ನವದೆಹಲಿ: ದೆಹಲಿಯ ಎಂಟನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಎಎಪಿ ನಾಯಕಿ ಆತಿಶಿ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಗೌರವಾರ್ಥವಾಗಿ ಅವರು ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನು ಖಾಲಿ ಬಿಟ್ಟಿದ್ದಾರೆ. ಅವರಿಗೆ ಮೀಸಲಿದ್ದ ಖುರ್ಚಿ ಬದಲಿಗೆ ಮತ್ತೊಂದು ಖರ್ಚಿ ಬಳಸಿದ್ದಾರೆ.
‘ದೆಹಲಿಯ ಜನರು ನನ್ನನ್ನು ಪ್ರಾಮಾಣಿಕ ಎಂದು ನಿರ್ಧರಿಸುವವರೆಗೂ ನಾನು ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಅವರು(ಕೇಜ್ರಿವಾಲ್) ಹೇಳಿದ್ದಾರೆ. ಚುನಾವಣೆ ಹತ್ತಿರದಲ್ಲಿಯೇ ಇದೆ. ಜನರು ಕೇಜ್ರಿವಾಲ್ ಅವರನ್ನು ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆಯಿದೆ. ಅಲ್ಲಿಯವರೆಗೆ ಈ ಕುರ್ಚಿ ಅವರಿಗಾಗಿ ಕಾಯುತ್ತಿರುತ್ತದೆ’ ಎಂದು ಅಧಿಕಾರ ವಹಿಸಿಕೊಂಡ ತರುವಾಯ ಆತಿಶಿ ಹೇಳಿದ್ದಾರೆ.
‘ಇಂದು ದೆಹಲಿಯ ಮುಖ್ಯಮಂತ್ರಿಯಾಗಿ ನಾನು ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ತನ್ನ ಅಣ್ಣ ರಾಮ 14 ವರ್ಷಗಳ ವನವಾಸ ಕೈಗೊಂಡ ಸಂದರ್ಭ ಭರತ ಅನುಭವಿಸಿದ ನೋವನ್ನೇ ನಾನು ಇಂದು ಅನುಭವಿಸುತ್ತಿದ್ದೇನೆ. ರಾಮನ ಚಪ್ಪಲಿಯನ್ನು ಇಟ್ಟುಕೊಂಡು ಅಯೋಧ್ಯೆಯನ್ನು 14 ವರ್ಷಗಳ ಕಾಲ ಭರತ ಆಳಿದಂತೆಯೇ, ನಾನು ದೆಹಲಿ ಸರ್ಕಾರವನ್ನು 4 ತಿಂಗಳು ನಡೆಸುತ್ತೇನೆ’ ಎಂದು ಆತಿಶಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಆತಿಶಿ ಅವರ ಈ ನಡೆಯನ್ನು ಖಂಡಿಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ರಾಜಕೀಯ ನಾಟಕ ಎಂದು ಆರೋಪಿಸಿದ್ದಾರೆ.
‘ದೆಹಲಿಯ ಈ ನಾಟಕ ಇಲ್ಲಿಗೆ ನಿಲ್ಲಬೇಕು. ಇಂದು ಆತಿಶಿ ಅವರು ಮುಖ್ಯಮಂತ್ರಿ ಕುರ್ಚಿಯ ಪಕ್ಕದಲ್ಲಿ ಇನ್ನೊಂದು ಕುರ್ಚಿಯನ್ನು ಖಾಲಿಯಿಟ್ಟು ಅಧಿಕಾರ ವಹಿಸಿಕೊಂಡರು. ಅಂದರೆ ನಿಜವಾದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಗಿದ್ದು, ಆತಿಶಿ ದೆಹಲಿ ಸರ್ಕಾರದ ಮನಮೋಹನ್ ಸಿಂಗ್ ಆಗಿದ್ದಾರೆ. ಆ ಮೂಲಕ ಬಾಬಾ ಸಾಹೇಬರ ಸಂವಿಧಾನವನ್ನು ಅಪಹಾಸ್ಯ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
आज मैंने दिल्ली के मुख्यमंत्री की ज़िम्मेदारी सँभाली है। आज मेरे मन में वो ही व्यथा है जो भरत के मन में थी जब उनके बड़े भाई भगवान श्री राम 14 साल के वनवास पर गए थे, और भरत जी को अयोध्या का शासन सँभालना पड़ा था। जैसे भरत ने 14 साल भगवान श्री राम की खड़ाऊँ रख कर अयोध्या का शासन… pic.twitter.com/OkNEgtYIq4
— Atishi (@AtishiAAP) September 23, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.