ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕದ್ದು ಓಡಿ ಹೋಗೋಲ್ಲ, ರಕ್ಷಿಸುವಂತೆ ಗೋಗರೆಯಲ್ಲ: ಸಿದ್ದರಾಮಯ್ಯಗೆ HDK ತಿರುಗೇಟು

Published : 20 ಸೆಪ್ಟೆಂಬರ್ 2024, 12:45 IST
Last Updated : 20 ಸೆಪ್ಟೆಂಬರ್ 2024, 12:45 IST
ಫಾಲೋ ಮಾಡಿ
Comments

ಮೈಸೂರು: ‘ನಾನು ಎಲ್ಲಿಗೂ ಕದ್ದು ಓಡಿ ಹೋಗುವುದಿಲ್ಲ, ರಕ್ಷಿಸುವಂತೆ ಯಾರ ಮುಂದೆಯೂ ಗೋಗರೆಯುವುದಿಲ್ಲ’ ಎಂದು ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಗುಡುಗಿದರು.

‘ಕುಮಾರಸ್ವಾಮಿಯದ್ದು ಯಾವಾಗಲೂ ಹಿಟ್‌ ಅಂಡ್‌ ರನ್ ಕೇಸ್’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಇಲ್ಲಿ ಶುಕ್ರವಾರ ತಿರುಗೇಟು ನೀಡಿದ ಅವರು, ‘ನನ್ನನ್ನು ಉಳಿಸಿರೆಂದು ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಬಂದರೆ ರಾಜಕಾರಣದಲ್ಲಿ ಐದು ಸೆಕೆಂಡ್‌ ಕೂಡ ಇರುವುದಿಲ್ಲ’ ಎಂದು ಹೇಳಿದರು.

‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಗಂಗೇನಹಳ್ಳಿಯಲ್ಲಿ ಬಹುಕೋಟಿ ಮೌಲ್ಯದ 1 ಎಕರೆ 11 ಗುಂಟೆ ಜಮೀನು ಡಿನೋಟಿಫಿಕೇಷನ್‌ ನಡೆದಿದೆ. ಇದೊಂದು ವ್ಯವಸ್ಥಿತ ದರೋಡೆ’ ಎಂಬ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿಕೆಗೆ ಸಿಟ್ಟಿನಿಂದ ಪ್ರತಿಕ್ರಿಯಿಸಿದ ಅವರು, ‘ಮಿಸ್ಟರ್ ಕೃಷ್ಣ ಬೈರೇಗೌಡ ಯಾರನ್ನೋ ಮೆಚ್ಚಿಸಲು ಏನೇನೋ ಮಾತನಾಡಬೇಡ. ನೀನೇನು ಸತ್ಯಹರಿಶ್ಚಂದ್ರನಾ, ನಿನ್ನ ಇಲಾಖೆಯಲ್ಲಿ ಏನೇನು ಮಾಡಿದೀಯಾ ಗೊತ್ತಿದೆ. ನೀವು ಏನೇ ಮಾಡಿದರೂ ನನ್ನದು ಏನೂ ಸಿಗುವುದಿಲ್ಲ’ ಎಂದು ತಿರುಗೇಟು ನೀಡಿದರು.

‘ಕೃಷ್ಣ ಬೈರೇಗೌಡ ವಿದೇಶದಲ್ಲಿ ಓದಿದವನು, ಬಹಳ ಜ್ಞಾನಿ ಎಂದುಕೊಂಡಿದ್ದೆ. ಆದರೆ, ಆತ ಹೆಬ್ಬೆಟ್ಟು ಎಂದುಕೊಂಡಿರಲಿಲ್ಲ. ಯಾವನೋ ಏನೋ ಬರೆದು ಕೊಟ್ಟ; ಅದನ್ನು ಇವರು ತಂದು ಓದಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ರೀತಿ ಹೇಳುವುದಿಲ್ಲ

‘ಡಿನೋಟಿಫಿಕೇಷನ್ ಆಗಿದೆ; ಅದನ್ನು ನಾನು ಮಾಡಿದ್ದೆನಾ? ಆ ಜಮೀನು ತೆಗೆದುಕೊಂಡಿರುವುದು ನನ್ನ ಪತ್ನಿಯ ಅತ್ತೆ. ನನಗೂ ಅವರಿಗೆ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರೀತಿಯಲ್ಲಿ ಹೇಳುವುದಿಲ್ಲ. 2015ರಲ್ಲೇ ಆ ಕೇಸ್ ಆಗಿತ್ತು. ಆ ನಂತರ ತನಿಖೆ ಮಾಡಿ ‘ಬಿ’ ವರದಿ ಸಹ ಹಾಕಿದ್ದಾರೆ. ಈಗ ಇವರು ಜೀವ ಕೊಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ನಾನು ಯಾರಿಗೋ ಟೋಪಿ ಹಾಕಿ ಜಮೀನು ಪಡೆದಿಲ್ಲ. ನಾನೇ ಫೈಲ್ ತಿರಸ್ಕರಿಸಿದ್ದೆ. ಆಗ, ನನಗೂ ಯಡಿಯೂರಪ್ಪ ಅವರಿಗೂ ರಾಜಕೀಯ ಸಂಘರ್ಷ ಯಾವ ರೀತಿ ಇತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಅವತ್ತು ಅವರೇಕೆ ನನಗೆ ಸಹಾಯ ಮಾಡುತ್ತಾರೆ? ಕಳೆದ ಮೂರು ತಿಂಗಳಿನಿಂದಲೂ ಈ ಸರ್ಕಾರ ನನ್ನ ವಿರುದ್ಧ ದಾಖಲೆ ಹುಡುಕಿಸುತ್ತಿದೆ. ಯಾವುದೂ ಸಿಗದ ಕಾರಣದಿಂದ ಹಳೆಯ ಕೇಸ್‌ಗೆ ಜೀವ ಕೊಡುವ ಕೆಲಸ ನಡೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗುರುವಾರ ನಡೆದಿರುವ ಸಚಿವರ ಪತ್ರಿಕಾಗೋಷ್ಠಿಯು ಕಾಂಗ್ರೆಸ್‌ನ ಟೂಲ್‌ಕಿಟ್‌. ಯಾರೋ ಅವರಿಗೆ ಸರಿಯಾಗಿ ಸ್ಕ್ರಿಪ್ಟ್‌ ಕೂಡ ಬರೆದುಕೊಟ್ಟಿಲ್ಲ. ಅದರಲ್ಲೇ ಅವರು ಸಿಕ್ಕಿ ಬೀಳುತ್ತಾರೆ’ ಎಂದು ಹೇಳಿದರು.

ಅಂಥದ್ದೆಲ್ಲ ಡಿಕೆಶಿಗೆ ಗೊತ್ತು

‘ಸತ್ತವರ ಹೆಸರಿನಲ್ಲಿ ಹೆಬ್ಬೆಟ್ಟು ಪಡೆದು ಜಮೀನು ಹೊಡೆದಿದ್ದು ಯಾರು? ಅಂಥದ್ದೆಲ್ಲ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಗೊತ್ತಿದೆ. ಬೆನಗಾನಹಳ್ಳಿ ಜಮೀನು ವಿಚಾರದಲ್ಲಿ ಏನೇನಾಗಿದೆ ಎಂಬುದು ಮಾಜಿ ಸಂಸದ ಡಿ.ಕೆ. ಸುರೇಶ್ ಅವರಿಗೆ ಮರೆತು ಹೋಗಿದೆಯಾ? ನನಗೆ ಅಂತಹ ಯಾವ ವ್ಯವಹಾರಗಳೂ ಗೊತ್ತಿಲ್ಲ’ ಎಂದರು.

‘ಈಗ ಕೆಲವರಿಗೆ ಒಕ್ಕಲಿಗರ ಮೇಲೆ ಪ್ರೀತಿ ಹುಟ್ಟುತ್ತಿದೆ. ಮೈಸೂರಿನಲ್ಲಿ ಎಚ್‌.ಡಿ. ದೇವೇಗೌಡರ ಫೋಟೊಗೆ ಚಪ್ಪಲಿ ಹಾರ ಹಾಕಿಸಿದ್ದವರು ಯಾರು? ಆಗ ಒಕ್ಕಲಿಗರ ಸ್ವಾಭಿಮಾನ ಎಲ್ಲಿ ಹೋಗಿತ್ತು? ನಮ್ಮ ಸಮಾಜದ ಸ್ವಾಮೀಜಿಗೆ ಸಾಫ್ಟ್ ಆಗಿ ಇರುವಂತೆ ಹೇಳಿದ್ದೇನೆಂದು ಕೆಲವರು ಹೇಳಿದ್ದಾರೆ. ನಾನ್ಯಾಕೇ ಇಂಥದ್ದೆಲ್ಲ ಮಾಡಲಿ ಹೇಳಿ?’ ಎಂದು ಕೇಳಿದರು.

‘ಮುನಿರತ್ನ ವಿರುದ್ಧದ ಪ್ರಕರಣವನ್ನು ಎಸ್ಐಟಿಗೆ ವಹಿಸಬೇಕು’ ಎಂಬ ಒತ್ತಾಯ ಕೇಳಿಬಂದಿರುವ ಕುರಿತು ಪ್ರತಿಕ್ರಿಯಿಸಿದ ಎಚ್‌ಡಿಕೆ, ‘ಎಸ್ಐಟಿಯು ಸಿದ್ದರಾಮಯ್ಯ, ಶಿವಕುಮಾರ್ ತನಿಖಾ ಸಂಸ್ಥೆ ಇದ್ದಂತೆ. ಅದು ಮಾಡುವುದು ತನಿಖೆಯಲ್ಲ; ಇವರ ಗುಲಾಮಗಿರಿಯಷ್ಟೆ. ಯಾವನೋ ಸುಬ್ರಹ್ಮಣ್ಯೇಶ್ವರ ರಾವ್ ಅಂತೆ. ಅವನ ಮೂಲಕವೂ ನನ್ನ ಮೇಲೆ ತನಿಖೆ ಮಾಡಿಸುತ್ತಾರಂತೆ. ನಾನ ಯಾರ ಮೇಲಿನ ಎಸ್ಐಟಿ ತನಿಖೆ ಬಗ್ಗೆಯೂ ಮಾತನಾಡುವುದಿಲ್ಲ. ಅದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬುದು ಜನರಿಗೆ ಗೊತ್ತಾಗಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT