ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೈತ್ ಅಗ್ನಿ ದುರಂತ: ಭಾರತ ತಲುಪಿದ 45 ಮೃತದೇಹ

ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಹೃದಯ ವಿದ್ರಾವಕ ಸನ್ನಿವೇಶ; ಮೃತರಿಗೆ ಗಣ್ಯರ ನಮನ
Published 14 ಜೂನ್ 2024, 16:06 IST
Last Updated 14 ಜೂನ್ 2024, 16:06 IST
ಅಕ್ಷರ ಗಾತ್ರ

ಕೊಚ್ಚಿ/ತಿರುವನಂತಪುರಂ/ದೆಹಲಿ: ಕುವೈತ್ ಅಗ್ನಿ ಅವಘಡದಲ್ಲಿ ಮೃತಪಟ್ಟ 45 ಭಾರತೀಯರ ಮೃತದೇಹಗಳನ್ನು ಶುಕ್ರವಾರ ಕೇರಳಕ್ಕೆ ತರಲಾಯಿತು.

45 ಮೃತದೇಹಗಳನ್ನು ಹೊತ್ತ ವಿಶೇಷ ವಿಮಾನವು ಬೆಳಗ್ಗೆ 10.30ಕ್ಕೆ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು. ಈ ಪೈಕಿ ಕೇರಳದ 23, ತಮಿಳುನಾಡಿನ 7 ಮತ್ತು ಕರ್ನಾಟಕದ ಒಬ್ಬರ ಮೃತದೇಹಗಳನ್ನು ಕೊಚ್ಚಿ ನಿಲ್ದಾಣದಲ್ಲಿಯೇ ಇಳಿಸಲಾಯಿತು. ಉಳಿದ 14 ಮೃತದೇಹಗಳನ್ನು ಅದೇ ವಿಮಾನದಲ್ಲಿ ದೆಹಲಿಗೆ ಕೊಂಡೊಯ್ಯಲಾಯಿತು. ಈ ಪ್ರಕ್ರಿಯೆಯ ಉಸ್ತುವಾರಿ ವಹಿಸಿದ್ದ ವಿದೇಶಾಂಗ ಖಾತೆಯ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್, ಅವರೂ ಜೊತೆಗಿದ್ದರು    

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಸಂಪುಟ ಸಹೋದ್ಯೋಗಿಗಳು, ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ಕೇಂದ್ರ ಸಚಿವ ಸುರೇಶ್ ಗೋಪಿ, ತಮಿಳುನಾಡಿನ ಸಚಿವ ಗಿಂಗೀ ಎಸ್.ಮಸ್ತಾನ್ ಮುಂತಾದವರು ಈ ವೇಳೆ ಹಾಜರಿದ್ದು, ಮೃತದೇಹಗಳಿಗೆ ಅಂತಿಮ ನಮನ ಸಲ್ಲಿಸಿದರು. ಮೃತರಿಗೆ ಕೇರಳ ಪೊಲೀಸರು ಗೌರವ ನಮನ ಸಲ್ಲಿಸಿದರು.  

ಶುಕ್ರವಾರ ಬೆಳಿಗ್ಗೆ ಕೊಚ್ಚಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಡುಬಂದ ದೃಶ್ಯ ಹೃದಯ ವಿದ್ರಾವಕವಾಗಿತ್ತು. ದೂರದ ದೇಶದಲ್ಲಿ ಕೆಲಸ ಮಾಡಲು ಹೋಗಿ ಮೃತದೇಹಗಳಾಗಿ ಬಂದವರನ್ನು ಕೊನೆಯ ಬಾರಿಗೆ ನೋಡಲು ಕುಟುಂಬಸ್ಥರು ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದಿದ್ದರು. ಎಲ್ಲರ ಮುಖದಲ್ಲೂ ಶೋಕ ಮಡುಗಟ್ಟಿತ್ತು.

ಮಲ್ಲಪ್ಪಲ್ಲಿಯ ಸಿಬಿನ್ ಇಬ್ರಾಹಿಂ ಶವ ಪೆಟ್ಟಿಗೆಯ ಸುತ್ತ ತನ್ನ ಬಾಹುಗಳನ್ನು ಚಾಚಿ ಅವರ ತಂದೆ ಕಣ್ಣೀರುಗರೆದರು. ಚೆಂಗಾನೂರಿನ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದು ದುಃಖವನ್ನು ದುಪ್ಪಟ್ಟುಗೊಳಿಸಿತ್ತು. ಮ್ಯಾಥ್ಯೂ ಥಾಮಸ್ (53) ಮತ್ತು ಶಿಬು ವರ್ಗೀಸ್ (30) ಅಗ್ನಿ ಅವಘಢದಲ್ಲಿ ಸಾವನ್ನಪ್ಪಿದ್ದಾರೆ. ಶಿಬು ಎನ್‌ಬಿಟಿಸಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು, ಮ್ಯಾಥ್ಯೂ ಅದೇ ಕಂಪನಿಯ ಬೇರೊಂದು ವಿಭಾಗದಲ್ಲಿದ್ದರು. 

14 ಮಂದಿಯ ಮೃತದೇಹಗಳನ್ನು ಹೊತ್ತಿದ್ದ ಸೇನಾ ವಿಮಾನವು ಸಂಜೆ ದೆಹಲಿ ಮುಟ್ಟಿತು. ವಿಮಾನ ನಿಲ್ದಾಣದಲ್ಲಿ ಮೃತದೇಹಗಳನ್ನು ವಿಮಾನದಿಂದ ಕೆಳಗಿಳಿಸುವಾಗ ಸಂಸದರಾದ ಯೋಗೇಂದರ್ ಚಂದೋಲಿಯಾ ಮತ್ತು ಕಮಲ್‌ಜಿತ್ ಶೆರಾವತ್ ಅವರು ಕೈಮುಗಿದು ಗೌರವ ಸಲ್ಲಿಸಿದರು.

ಇನ್ನಿಬ್ಬರು ಮಲಯಾಳಿಗಳು ಅವಘಡದಲ್ಲಿ ಮೃತರಾಗಿದ್ದಾರೆ ಎಂದು ವರದಿಯಾಗಿದೆ. ಆದರೆ, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ.

ಕುಸಿದ ಕುಟುಂಬದ ಆಧಾರ
ಹೋಷಿಯಾರ್‌ಪುರ(ಪಂಜಾಬ್): ಕುವೈತ್‌ನ ಮಂಗಾಫ್‌ನಲ್ಲಿ ನಡೆದ ಅಗ್ನಿ ಅವಘಢದಲ್ಲಿ ಮೃತರಾದ ಭಾರತೀಯರಲ್ಲಿ ಪಂಜಾಬ್‌ನ ಹೋಷಿಯಾರ್‌ಪುರದ ಹಿಮ್ಮತ್ ರಾಯ್ (62) ಒಬ್ಬರಾಗಿದ್ದಾರೆ. ಕುಟುಂಬಕ್ಕೆ ಏಕೈಕ ಆಧಾರವಾಗಿದ್ದ ಅವರ ಸಾವಿನಿಂದ ಪತ್ನಿ ಮತ್ತು ಮಕ್ಕಳು ಕಂಗೆಟ್ಟಿದ್ದಾರೆ. ರಾಯ್ ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಆಗಿದ್ದು ಮಗ 10ನೇ ತರಗತಿ ಓದುತ್ತಿದ್ದಾನೆ. 30 ವರ್ಷಗಳ ಹಿಂದೆ ಕುವೈತ್‌ಗೆ ಹೋಗಿದ್ದ ಹಿಮ್ಮತ್ ರಾಯ್ ಅಲ್ಲಿನ ತಯಾರಿಕಾ ಘಟಕವೊಂದರಲ್ಲಿ ಕೆಲಸ ಮಾಡುತ್ತಿದ್ದರು.   ಇದುವರೆಗೂ ತಮಗೆ ಎನ್‌ಬಿಟಿಸಿ ಕಂಪನಿಯಿಂದಾಗಲಿ ಅಥವಾ ಕುವೈತ್ ಸರ್ಕಾರದಿಂದಾಗಲಿ ಪರಿಹಾರದ ಭರವಸೆ ಸಿಕ್ಕಿಲ್ಲ. ಪರಿಹಾರ ಕೊಟ್ಟರೆ ತಮ್ಮ ಜೀವನಕ್ಕೆ ಅನುಕೂಲವಾಗಲಿದೆ ಎಂದು ರಾಯ್ ಕುಟುಂಬ ತಿಳಿಸಿದೆ.
ಪೊಲೀಸ್ ಬೆಂಗಾವಲಿನಲ್ಲಿ ಮೃತದೇಹ ರವಾನೆ
ತಮ್ಮ ಪ್ರೀತಿಪಾತ್ರರ ಪ್ರಾಣಕ್ಕೆ ಎರವಾದ ಅವಘಢ ಹೇಗೆ ನಡೆಯಿತು ಎನ್ನುವುದರ ಪೂರ್ಣ ಮಾಹಿತಿ ಹೆಚ್ಚಿನ ಕುಟುಂಬಗಳಿಗೆ ಇನ್ನೂ ಲಭ್ಯವಾಗಿಲ್ಲ. ಮೃತದೇಹಗಳನ್ನು ಪೊಲೀಸರ ಬೆಂಗಾವಲಿನೊಂದಿಗೆ ಮೃತರ ಊರುಗಳಿಗೆ ಆಂಬುಲೆನ್ಸ್‌ಗಳಲ್ಲಿ ಸಾಗಿಸಲು ವ್ಯವಸ್ಥೆ ಮಾಡಲಾಗಿತ್ತು. ತಮಿಳುನಾಡಿನ ಏಳು ಆಂಬುಲೆನ್ಸ್‌ಗಳು ರಾಜ್ಯದ ಗಡಿ ದಾಟುವವರೆಗೆ ಕೇರಳ ಪೊಲೀಸರು ಬೆಂಗಾವಲಾಗಿದ್ದರು.  ಅವಘಢದಲ್ಲಿ ಮೃತರಾದ ಒಬ್ಬರು ಕರ್ನಾಟಕದ ಕಲಬುರಗಿ ಮೂಲದವರಾಗಿದ್ದು ಅವರ ಮೃತದೇಹವನ್ನು  ಹೈದರಾಬಾದ್‌ಗೆ ವಿಮಾನದಲ್ಲಿ ಕೊಂಡೊಯ್ಯಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಆಂಬುಲೆನ್ಸ್‌ನಲ್ಲಿ ಅವರ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಿಂದ ಹಿಂದಿರುಗಿದ ದಿನವೇ ಸಾವು
ಅಮರಾವತಿ (ಪಿಟಿಐ): ಕುವೈತ್‌ನಲ್ಲಿ ನಡೆದ ಅಗ್ನಿ ಅವಘಢದಲ್ಲಿ ಮೃತಪಟ್ಟವರಲ್ಲಿ ಆಂಧ್ರಪ್ರದೇಶದ ಮೂವರು ವಲಸೆ ಕಾರ್ಮಿಕರು ಸೇರಿದ್ದಾರೆ ಎಂದು ಆಂಧ್ರಪ್ರದೇಶದ ಅನಿವಾಸಿಗಳ ತೆಲುಗು ಸಂಘ (ಎಪಿಎನ್‌ಆರ್‌ಟಿಎಸ್) ಮಾಹಿತಿ ನೀಡಿದೆ. ಶ್ರೀಕಾಕುಳಂ ಜಿಲ್ಲೆಯ ಟಿ.ಲೋಕನಂದಂ ಪಶ್ಚಿಮ ಗೋದಾವರಿ ಜಿಲ್ಲೆಯ ಎಂ.ಸತ್ಯನಾರಾಯಣ ಮತ್ತು ಎಂ.ಈಶ್ವರುಡು ಮೃತಪಟ್ಟಿದ್ದಾರೆ. ಇತ್ತೀಚೆಗೆ ಚುನಾವಣೆ ಮತ್ತು ಇತರ ಕಾರ್ಯಗಳ ನಿಮಿತ್ತ ಸ್ವಗ್ರಾಮ ಸೋಮಪೇಟಕ್ಕೆ ಬಂದಿದ್ದ ಲೋಕನಂದಂ ಕೆಲ ದಿನ ಊರಿನಲ್ಲಿಯೇ ಇದ್ದರು. ನಂತರ ಜೂನ್ ಐದರಂದು ಹೈದರಾಬಾದ್‌ಗೆ ತೆರಳಿದ್ದರು. ಅಲ್ಲಿ ನಾಲ್ಕು ದಿನ ಕಳೆದು ಜೂನ್ 11ರಂದು ಕುವೈತ್‌ ತಲುಪಿದ್ದರು. ಭಾರತದಿಂದ ಕುವೈತ್‌ಗೆ ಹಿಂದಿರುಗಿದ ದಿನದಂದೇ ಅವರು ಅವಘಡದಲ್ಲಿ ಸಾವನ್ನಪ್ಪಿದ್ದಾರೆ. ಮನೆಗೆ ಆಧಾರವಾಗಿದ್ದ ಲೋಕನಂದಂ ಸಾವಿನಿಂದಾಗಿ ಅವರ ಕುಟುಂಬ ಶೋಕದಲ್ಲಿ ಮುಳುಗಿದೆ.
ಅನುಮತಿ ನಿರಾಕರಣೆ: ಕೇಂದ್ರದ ಕ್ರಮಕ್ಕೆ ಆಕ್ಷೇಪ
ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಕುವೈತ್‌ಗೆ ತೆರಳಲು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರಿಗೆ ಅನುಮತಿ ನಿರಾಕರಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಟೀಕಿಸಿವೆ. ಆದರೆ ಕೇಂದ್ರ ಸರ್ಕಾರದ ಕ್ರಮವನ್ನು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಮರ್ಥಿಸಿಕೊಂಡಿದ್ದಾರೆ. ‘ಕುವೈತ್‌ಗೆ ತೆರಳಿ ಅಲ್ಲಿ ದುರಂತದಲ್ಲಿ ಸಿಲುಕಿದ ನಮ್ಮ ಜನರಿಗೆ ನೆರವಾಗಲು ನಾವು ಕೇಂದ್ರ ಸರ್ಕಾರದಿಂದ ಅನುಮತಿ ಬಯಸಿದ್ದೆವು’ ಎಂದು ಗುರುವಾರ ರಾತ್ರಿ ವೀಣಾ ಜಾರ್ಜ್ ಹೇಳಿದ್ದರು. ಅದಕ್ಕೆ ಕೇಂದ್ರ ಅನುಮತಿ ನೀಡರಲಿಲ್ಲ. ‘ಅದು ಕೇಂದ್ರದ ತಪ್ಪು ನಿರ್ಧಾರ’ ಎಂದು ಪಿಣರಾಯಿ ಟೀಕಿಸಿದ್ದಾರೆ. ‘ಮೃತದೇಹಗಳನ್ನು ಶುಕ್ರವಾರ ಭಾರತಕ್ಕೆ ತರಲಾಗಿದೆ. ಗುರುವಾರ ಅಲ್ಲಿಗೆ ಹೋಗಿ ವೀಣಾ ಜಾರ್ಜ್ ಅವರು ಏನು ಮಾಡುತ್ತಿದ್ದರು’ ಎಂದು ಆರಿಫ್ ಮೊಹಮ್ಮದ್ ಖಾನ್ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT