ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಭೂಮಿ ತುಂಬಿದೆ, ಹೊಣೆ ಹೆಚ್ಚಿದೆ

Published 10 ಜುಲೈ 2024, 23:12 IST
Last Updated 10 ಜುಲೈ 2024, 23:12 IST
ಅಕ್ಷರ ಗಾತ್ರ

1990ರ ಜುಲೈ 11ರಿಂದ ಪ್ರತಿವರ್ಷ ವಿಶ್ವಸಂಸ್ಥೆಯ ನೇತೃತ್ವದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ನಡೆದುಬಂದಿದೆ. ವಿಶ್ವಸಂಸ್ಥೆಯ ಜನಸಂಖ್ಯಾ ಕ್ರಿಯಾಯೋಜನೆಗಾಗಿ ಹುಟ್ಟುಹಾಕಿದ ಅಂತರರಾಷ್ಟ್ರೀಯ ಜನಸಂಖ್ಯೆ ಮತ್ತು ಅಭಿವೃದ್ಧಿ ಒಕ್ಕೂಟದ 30ನೇ ವಾರ್ಷಿಕೋತ್ಸವವೂ ಈ ಬಾರಿ ಇದರ ಜೊತೆಗೂಡಿದೆ. ಈ ಕ್ರಿಯಾಯೋಜನೆಯ ಕೇಂದ್ರದಲ್ಲಿರುವುದು ಸುಸ್ಥಿರ ಅಭಿವೃದ್ಧಿ, ಜನಸಂಖ್ಯಾ ನಿಯಂತ್ರಣಕ್ಕೆ, ವಂಶಾಭಿವೃದ್ಧಿ ಹಾಗೂ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಹಿಳೆಯರು ಹೊಂದಿರುವ ಹಕ್ಕುಗಳು ಎನ್ನುವುದು ಗಮನಾರ್ಹ ಸಂಗತಿ.

ತಾಯಂದಿರ ಮರಣ ಪ್ರಮಾಣದಲ್ಲಿ 2000ನೇ ಇಸವಿಯಿಂದೀಚೆಗೆ ಶೇಕಡ 34ರಷ್ಟು ಇಳಿಕೆಯಾಗಿದೆ. ಮಹಿಳೆಯರಿಗೆ ಹಿಂದೆಂದಿಗಿಂತ ಇಂದು ಗರ್ಭ ನಿರೋಧಕಗಳ ಬಳಕೆಯ ಅವಕಾಶ ಹೆಚ್ಚಿದೆ. ಆದರೆ ಈ ಪ್ರಗತಿ ಎಲ್ಲೆಡೆಯೂ ಸಮಾನ ಎನ್ನುವಂತಿಲ್ಲ. ಪೌಷ್ಟಿಕ ಆಹಾರದ ಕೊರತೆ, ಹಸಿವಿನ ಸಮಸ್ಯೆ ವ್ಯಾಪಕವಾಗಿಯೇ ಇವೆ. ಇವುಗಳ ಬಗೆಗಿನ ಅಂಕಿ-ಅಂಶಗಳು ಸಮರ್ಪಕವಾಗಿಲ್ಲ. ಅಂದರೆ ನಿಜ ಸ್ಥಿತಿ ಏನಿದೆ ಎಂಬುದು ನಮಗೆ ತಿಳಿಯದು. ಹಾಗಾಗಿ ಈ ಬಾರಿಯ ಜನಸಂಖ್ಯಾ ದಿನ, ದತ್ತಾಂಶವನ್ನು ಕಲೆ ಹಾಕುವುದು, ಆ ಮೂಲಕ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ರೂಪಿಸುವುದರ ಮಹತ್ವದ ಬಗ್ಗೆ ನಮ್ಮ ಗಮನ ಸೆಳೆಯುತ್ತದೆ.

ನಮಗೀಗ ಒಂದು ಭೂಮಿ ಸಾಲದು! ಈಗ ಭೂಮಿಯು 800 ಕೋಟಿ ಜನರ ಹೊಣೆ ಹೊತ್ತಿದೆ! ಭೂಮಿ ತುಂಬಿದೆ, ನಮ್ಮಿಂದ, ನಮ್ಮ ವಸ್ತುಗಳಿಂದ, ನಮ್ಮ ಬೇಡಿಕೆಗಳಿಂದ, ನಾವು ಸೃಷ್ಟಿಸುವ ತ್ಯಾಜ್ಯದಿಂದ ತುಂಬಿದೆ. ನಮಗೀಗ ಮಾನವ ಸಂಬಂಧಗಳಾಗಲೀ ನಾವಿರುವ ಭೂಮಿಯಾಗಲೀ ಆದ್ಯತೆಯ ಸಂಗತಿಗಳಾಗಿ ಉಳಿದಿಲ್ಲ; ಆರ್ಥಿಕತೆಯೊಂದೇ ಆದ್ಯತೆ!

ಮೇಧಾವಿ ವಿಜ್ಞಾನಿಗಳ ತಂಡವೊಂದು ಏನೆಂದು ಲೆಕ್ಕಹಾಕಿದೆ ಗೊತ್ತೇ? ನಮಗೀಗ ಒಂದೂವರೆ ಭೂಮಿ ಬೇಕಂತೆ! ಅಂದರೆ ನಾವು ಈಗ ಇರುವಂತೆಯೇ ಮುಂದುವರಿದೆವು ಎನ್ನಿ, ನಮಗೆ ಹೆಚ್ಚುವರಿಯಾಗಿ ಇನ್ನೂ ಅರ್ಧ ಭೂಮಿ ಬೇಕು! ಸಾಮಾನ್ಯವಾಗಿ, ವಿಜ್ಞಾನಿಗಳು ಹೀಗೆಲ್ಲ ವಿವರಿಸಿದಾಗ, ನಾವು ಮುಖ ತಿರುವುತ್ತೇವೆ. ಸ್ವಲ್ಪ ಸೂಕ್ಷ್ಮ ಮನಸ್ಸಿರುವವರು, ‘ಹೋಗಲಿ, ಹೀಗಾಗುವುದು ನಾನು ಬದುಕಿರು
ವಾಗಲಂತೂ ಅಲ್ಲವಲ್ಲ. ಮಕ್ಕಳ ಕಾಲಕ್ಕೆ ಎಲ್ಲರಿಗೂ ಆಗುವಂಥದ್ದು ನಮಗೂ ಆಗುತ್ತದೆ’ ಎಂದು ಸಮಾಧಾನಪಟ್ಟುಕೊಳ್ಳುತ್ತಾರೆ. 

ಕಂಪನಿಯೊಂದು ದಿವಾಳಿಯಾಗಬಹುದಾದ ಸನ್ನಿವೇಶವನ್ನು ಊಹಿಸಿ, ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಯೋಚಿಸಿ ನೋಡಿ. ಅಥವಾ ಪ್ರಾಣಾಪಾಯ ತರಬಲ್ಲ ಕಾಯಿಲೆ ತನಗಿದೆ ಎಂದಾಗ ವ್ಯಕ್ತಿಯೊಬ್ಬ ತನ್ನ ಜೀವನಶೈಲಿಯಲ್ಲಿ ಹಠಾತ್ತನೆ ತಂದುಕೊಳ್ಳುವ ಬದಲಾವಣೆಗಳನ್ನು ಕಲ್ಪಿಸಿಕೊಳ್ಳಿ. ಅಂದರೆ ಭವಿಷ್ಯದ ಬಗ್ಗೆ, ಭೂಮಿಯ ಭವಿಷ್ಯಕ್ಕಿಂತ ನಮ್ಮದೇ ಭವಿಷ್ಯದ ಬಗ್ಗೆ ನಮಗೆ ಒಂದಿಷ್ಟು ಭಯ, ತಕ್ಷಣ ಕೆಲಸಕ್ಕೆ ತೊಡಗುವಂತೆ ಮಾಡುವ ಭಯ ಬೇಕೇ ಬೇಕು. ಈ ಭಯ ನಾವು ಮಾಡಬೇಕಿರುವ ಎಲ್ಲಕ್ಕೂ ವಿಸ್ತರಿಸಬೇಕು. ಜನಸಂಖ್ಯೆಯ ಹೆಚ್ಚಳದಲ್ಲಿ ಆರೋಗ್ಯದ ಪಾತ್ರ ಬಹು ಕುತೂಹಲಕರವಾದದ್ದು. ಲಿಂಗತಾರತಮ್ಯದ ಧೋರಣೆಗಳೂ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಈ ಹಿಂದೆ ಯುವಜನರಲ್ಲಿ ಗರ್ಭನಿರೋಧಕಗಳ ಬಳಕೆಯ ಬಗೆಗಿನ ಧೋರಣೆಗಳನ್ನು ಸಂಶೋಧನಾ ತಂಡವೊಂದು ಅಧ್ಯಯನ ಮಾಡಿತ್ತು. ಗರ್ಭನಿರೋಧಕಗಳ ಬಳಕೆಯ ಬಗ್ಗೆ ಇದ್ದ ಸಂಕೋಚ, ಮಾಹಿತಿ ಪಡೆಯಲು ಹಿಂಜರಿಕೆ, ಅಜ್ಞಾನ, ತಪ್ಪು ಕಲ್ಪನೆಗಳು ವಿಜ್ಞಾನದ ಪದವಿಯ ವಿದ್ಯಾರ್ಥಿಗಳಲ್ಲಿಯೂ ಇದ್ದವು. ‘ಗರ್ಭ ಧರಿಸುವಿಕೆ ಹೆಣ್ಣಿನ ಹೊಣೆ, ಅಂದಮೇಲೆ ಗರ್ಭನಿರೋಧಕಗಳ ಬಳಕೆಯೂ ಆಕೆಯದೇ ಜವಾಬ್ದಾರಿ’ ಎಂಬ ನಂಬಿಕೆ ಗಂಡು-ಹೆಣ್ಣು ಮಕ್ಕಳಲ್ಲಿ ಇಬ್ಬರಲ್ಲಿಯೂ ವ್ಯಾಪಕವಾಗಿ ಇತ್ತು. ಗರ್ಭನಿರೋಧಕಗಳ ಬಳಕೆ, ಗರ್ಭನಿರೋಧಕ ಶಸ್ತ್ರಚಿಕಿತ್ಸೆಯು ಲೈಂಗಿಕ ಕ್ರಿಯೆಯ ಆನಂದವನ್ನು ಕಡಿಮೆ ಮಾಡುತ್ತವೆ ಮತ್ತು ಪುರುಷನಿಗಂತೂ ಅದು ಸ್ವೀಕಾರಾರ್ಹವಲ್ಲ ಎಂಬ ತಪ್ಪು ಕಲ್ಪನೆಯನ್ನು ಅಧ್ಯಯನದಲ್ಲಿ ಪಾಲ್ಗೊಂಡ ಶೇಕಡ 80ರಷ್ಟು ಯುವಜನರು ವ್ಯಕ್ತಪಡಿಸಿದರು.

ಹ್ಯಾನ್ಸ್ ರೋಸ್‌ಲಿಂಗ್ ಎಂಬ ಜನಸಂಖ್ಯಾ ವಿಜ್ಞಾನಿ ‘ಶಿಶು ಮರಣದ ಇಳಿಕೆ ಹೊಸ ಹಸಿರು’ ಎನ್ನುತ್ತಾನೆ. ಮಕ್ಕಳ ಮರಣ ಪ್ರಮಾಣ ತಗ್ಗಿದರೆ ಜನಸಂಖ್ಯೆ ಹೆಚ್ಚುತ್ತದೆ; ಜನರು ಹೆಚ್ಚಿದಷ್ಟೂ ಪರಿಸರ ಹಾಳಾಗುತ್ತದೆ ಎಂದಲ್ಲವೇ ನಮಗನ್ನಿಸುವುದು? ಆದರೆ ಜನಸಂಖ್ಯೆಯ ವಿಜ್ಞಾನದ ಪ್ರಕಾರ ಇದು ಪೂರ್ತಿ ಉಲ್ಟಾ. ಮಕ್ಕಳು ಬದುಕುಳಿಯುವುದು ಬಡತನ-ಜನಸಂಖ್ಯೆ ಎರಡರ ನಿಯಂತ್ರಣಕ್ಕೂ ಬಹು ಮುಖ್ಯವಾಗುತ್ತದೆ. ಮಕ್ಕಳ ಸಾವಿಗೆ ಹೆದರುವ ಬಡ ಕುಟುಂಬಗಳು ಹೆಚ್ಚು ಮಕ್ಕಳನ್ನು ಹೊಂದುತ್ತವೆ. ಇದರಿಂದಲೇ ಜನಸಂಖ್ಯೆ ಏರುತ್ತದೆ. ಬಡತನ ಹೆಚ್ಚುತ್ತದೆ. ಮತ್ತೆ ಗರ್ಭನಿರೋಧಕಗಳ ಬಳಕೆಗೂ ಇಲ್ಲಿ ಕೊಂಡಿ ಏರ್ಪಡುತ್ತದೆ.

ಆರೋಗ್ಯವಂತ ಮಕ್ಕಳು ಆರೋಗ್ಯಕರ ಭೂಮಿಯನ್ನು ಸೃಷ್ಟಿಸಬಲ್ಲರು. ಅದರ ಅರ್ಥ ಪರಿಸರಕ್ಕಾಗಿ ಮಾತ್ರ ಮಕ್ಕಳನ್ನು ಉಳಿಸಬೇಕು ಅಂತಲ್ಲ! ಪ್ರತಿ ಮಗುವಿಗೂ ಇರುವ ಜೀವಿಸುವ ಹಕ್ಕಿಗಾಗಿ ನಾವು ಅವರನ್ನು ಉಳಿಸಬೇಕು. 800 ಕೋಟಿ ಜನಸಂಖ್ಯೆಯು ತಾನು ಮಾಡಬಹುದಾದ ಕಾರ್ಯದಿಂದಲೂ ದೊಡ್ಡದಾಗಬೇಕು. ಆರೋಗ್ಯಕರ ತನು, ಬೇಕಾದಷ್ಟೇ ಧನ, ಉದಾರ ಮನದಿಂದ ಈ ಸಂಖ್ಯೆಯು ಭವಿಷ್ಯವನ್ನು ಕಾಪಾಡಿಕೊಳ್ಳಬೇಕು.

⇒ಲೇಖಕಿ: ಮನೋವೈದ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT