ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Budget Analysis: ಕೃಷಿ, ಗ್ರಾಮೀಣಾಭಿವೃದ್ಧಿಗೆ ಆದ್ಯತೆ

ವಿಲಾಸ್‌ ಜಾಧವ್‌
Published 1 ಫೆಬ್ರುವರಿ 2024, 23:30 IST
Last Updated 1 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ದೇಶದ ಸಮಗ್ರ ಬೆಳವಣಿಗೆಗೆ ಅಗತ್ಯವಿರುವ ಮೂಲಸೌಕರ್ಯಗಳಿಗೆ ಅದರಲ್ಲೂ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ಸಿಕ್ಕಿದೆ ಎನ್ನಬಹುದು. 

ಮೊದಲನೆಯದಾಗಿ ಯುವಜನರು, ಎರಡನೆ ಯದಾಗಿ ರೈತ ಮಹಿಳೆಯರು ಅಥವಾ ಸಾಮಾನ್ಯ ಮಹಿಳೆಯರು, ಮೂರನೆಯದಾಗಿ ರೈತರು, ಕಡಿಮೆ ಆದಾಯದ ಅಥವಾ ರಾಷ್ಟ್ರದ ಕಟ್ಟ ಕಡೆಯ ಜನರಾದ ಕಡುಬಡವರ ಬದುಕು ಹಸನಾಗಿಸಲು ಹೆಚ್ಚಿನ ಗಮನ ಕೊಟ್ಟಿರುವುದು ಕಾಣಿಸುತ್ತಿದೆ. ‌

ರೈತರು ಇವತ್ತಿನವರೆಗೂ ಬಿತ್ತನೆಯಿಂದ ಬೆಳೆ ತೆಗೆಯುವುದಕ್ಕಷ್ಟೇ ಸೀಮಿತವಾಗಿದ್ದಾರೆ. ಬೆಳೆ ಬೆಳೆಯವುದು ಅದನ್ನು ಹೇಗೋ ಮಾರಾಟ ಮಾಡಿ ಕೈತೊಳೆದುಕೊಳ್ಳುವುದಷ್ಟೇ ಅವರ ಆದ್ಯತೆಯಾಗಿದೆ. ಬೆಳೆಯ ಮೌಲ್ಯ ವರ್ಧನೆಗೆ ಗಮನವನ್ನೇ ಕೊಡುವುದಿಲ್ಲ. ಆದರೆ, ಈ ಬಜೆಟ್‌ನಲ್ಲಿ ಕೃಷಿ ಬೆಳೆಗಳ ಮೌಲ್ಯವರ್ಧನೆ ಗಾಗಿ ಹೆಚ್ಚಿನ ಪ್ರೋತ್ಸಾಹದ ಕ್ರಮಗಳನ್ನು ಸರ್ಕಾರ ಪ್ರಕಟಿಸಿದೆ. ಕೃಷಿ ಉತ್ಪನ್ನಗಳ ಸಂಸ್ಕರಣೆ, ಗ್ರೇಡಿಂಗ್‌, ಬ್ರ್ಯಾಂಡಿಂಗ್‌ಗೆ ವಿಶೇಷ ಯೋಜನೆಗಳನ್ನು ರೂಪಿಸಿದೆ. 

ದೇಶದ 142 ಕೋಟಿ ಜನರಲ್ಲಿ ಸುಮಾರು 65 ಕೋಟಿ ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಅರ್ಧದಷ್ಟು ಜನರು ಯುವ ರೈತರು. ಇವರು ಬೆಳೆ ಬೆಳೆಯಲಷ್ಟೇ ಸೀಮಿತರಾಗಿ, ಅದು ಒಂದು ಋತುವಿಗೆ ಮಾತ್ರ ಭೂಮಿ ಉಳಿಮೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಈಗ ಪ್ರಕಟಿಸಿರುವ ಉತ್ತೇಜನಕಾರಿ ಕ್ರಮಗಳಾದ ಕೊಯ್ಲೋತ್ತರ ಚಟುವಟಿಕೆ (ಪೋಸ್ಟ್‌ ಹಾರ್ವೆಸ್ಟಿಂಗ್‌), ಸಂಸ್ಕರಣೆ, ಗ್ರೇಡಿಂಗ್‌, ಬ್ರ್ಯಾಂಡಿಂಗ್‌ ಹಾಗೂ ಮೌಲ್ಯ ವರ್ಧನೆಯ ಚಟುವಟಿಕೆಗಳು ಈ ಯುವ ರೈತರನ್ನು ವರ್ಷ ಪೂರ್ತಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಲಿವೆ. ಇವು ರೈತರ ಆದಾಯವನ್ನು ದ್ವಿಗುಣ ಮಾಡಲು ಕೂಡ ನೆರವಾಗಲಿವೆ. 

ಈಗಾಗಲೇ ಕೃಷಿಯಲ್ಲಿ ನ್ಯಾನೊ ಯೂರಿಯಾವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತಿದೆ. ಉತ್ತಮ ಫಲಿತಾಂಶ ಕೂಡ ಸಿಕ್ಕಿದೆ. ಇದೇ ಮಾದರಿಯಲ್ಲಿ ನ್ಯಾನೊ ಡಿಎಪಿ ಪರಿಚಯಿಸುತ್ತಿರುವುದು ಮತ್ತೊಂದು ಪ್ರಮುಖ ಬೆಳವಣಿಗೆ. ಇದು ಉತ್ತಮ ಹೆಜ್ಜೆ ಎನ್ನುವುದು ನಿಸ್ಸಂಶಯ. ನ್ಯಾನೊ ಡಿಎಪಿ ಬಳಕೆಯು ಪರಿಸರದ ಮೇಲಿನ ಹಾನಿ ತಗ್ಗಿಸಲಿದೆ. ಕೃಷಿ ಉತ್ಪಾದನೆ, ಇಳುವರಿ ಹೆಚ್ಚಿಸಲು ನೆರವಾಗಲಿದೆ. ನ್ಯಾನೊ ಡಿಎಪಿ ಕೃಷಿ ವಲಯಕ್ಕೆ ಒಂದು ದೊಡ್ಡ ಬೂಮ್‌ ಆಗಲಿದೆ.

ಇನ್ನು, ಕೃಷಿ ಕ್ಷೇತ್ರದಲ್ಲಿ ಇಡೀ ದೇಶದ‌ಲ್ಲೇ ಅತಿ ಕಡಿಮೆ ಇಳುವರಿಯ ಬೆಳೆಗಳೆಂದರೆ ಎಣ್ಣೆಕಾಳುಗಳು. ಇವತ್ತಿಗೂ ನಾವು ಎಣ್ಣೆಕಾಳುಗಳಲ್ಲಿ ಸ್ವಾವಲಂಬನೆ ಸಾಧಿಸಿಲ್ಲ, ಎಣ್ಣೆಕಾಳುಗಳಿಂದ ತಯಾರಿಸಿದ ಎಣ್ಣೆಯನ್ನು ಇವತ್ತಿಗೂ ಆಮದು ಮಾಡಿಕೊಳ್ಳುತ್ತಿ ದ್ದೇವೆ. ಇಳುವರಿ ಕುಂಠಿತ ಸಮಸ್ಯೆ ನೀಗಿಸುವ ಸಲುವಾಗಿ ಆತ್ಮನಿರ್ಭರ ಭಾರತ ಯೋಜನೆಯಡಿ ಹೆಚ್ಚು ಇಳುವರಿಯ ಎಳ್ಳೆಕಾಳುಗಳ ಸಂಶೋಧನೆಗೂ ಅವಕಾಶ ಕಲ್ಪಿಸಲಾಗಿದೆ. ಕೃಷಿಯೇತರವೆಂದು ಪರಿಗಣಿಸಿರುವ ಮತ್ತೊಂದು ಪ್ರಮುಖ ವಲಯವೆಂದರೆ ಹೈನುಗಾರಿಕೆ. ಒಟ್ಟು ಹಾಲು ಉತ್ಪಾದನೆಯಲ್ಲಿ ನಾವು ವಿಶ್ವದಲ್ಲೇ ಮುಂದಿದ್ದೇವೆ. ಆದರೆ, ಇಳುವರಿ ವಿಚಾರದಲ್ಲಿ ತುಂಬಾ ಹಿಂದಿದ್ದೇವೆ. ಕಡಿಮೆ ಇಳುವರಿ ನೀಡುವ ರಾಸುಗಳ ಸಂಖ್ಯೆ ದೇಶದಲ್ಲಿ ಹೆಚ್ಚಿದೆ. ಹಾಗಾಗಿ ಹಾಲು ಉತ್ಪಾದನೆಯಲ್ಲಿ ಹೆಚ್ಚು ಇಳುವರಿ ಸಾಧಿಸಲು ಪೂರಕ ಯೋಜನೆಗಳನ್ನು ಸಹ ಪ್ರಸ್ತಾಪಿಸಿರುವುದು ಉತ್ತಮ ಬೆಳವಣಿಗೆ. 

ಹೈನುಗಾರಿಕೆ ಜತೆಗೆ ಮೀನುಗಾರಿಕೆಗೂ ಈ ಬಾರಿ ಉತ್ತೇಜನ ಸಿಕ್ಕಿದೆ. ಮೀನು ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು ಹಾಗೂ ಈ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗಾಗಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಪ್ರಕಟಿಸಿರುವುದು ಮಹತ್ವದ ಹೆಜ್ಜೆಯೇ ಸರಿ. ರೈತರಿಗೆ ಕೃಷಿ ಹೊಂಡಗಳಲ್ಲಿ ಮೀನು ಸಾಕಲು ಬೇಕಾದ ಸೂಕ್ತ ತರಬೇತಿ ಮತ್ತು ಸೌಲಭ್ಯಗಳು ಇದರಡಿ ಸಿಗಲಿವೆ. 

ಆಹಾರ ಸಂಸ್ಕರಣಾ ವಲಯದಲ್ಲಿ ಎಂಎಸ್‌ ಎಂಇಗಳಿಗೂ ಹೆಚ್ಚಿನ ಅನುದಾನ ಸಿಕ್ಕಿದೆ. ರೈತ ಮಹಿಳೆಯರನ್ನು ಒಳಗೊಂಡಂತೆ ಒಂದು ಕೋಟಿ ಮಹಿಳೆಯರನ್ನು ಲಕ್ಷಾಧೀಶೆಯರನ್ನಾಗಿಸುವ ಯೋಜನೆ, ಪಿಎಂ ಕಿಸಾನ್‌ ಯೋಜನೆಯಡಿ ರೈತರಿಗೆ ನೇರ ನಗದು ವರ್ಗಾವಣೆ ಇವೆಲ್ಲವೂ ಗ್ರಾಮೀಣಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ.  

ವಿಶ್ವದ ಆರ್ಥಿಕತೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧಿಸಲಾಗದ್ದನ್ನು ಕೃಷಿ ಕ್ಷೇತ್ರದಲ್ಲಿ ಸಾಧಿಸುತ್ತಿರುವುದನ್ನು ನೋಡುತ್ತಿದ್ದೇವೆ. ಕೋವಿಡ್‌ ಕಾಲದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಪ್ರಗತಿ ಇಳಿಮುಖವಾದರೆ, ಕೃಷಿ ಕ್ಷೇತ್ರ ಇಳಿಮುಖ ಕಾಣಲಿಲ್ಲ. ನಾವು ಕೃಷಿ ಕ್ಷೇತ್ರದಲ್ಲಿ ಯಶಸ್ಸು ಕಂಡಿದ್ದೇವೆ. ಆದರೆ, 90ರ ದಶಕದಲ್ಲಿ ಈ ಕ್ಷೇತ್ರದಲ್ಲಿ ಹೂಡಿಕೆ ಯಾವ ಪ್ರಮಾಣದಲ್ಲಿತ್ತೋ ಅದಕ್ಕಿಂತ ಶೇ 10ರಷ್ಟು ಮಾತ್ರ ಹೆಚ್ಚಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಹೂಡಿಕೆ ಹೆಚ್ಚುತ್ತಿಲ್ಲ. ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸವಾಲು, ಸಮಸ್ಯೆಗಳು ಇವತ್ತಿಗೂ ಇವೆ. ಅವುಗಳನ್ನು ನಿವಾರಿಸಲು ಸಂಪೂರ್ಣ ಅಲ್ಲದಿದ್ದರೂ ಸಮಾಧಾನಕರ, ಉತ್ತೇಜನ ಕ್ರಮಗಳು ಬಜೆಟ್‌ನಲ್ಲಿ ಘೋಷಣೆಯಾಗಿವೆ. ಬೇರೆಲ್ಲಾ ಕ್ಷೇತ್ರಗಳಿಗೆ ಹೋಲಿಸಿ ನೋಡಿದಾಗ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಬಂಪರ್‌ ಅಲ್ಲದಿದ್ದರೂ ಒಂದಿಷ್ಟು ಸಮಾಧಾನಕರ, ತೃಪ್ತಿಕರ ಪಾಲು ಸಿಕ್ಕಿದೆ. ಈ ಕ್ಷೇತ್ರಗಳಿಗೆ ಇದೊಂದು ಸಮಗ್ರ, ಅಭಿವೃದ್ಧಿ ಕೇಂದ್ರಿತ ಬಜೆಟ್‌ ಆಗಿದೆ.  

ಸಹಾಯಕ ಪ್ರಾಧ್ಯಾಪಕ, ಐಸೆಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT