವ್ಯ ಭಾವವೂ ಎರಡನ್ನೂ ಮೂಡಿಸಬೇಕಾಗಿತ್ತು. ಜನರಿಗೆ ಬಾಲರಾಮನ ಮುಗ್ಧತೆ ಮತ್ತು ದೇವರಾಮನ ದಿವ್ಯ ಅನುಭೂತಿ ಎರಡೂ ದೊರಕಿದವು ಎಂದು ಬಹುಜನ ಅಭಿಪ್ರಾಯ ಪಟ್ಟರು’.

‘ನಾನು ಕೆತ್ತಿರುವ ಬಾಲರಾಮ 4.24 ಅಡಿ ಎತ್ತರವಿದೆ. 150 ಕೆ.ಜಿ. ತೂಕ ತೂಗುತ್ತದೆ. ನಿಂತ ಭಂಗಿಯಲ್ಲಿರುವ ಬಾಲರಾಮನ ಎರಡೂ ಕೈಗಳಲ್ಲಿ ಬಿಲ್ಲುಬಾಣಗಳಿವೆ. ನಸುನಗುವ ಮುಖದ ಬಾಲರಾಮ, ಕಮಲದ ಪೀಠದಲ್ಲಿ ನಿಂತಿರುವ ಮೂರ್ತಿಯಾಗಿದೆ. ಜೊತೆಗೆ ಕೃಷ್ಣಶಿಲೆಯ ಪ್ರಭಾವಳಿಯನ್ನೂ ಮಾಡಲಾಯಿತು. ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರಗಳನ್ನು ಕೆತ್ತಲಾಯಿತು’.

‘ನೀವು ಕೆತ್ತಿದ ಮೂರ್ತಿಯಲ್ಲಿ ಬಾಲರಾಮನ ಮುಗ್ಧತೆ, ಕ್ಷಾತ್ರ ತೇಜಸ್ಸು ಎರಡೂ ತಂದಿರಿ. ಆದರೆ ಕೈಗೆ ಬಾಣ, ಬಿಲ್ಲುಗಳನ್ನು ನೀಡಿದ್ದು ಯಾಕೆ?’ ಎಂಬ ಪ್ರಶ್ನೆಗೆ ‘ಇವು ಸಾಂಕೇತಿಕವಾಗಿ ಬಳಸಿದ್ದು ಎಂದೆನಿಸಿದರೂ, ಬಾಲ್ಯದಲ್ಲಿ ಶ್ರೀರಾಮ ಇವುಗಳನ್ನು ಆಟಿಕೆಗಳೆಂದೇ ಆಟವಾಡಿದ್ದ. ಬಾಲರಾಮನ ಆಟಿಕೆಗಳಾಗಿಯೇ ಬಿಲ್ಲು ಬಾಣಗಳನ್ನು ನೀಡಲಾಗಿದೆ’ ಎಂದರು.

ಜನವರಿ 22 ರಂದು ಬಾಲರಾಮನಿಗೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಗಳನ್ನು ಕೈಗೊಳ್ಳಲಾಯಿತು. ಆ ಕ್ಷಣದಲ್ಲಿ ಅರುಣ್‌ ಅವರಿಗೇನು ಎನ್ನಿಸಿತು ಎಂದು ಕೇಳಿದಾಗ.. ‘ಆ ಕ್ಷಣದಲ್ಲಿ ಮೂಡಿದ ಧನ್ಯತಾ ಭಾವವನ್ನು ವರ್ಣಿಸಲಾಗದು. ಈ ಭೂಮಿಯ ಮೇಲೆ ನಾನೇ ಅದೃಷ್ಟವಂತ ಎಂದೆನಿಸಿದ ಗಳಿಗೆಯದು. ನಾನು ನಿಜಕ್ಕೂ ಭಾಗ್ಯವಂತ ಎಂದೆನಿಸಿತು. ಈ ಅವಕಾಶ ಕಲ್ಪಿಸಿದ ದೇವರಿಗೆ ಹೃದಯದಾಳದಿಂದ ಕೃತಜ್ಞತೆಯನ್ನು, ಪ್ರಾರ್ಥನೆಯನ್ನೂ ಸಲ್ಲಿಸಿದೆ’ ಎನ್ನುತ್ತ ತಮ್ಮ ಮಾತಿಗೆ ಪೂರ್ಣವಿರಾಮವಿತ್ತರು.

Arun Yogiraj
Arun Yogiraj

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT