ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC | ಟಿ–20 ವಿಶ್ವಕಪ್ ಗೆದ್ದ ಭಾರತ ತಂಡ ದೆಹಲಿಗೆ ಆಗಮನ: ಅಭಿಮಾನಿಗಳ ಸ್ವಾಗತ

Published 4 ಜುಲೈ 2024, 2:18 IST
Last Updated 4 ಜುಲೈ 2024, 2:18 IST
ಅಕ್ಷರ ಗಾತ್ರ

ನವದೆಹಲಿ: ಟಿ–20 ವಿಶ್ವಕಪ್ ಗೆದ್ದಿರುವ ಭಾರತ ಕ್ರಿಕೆಟ್ ತಂಡ ಇಂದು ಬೆಳಗ್ಗೆ ದೆಹಲಿಗೆ ಆಗಮಿಸಿದೆ. ಕೆಟಗರಿ–4ರಲ್ಲಿ ಗುರುತಿಸಲಾಗುವ ಬಾರಿ ಚಂಡಮಾರುತದ ನಡುವೆ ಬಾರ್ಬಡೋಸ್ ವಿಮಾನ ನಿಲ್ದಾಣ ಬಂದ್ ಆಗಿದ್ದರಿಂದ ಟ್ರೋಫಿ ಗೆದ್ದ ಬಳಿಕವೂ ಐದು ದಿನಗಳಿಂದ ತಂಡ ಅಲ್ಲಿಯೇ ಉಳಿದಿತ್ತು.

ಇಂದು ವಿಶೇಷ ಚಾರ್ಟರ್ ವಿಮಾನದಲ್ಲಿ ತಂಡ ದೇಶದ ರಾಜಧಾನಿಗೆ ಆಗಮಿಸಿದೆ.

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇರಿದ್ದ ಅಭಿಮಾನಿಗಳು ಶುಭಾಶಯ ಫಲಕಗಳನ್ನು ಹಿಡಿದು ತಮ್ಮ ನೆಚ್ಚಿನ ಆಟಗಾರರನ್ನು ಬರಮಾಡಿಕೊಂಡರು.

ಕಳೆದ ಶನಿವಾರ ನಡೆದ ಟಿ–20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ಗಳಿಂದ ಮಣಿಸಿದ್ದ ಭಾರತ ತಂಡ ಟ್ರೋಫಿ ಎತ್ತಿಹಿಡಿದಿತ್ತು. 11 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಂಡಿತ್ತು. ಇದು ಭಾರತ ಗೆದ್ದ 2ನೇ ಟಿ–20 ವಿಶ್ವಕಪ್ ಟ್ರೋಫಿಯಾಗಿದ್ದು, ಏಕದಿನ ಮತ್ತು ಟಿ–20ಯಲ್ಲಿ ಒಟ್ಟಾರೆ 4ನೇ ವಿಶ್ವಕಪ್ ಟ್ರೋಫಿಯಾಗಿದೆ.

ಆಟಗಾರರನ್ನು ಹೊತ್ತ ಏರ್‌ ಇಂಡಿಯಾದ ವಿಶೇಷ ಚಾರ್ಟರ್ ವಿಮಾನ ಎಐಸಿ24ಡಬ್ಲ್ಯುಸಿ ಬುಧವಾರ ಬಾರ್ಬಡೋಸ್‌ನ ಬ್ರಿಜ್‌ಟೌನ್‌ನಿಂದ ಸ್ಥಳೀಯ ಕಾಲಮಾನ ಬೆಳಿಗ್ಗೆ 4.50ಕ್ಕೆ ಹೊರಟು 16 ಗಂಟೆಗಳ ತಡೆರಹಿತ ಪ್ರಯಾಣದ ಮೂಲಕ ಗುರುವಾರ ಬೆಳಿಗ್ಗೆ 6 ಗಂಟೆಗೆ ದೆಹಲಿಯಲ್ಲಿ ಲ್ಯಾಂಡ್ ಆಗಿದೆ.

ಭಾರತ ತಂಡ, ಸಹಾಯಕ ಸಿಬ್ಬಂದಿ, ಆಟಗಾರರ ಕುಟುಂಬ ಸದಸ್ಯರು, ಬಿಸಿಸಿಐನ ಅದಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ವಿಮಾನದಲ್ಲಿ ಆಗಮಿಸಿದರು.

ಟಿ–20 ವಿಶ್ವಕಪ್ ವಿಜೇತ ತಂಡವು ಬೆಳಿಗ್ಗೆ 9 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿ ನಿಗದಿಯಾಗಿದೆ.

ಇದಾದ, ಬಳಿಕ ತೆರೆದ ಬಸ್‌ನಲ್ಲಿ ಜಯದ ವಿಜಯೋತ್ಸವ ನಡೆಸಲು ತಂಡವು ಮುಂಬೈಗೆ ತೆರಳಲಿದೆ. ಇದಕ್ಕೂ ಮುನ್ನ, ವಾಂಖೆಡೆ ಕ್ರೀಡಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT