ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆ ಫಲಿತಾಂಶ ಭಾರಿ ಕುತೂಹಲ ಕೆರಳಿಸಿದೆ.
ಆರಂಭಿಕ ಟ್ರೆಂಡ್ ಪ್ರಕಾರ ಕಾಂಗ್ರೆಸ್ ಮುನ್ನಡೆ ಗಳಿಸಿತ್ತು. ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮಯಾಚರಣೆ ಕೂಡ ಆರಂಭವಾಗಿತ್ತು. ಆದರೆ ಕೆಲವೇ ಹೊತ್ತಿನಲ್ಲಿ ಟ್ರೆಂಡ್ ಬದಲಾಗಿದ್ದು, ಬಿಜೆಪಿ ಮುನ್ನಡೆ ಗಳಿಸಿದೆ.
ಆ ಮೂಲಕ ಹಾವು-ಏಣಿಯಾಟ ಮುಂದುವರಿದಿದೆ. ಚುನಾವಣಾ ಆಯೋಗದ ತಾಜಾ ವರದಿಯ ಪ್ರಕಾರ ಬಿಜೆಪಿ 46, ಕಾಂಗ್ರೆಸ್ 37 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಸರ್ಕಾರ ರಚಿಸುವ ವಿಶ್ವಾಸದಲ್ಲಿ ಭೂಪಿಂದರ್ ಹೂಡಾ...
ಏತನ್ಮಧ್ಯೆ ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವ ವಿಶ್ವಾಸವನ್ನು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ವ್ಯಕ್ತಪಡಿಸಿದ್ದಾರೆ.
'ಈಗಿನ ಟ್ರೆಂಡ್ ಪ್ರಕಾರ ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ. ಸಿಎಂ ಅಭ್ಯರ್ಥಿಯನ್ನು ಹೈಕಮಾಂಡ್ ನಿರ್ಧರಿಸಲಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಅತ್ಯುತ್ತಮ ಸಾಧನೆಗೆ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಇತರೆ ನಾಯಕರು ಮತ್ತು ರಾಜ್ಯದ ಜನರಿಗೆ ಅಭಿನಂದನೆ ಸಲ್ಲಬೇಕು' ಎಂದು ಹೇಳಿದ್ದಾರೆ.